ಜೀ ಕನ್ನಡ ನ್ಯೂಸ್ ವಾಹಿನಿಯು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 50 ಯುವ ಸಾಧಕರನ್ನು ಗುರುತಿಸಿ ಯುವರತ್ನ ಅವಾರ್ಡ್ 2025 ಪ್ರದಾನ ಮಾಡಿತು. ಜುಲೈ 9, 2025 ರಂದು ಬೆಂಗಳೂರಿನ ಪ್ರತಿಷ್ಠಿತ ಫೋರ್ ಸೀಸನ್ಸ್ ಹೋಟೆಲ್ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಉದ್ಯಮ, ಕಲೆ, ಕ್ರೀಡೆ, ಆರೋಗ್ಯ, ಕೃಷಿ, ಸಮಾಜ ಸೇವೆ, ರಾಜಕಾರಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸಿದ ಯುವ ಪ್ರತಿಭೆಗಳನ್ನು ಸನ್ಮಾನಿಸಲಾಯಿತು.
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಕಾರ್ಯಕ್ರಮದಲ್ಲಿ ಗಣ್ಯ ಉಪಸ್ಥಿತಿ ವಹಿಸಿ, ಯುವ ಸಾಧಕರ ಸೇವೆಯನ್ನು ಕೊಂಡಾಡಿದರು. “ಪ್ರತಿ ವರ್ಷವೂ ಜೀ ಕನ್ನಡ ನ್ಯೂಸ್ ರಾಜ್ಯದ ಎಲೆಮರೆಯ ಕಾಯಿಯಂತಿರುವ ಪ್ರಾಮಾಣಿಕ ಮತ್ತು ಕೌಶಲ್ಯಪೂರ್ಣ ಸಾಧಕರನ್ನು ಗುರುತಿಸಿ ಗೌರವಿಸುತ್ತಿದೆ. ಇದು ಇತರ ಯುವಕರಿಗೆ ಪ್ರೇರಣೆಯಾಗಲಿದೆ. ನಾವೆಲ್ಲರೂ ಒಗ್ಗಟ್ಟಾಗಿ, ಸೌಹಾರ್ದಯುತವಾಗಿ ಬದುಕಬೇಕು. ದೇವರು ಎಲ್ಲರಿಗೂ ಒಂದೇ,” ಎಂದು ಸೌಹಾರ್ದತೆಯ ಸಂದೇಶ ನೀಡಿದರು.

ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, “ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ನಾವು ಮುಂದೆ ಬರಬಹುದು. ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತದ ಕನಸು ನನಸಾಗುತ್ತಿದೆ. ಭಾರತದ ಆರ್ಥಿಕತೆ ಈಗ ವಿಶ್ವದಲ್ಲಿ 4ನೇ ಸ್ಥಾನದಲ್ಲಿದೆ. ಯುವಕರ ಸಾಧನೆಯಿಂದ ಚೀನಾ ಮತ್ತು ಅಮೆರಿಕಾವನ್ನೂ ಹಿಂದಿಕ್ಕುವ ಕಾಲ ದೂರವಿಲ್ಲ,” ಎಂದು ಯುವರತ್ನಗಳನ್ನು ಹುರಿದುಂಬಿಸಿದರು.
ಕಾರ್ಯಕ್ರಮದ ಸಮಾರೋಪ ಭಾಷಣದಲ್ಲಿ ಜೀ ಕನ್ನಡ ನ್ಯೂಸ್ನ ಪ್ರಧಾನ ಸಂಪಾದಕ ರವಿ ಎಸ್., “50 ಯುವರತ್ನಗಳ ಸಾಧನೆಯನ್ನು ಗುರುತಿಸಿ, ಕನ್ನಡದ ಮಣ್ಣಿನ ಪ್ರತಿಭೆಗಳನ್ನು ರಾಜ್ಯಕ್ಕೆ ಪರಿಚಯಿಸಿದ್ದೇವೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಗೌರವಿಸುವ ಕಾರ್ಯಕ್ರಮವನ್ನು ಮುಂದುವರಿಸುತ್ತೇವೆ,” ಎಂದರು.







