ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅಖಲ್ ದೇವಸರ್ನ ದಟ್ಟ ಅರಣ್ಯ ಪ್ರದೇಶದಲ್ಲಿ ಭಾರೀ ಶಸ್ತ್ರಸಜ್ಜಿತ ಉಗ್ರಗಾಮಿಗಳೊಂದಿಗೆ ನಡೆಯುತ್ತಿರುವ ಎನ್ಕೌಂಟರ್ ಆಗಸ್ಟ್ 9ರಂದು 9ನೇ ದಿನಕ್ಕೆ ಕಾಲಿಟ್ಟಿದೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಭಾರತೀಯ ಸೈನಿಕರು, ಲ್ಯಾನ್ಸ್ ನಾಯಕ್ ಪ್ರೀತ್ಪಾಲ್ ಸಿಂಗ್ ಮತ್ತು ಸಿಪಾಯಿ ಹರ್ಮಿಂದರ್ ಸಿಂಗ್, ಶುಕ್ರವಾರ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾಗಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರ ರಾಜ್ಯದಲ್ಲಿ ನಡೆದ ಅತಿ ದೀರ್ಘ ಉಗ್ರವಿರೋಧಿ ಕಾರ್ಯಾಚರಣೆಗಳಲ್ಲಿ ಒಂದಾಗಿದೆ.
ಈ ಕಾರ್ಯಾಚರಣೆ, ಆಪರೇಷನ್ ಅಖಲ್ ಎಂದು ಕರೆಯಲ್ಪಟ್ಟದ್ದು, ಆಗಸ್ಟ್ 1ರಿಂಧ ಆರಂಭವಾಗಿದೆ. ಕುಲ್ಗಾಮ್ನ ಅಖಲ್ ಪ್ರದೇಶದಲ್ಲಿ ಉಗ್ರಗಾಮಿಗಳ ಇರುವಿಕೆಯ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಮತ್ತು ವಿಶೇಷ ಕಾರ್ಯಾಚರಣಾ ಗುಂಪು (SOG) ಜಂಟಿಯಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಈ ಎನ್ಕೌಂಟರ್ನಲ್ಲಿ ಇದುವರೆಗೆ ಒಬ್ಬ ಉಗ್ರಗಾಮಿಯನ್ನು ಹತ್ಯೆ ಮಾಡಲಾಗಿದೆ ಎಂದು ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ದೃಢಪಡಿಸಿದೆ, ಆದರೆ ಕೆಲವು ಮೂಲಗಳ ಪ್ರಕಾರ ಒಟ್ಟು ಐದು ಉಗ್ರಗಾಮಿಗಳನ್ನು ಗುಂಡಿನ ಚಕಮಕಿಯಲ್ಲಿ ಕೊಲ್ಲಲಾಗಿದೆ ಎಂದು ವರದಿಯಾಗಿದೆ, ಆದರೂ ಈ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲ.
ಹುತಾತ್ಮರಾದ ಸೈನಿಕರಾದ ಲ್ಯಾನ್ಸ್ ನಾಯಕ್ ಪ್ರೀತ್ಪಾಲ್ ಸಿಂಗ್ ಮತ್ತು ಸಿಪಾಯಿ ಹರ್ಮಿಂದರ್ ಸಿಂಗ್ ಅವರ ಧೈರ್ಯ ಮತ್ತು ತ್ಯಾಗವನ್ನು ಚಿನಾರ್ ಕಾರ್ಪ್ಸ್ ಸಾಮಾಜಿಕ ಜಾಲಾತಾಣ ಏಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, “ಚಿನಾರ್ ಕಾರ್ಪ್ಸ್ ರಾಷ್ಟ್ರದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಈ ಶೂರರನ್ನು ಗೌರವಿಸುತ್ತದೆ. ಅವರ ಧೈರ್ಯ ಮತ್ತು ಸಮರ್ಪಣೆಯು ನಮಗೆ ಶಾಶ್ವತವಾಗಿ ಸ್ಫೂರ್ತಿಯಾಗಿದೆ. ಭಾರತೀಯ ಸೇನೆಯು ಮೃತರ ಕುಟುಂಬಗಳೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತದೆ” ಎಂದು ತಿಳಿಸಿದೆ.
ಇದನ್ನೂ ಓದಿ | ಜಮ್ಮು ಕಾಶ್ಮೀರ ರಾಜ್ಯ ಸ್ಥಾನಮಾನ ಮರುಕಲ್ಪನೆ: ಆಗಸ್ಟ್ 8ಕ್ಕೆ ವಿಚಾರಣೆ
ಈ ಎನ್ಕೌಂಟರ್ನಲ್ಲಿ ಒಟ್ಟು 11 ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ, ಇವರಲ್ಲಿ ಶುಕ್ರವಾರ ರಾತ್ರಿ ಗಾಯಗೊಂಡ ಇಬ್ಬರು ಸೈನಿಕರು ಗಂಭೀರ ಸ್ಥಿತಿಯಲ್ಲಿದ್ದರು. ಆಗಸ್ಟ್ 1ರಂದು ಆರಂಭವಾದ ಕಾರ್ಯಾಚರಣೆಯ ಮೊದಲ ಎರಡು ದಿನಗಳಲ್ಲಿ ಇಬ್ಬರು ಉಗ್ರಗಾಮಿಗಳನ್ನು ಕೊಲ್ಲಲಾಗಿತ್ತು, ಆದರೆ ಅವರ ಗುರುತು ಮತ್ತು ಗುಂಪಿನ ಸಂಬಂಧವನ್ನು ಇನ್ನೂ ದೃಢಪಡಿಸಲಾಗಿಲ್ಲ. ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ನಳಿನ್ ಪ್ರಭಾತ್ ಮತ್ತು ಉತ್ತರ ಕಮಾಂಡ್ನ ಲೆಫ್ಟಿನೆಂಟ್ ಜನರಲ್ ಪ್ರತಿಕ್ ಶರ್ಮಾ ಈ ಕಾರ್ಯಾಚರಣೆಯನ್ನು ಸತತವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.







