ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಮತ್ತು ‘ಇಂಕ್ವಿಲಾಬ್ ಮಂಚ್’ನ ಸಂಚಾಲಕ ಷರೀಫ್ ಉಸ್ಮಾನ್ ಹಾದಿ ಅವರ ಹತ್ಯೆಯು ದೇಶದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಹತ್ಯೆಯ ಬೆನ್ನಲ್ಲೇ ಮೃತ ನಾಯಕನ ಸಹೋದರ ಶರೀಫ್ ಒಮರ್ ಬಿನ್ ಹಾದಿ ಅವರು ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ವಿರುದ್ಧ ನೇರ ಆರೋಪ ಮಾಡಿದ್ದು, “ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಹಳಿ ತಪ್ಪಿಸಲು ಸರ್ಕಾರವೇ ಈ ಕೃತ್ಯ ಎಸಗಿದೆ” ಎಂದು ಬಾಂಬ್ ಸಿಡಿಸಿದ್ದಾರೆ.
ಷರೀಫ್ ಉಸ್ಮಾನ್ ಹಾದಿ ಅವರು 2024ರ ಶೇಖ್ ಹಸೀನಾ ವಿರುದ್ಧದ ವಿದ್ಯಾರ್ಥಿ ಹೋರಾಟದ ಪ್ರಮುಖರಲ್ಲಿ ಒಬ್ಬರಾಗಿದ್ದರು. ಮುಂಬರುವ 2026ರ ಫೆಬ್ರವರಿ 12ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಅಭ್ಯರ್ಥಿಯಾಗಿದ್ದರು. ಡಿಸೆಂಬರ್ 12 ರಂದು ಢಾಕಾದ ಒಂದು ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಮುಸುಕುಧಾರಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 18 ರಂದು ಅವರು ಮೃತಪಟ್ಟರು.
ಸರ್ಕಾರದ ವಿರುದ್ಧದ ಆರೋಪವೇನು?
ಢಾಕಾದ ಶಾಬಾಗ್ನಲ್ಲಿ ನಡೆದ ‘ಶಹೀದಿ ಶಪಥ್’ (ಹುತಾತ್ಮರ ಪ್ರತಿಜ್ಞೆ) ಕಾರ್ಯಕ್ರಮದಲ್ಲಿ ಮಾತನಾಡಿದ ಮೃತರ ಸಹೋದರ ಒಮರ್ ಹಾದಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ. “ನೀವೇ ಹಾದಿಯನ್ನು ಕೊಲೆ ಮಾಡಿಸಿದ್ದೀರಿ. ಈಗ ಈ ವಿಷಯವನ್ನು ಬಳಸಿಕೊಂಡು ಚುನಾವಣೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದೀರಿ,” ಎಂದು ಅವರು ಯೂನಸ್ ಸರ್ಕಾರದ ವಿರುದ್ಧ ಗುಡುಗಿದರು.
“ನನ್ನ ಸಹೋದರ ಫೆಬ್ರವರಿಯಲ್ಲಿ ಚುನಾವಣೆ ನಡೆಯಲೇಬೇಕು ಎಂದು ಪಟ್ಟು ಹಿಡಿದಿದ್ದನು ಮತ್ತು ಅದಕ್ಕಾಗಿ ತಯಾರಿ ನಡೆಸುತ್ತಿದ್ದನು. ಅವನು ಯಾವುದೇ ವಿದೇಶಿ ಶಕ್ತಿಗಳಿಗೆ ಅಥವಾ ಏಜೆನ್ಸಿಗಳಿಗೆ ತಲೆಬಾಗಲಿಲ್ಲ ಎಂಬ ಕಾರಣಕ್ಕೆ ಅವನನ್ನು ಮುಗಿಸಲಾಗಿದೆ,” ಎಂದು ಒಮರ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, “ಒಂದು ವೇಳೆ ಹಾದಿ ಹತ್ಯೆಗೆ ನ್ಯಾಯ ಸಿಗದಿದ್ದರೆ, ಶೇಖ್ ಹಸೀನಾ ದೇಶ ಬಿಟ್ಟು ಓಡಿಹೋದಂತೆ, ನೀವೂ (ಯೂನಸ್ ಮತ್ತು ಅವರ ಸಂಪುಟ) ಮುಂದೊಂದು ದಿನ ಬಾಂಗ್ಲಾದೇಶದಿಂದ ಪಲಾಯನ ಮಾಡಬೇಕಾಗುತ್ತದೆ,” ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | ಬಾಂಗ್ಲಾದಲ್ಲಿ ಹಿಂದೂ ವ್ಯಕ್ತಿಯ ಬರ್ಬರ ಹತ್ಯೆ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಗುಟೆರಸ್ ಕಳವಳ!
ಚುನಾವಣೆ ಮತ್ತು ರಾಜಕೀಯ ಲೆಕ್ಕಾಚಾರ
ಬಾಂಗ್ಲಾದೇಶದಲ್ಲಿ 2026ರ ಫೆಬ್ರವರಿ 12ರಂದು ಸಾರ್ವತ್ರಿಕ ಚುನಾವಣೆ ನಿಗದಿಯಾಗಿದೆ. ಹಾದಿ ಹತ್ಯೆಯು ಈ ಚುನಾವಣೆಯ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ. ಹಾದಿ ಕುಟುಂಬದ ಆರೋಪದ ಪ್ರಕಾರ, ಪ್ರಸ್ತುತ ಅಧಿಕಾರದಲ್ಲಿರುವವರು ಅಧಿಕಾರ ಬಿಟ್ಟುಕೊಡಲು ಇಷ್ಟಪಡುತ್ತಿಲ್ಲ ಅಥವಾ ಚುನಾವಣೆ ನಡೆದರೆ ತಮಗೆ ಹಿನ್ನಡೆಯಾಗಬಹುದು ಎಂಬ ಭಯದಿಂದ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ.
ಬಾಂಗ್ಲಾ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ಹಾದಿ ಹತ್ಯೆಯನ್ನು ಖಂಡಿಸಿದ್ದು, ಇದು “ಚುನಾವಣೆಯನ್ನು ಹಳಿ ತಪ್ಪಿಸಲು ಪಿತೂರಿಗಾರರು ನಡೆಸಿದ ಕೃತ್ಯ” ಎಂದು ಹೇಳಿದ್ದಾರೆ. ಆದರೆ ಅವರು ಈ ಆರೋಪವನ್ನು ವಿರೋಧಿಗಳು ಅಥವಾ ಪದಚ್ಯುತಗೊಂಡ ಶೇಖ್ ಹಸೀನಾ ಬೆಂಬಲಿಗರ ಕಡೆಗೆ ಬೊಟ್ಟು ಮಾಡಿದ್ದಾರೆ. ಹಂತಕರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದು, ತನಿಖೆ ಚುರುಕುಗೊಂಡಿದೆ ಎಂದು ಸರ್ಕಾರ ಹೇಳಿದೆ.







