ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ವರುಣನ ಆರ್ಭಟದಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದು, ರಸ್ತೆಗಳೆಲ್ಲವೂ ನದಿಯಂತೆ ಕಾಣುತ್ತಿದ್ದವು. ವಾಹನ ಸವಾರರು ತೀವ್ರ ತೊಂದರೆಗೆ ಸಿಲುಕಿಕೊಂಡಿದ್ದು, ಟ್ರಾಫಿಕ್ನಲ್ಲಿ ಗಂಟೆಗಟ್ಟಲೆ ಕಾಯುವಂತಾಗಿದೆ. ಇದರ ನಡುವೆ ಊಬರ್ ಇಂಡಿಯಾ ಕಂಪನಿಯು ಬೆಂಗಳೂರಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಾಸ್ಯತ್ಮಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದೆ. ಈ ಪೋಸ್ಟ್ನಲ್ಲಿ ಬೆಂಗಳೂರಿನಲ್ಲಿ ಟ್ಯಾಕ್ಸಿಗಳ ಬದಲಿಗೆ “ಟೈಟಾನಿಕ್ ಬೋಟ್” ಸೇವೆ ಲಭ್ಯವಿದೆ ಎಂದು ತಿಳಿಸಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಊಬರ್ ಇಂಡಿಯಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ಪೋಸ್ಟ್ನಲ್ಲಿ, ಬೆಂಗಳೂರಿನ ರಸ್ತೆಗಳಲ್ಲಿ ತುಂಬಿರುವ ನೀರಿನ ಮೇಲೆ ಟೈಟಾನಿಕ್ ಬೋಟ್ನ ಚಿತ್ರವನ್ನು ತೋರಿಸಲಾಗಿದೆ. ಕೇವಲ ಒಂದು ನಿಮಿಷದಲ್ಲಿ 149 ರೂಪಾಯಿಗೆ ಈ “ಟೈಟಾನಿಕ್ ಬೋಟ್” ಸೇವೆ ಲಭ್ಯವಿದೆ ಎಂದು ಹಾಸ್ಯತ್ಮಕವಾಗಿ ತೋರಿಸಿದ್ದಾರೆ. ಈ ಪೋಸ್ಟ್ನ ಹಾಸ್ಯದ ಸ್ವರೂಪವು ಬೆಂಗಳೂರಿನ ಪ್ರಸ್ತುತ ಮಳೆಯ ಸಮಸ್ಯೆಯನ್ನು ಗೇಲಿಮಾಡುವಂತಿದ್ದು, ಇದು ಜನರ ಗಮನವನ್ನು ಸೆಳೆದಿದೆ. ಈ ಜೋಕ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ವಿಭಿನ್ನ ರೀತಿಯ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಊಬರ್ನ ಈ ಸೃಜನಶೀಲತೆಯನ್ನು ಮೆಚ್ಚಿಕೊಂಡಿದ್ದರೆ, ಇನ್ನು ಕೆಲವರು ಬೆಂಗಳೂರಿನ ರಸ್ತೆಗಳ ದುಸ್ಥಿತಿಯ ಬಗ್ಗೆ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ.
“ಬೆಂಗಳೂರಿನ ರಸ್ತೆಗಳು ಈಗ ಸಮುದ್ರವಾಗಿವೆ, ಊಬರ್ಗೆ ಬೋಟ್ ಸೇವೆ ಶುರುಮಾಡಲೇ ಬೇಕು!” ಎಂದು ಒಬ್ಬ ಬಳಕೆದಾರ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, “ಟೈಟಾನಿಕ್ ಬೋಟ್ಗಿಂತ ಒಳ್ಳೆ ರಸ್ತೆಗಳನ್ನು ಸರಿಪಡಿಸುವುದು ಮುಖ್ಯ” ಎಂದು ಗಂಭೀರವಾಗಿ ಟೀಕಿಸಿದ್ದಾರೆ. ಕೆಲವರು ಈ ಪೋಸ್ಟ್ನ್ನು “ಬೆಂಗಳೂರಿನ ನಿಜವಾದ ಚಿತ್ರಣ” ಎಂದು ಕರೆದರೆ, ಇತರರು “ಊಬರ್ನ ಮಾರ್ಕೆಟಿಂಗ್ ತಂತ್ರ ಗಮನಾರ್ಹ” ಎಂದು ಮೆಚ್ಚಿಕೊಂಡಿದ್ದಾರೆ. “ಬೆಂಗಳೂರಿನಲ್ಲಿ ಈಗ ಬೋಟ್ಗಿಂತ ಬೇರೆ ಆಯ್ಕೆ ಇಲ್ಲ” ಎಂದು ಕೆಲವರು ಹಾಸ್ಯದಿಂದ ಬರೆದರೆ, “ನಗರದ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು” ಎಂದು ಇತರರು ಒತ್ತಾಯಿಸಿದ್ದಾರೆ.
ಊಬರ್ನ ಈ ತಮಾಷೆಯ ಪೋಸ್ಟ್ ಬೆಂಗಳೂರಿನ ಪ್ರಸ್ತುತ ಸ್ಥಿತಿಯನ್ನು ಗಮನಕ್ಕೆ ತಂದಿದೆ. ಇದು ಒಂದೆಡೆ ಜನರನ್ನು ನಗೆಗಡಲಲ್ಲಿ ತೇಲಿಸಿದರೆ, ಮತ್ತೊಂದೆಡೆ ನಗರದ ಮೂಲಸೌಕರ್ಯದ ಕೊರತೆಯ ಬಗ್ಗೆ ಗಂಭೀರ ಚರ್ಚೆಗೆ ದಾರಿಮಾಡಿಕೊಟ್ಟಿದೆ.







