ಅಹಮದಾಬಾದ್: ಗುಜರಾತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ (AI171), ಗುರುವಾರ ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ಬಿ.ಜೆ. ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಪತನಗೊಂಡಿತ್ತು. ಈ ದುರಂತದಲ್ಲಿ 270ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ವಿಮಾನದ ತನಿಖೆಗೆ ನಿರ್ಣಾಯಕವಾದ ಎರಡನೇ ಬ್ಲ್ಯಾಕ್ ಬಾಕ್ಸ್ ಭಾನುವಾರ ಪತ್ತೆಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹಿರಿಯ ಸಹಾಯಕ ಪಿ.ಕೆ. ಮಿಶ್ರಾ ತಿಳಿಸಿದ್ದಾರೆ.
ವಿಮಾನದಲ್ಲಿ ಎರಡು ಬ್ಲ್ಯಾಕ್ ಬಾಕ್ಸ್ಗಳಿವೆ: ಫೈಟ್ ಡೇಟಾ ರೆಕಾರ್ಡರ್ (ಎಫ್ಡಿಆರ್) ಮತ್ತು ಕಾಕ್ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್). ಎಫ್ಡಿಆರ್ ಶುಕ್ರವಾರ ವಿಮಾನದ ಅವಶೇಷಗಳ ಮಧ್ಯೆ, ಕಟ್ಟಡದ ಮಾಳಿಗೆಯ ಮೇಲೆ ಪತ್ತೆಯಾಗಿತ್ತು. ಇದೀಗ ಸಿವಿಆರ್ ಭಾನುವಾರ ಪತ್ತೆಯಾಗಿದ್ದು, ತನಿಖೆಗೆ ಮಹತ್ವದ ಹೆಜ್ಜೆಯಾಗಿದೆ. ಈ ಎರಡೂ ರೆಕಾರ್ಡರ್ಗಳು ದುರಂತದ ಕಾರಣವನ್ನು ತಿಳಿಯಲು ನಿರ್ಣಾಯಕ ಸಾಕ್ಷ್ಯ ಒದಗಿಸಲಿವೆ.
ಎಫ್ಡಿಆರ್ ವಿಮಾನದ ಗತಿವಿಧಿ, ಎಂಜಿನ್ ಕಾರ್ಯಕ್ಷಮತೆ, ಫ್ಲಾಪ್ಗಳ ಸ್ಥಿತಿ ಮತ್ತು ಇತರ ತಾಂತ್ರಿಕ ವಿವರಗಳನ್ನು ದಾಖಲಿಸುತ್ತದೆ. ಸಿವಿಆರ್ ಫೈಲಟ್ಗಳ ಸಂಭಾಷಣೆ, ಎಚ್ಚರಿಕೆ ಶಬ್ದಗಳು ಮತ್ತು ಕಾಕ್ಪಿಟ್ನಲ್ಲಿನ ಇತರ ಆಡಿಯೊ ಡೇಟಾವನ್ನು ದಾಖಲಿಸುತ್ತದೆ. ಈ ಡೇಟಾ ತನಿಖಾಧಿಕಾರಿಗಳಿಗೆ ವಿಮಾನದ ಕೊನೆಯ ಕ್ಷಣಗಳನ್ನು ಮರುನಿರ್ಮಾಣ ಮಾಡಲು ಸಹಾಯ ಮಾಡಲಿದೆ.
ತನಿಖೆಯನ್ನು ಭಾರತದ ಡಿಜಿಎಸಿಎ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಮುನ್ನಡೆಸುತ್ತಿದ್ದು, ಅಮೆರಿಕ ಮತ್ತು ಯುಕೆಯ ತಜ್ಞರ ಸಹಕಾರವನ್ನು ಪಡೆಯಲಾಗಿದೆ. ವಿಮಾನದ ಎಂಜಿನ್, ಫ್ಲಾಪ್ಗಳು, ಲ್ಯಾಂಡಿಂಗ್ ಗೇರ್ ಮತ್ತು ವಿದ್ಯುತ್ ವ್ಯವಸ್ಥೆಯ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಕೆಲವು ವರದಿಗಳ ಪ್ರಕಾರ, ವಿಮಾನ ಟೇಕ್-ಆಫ್ ಸಮಯದಲ್ಲಿ ಗೇರ್ ಡೌನ್ ಆಗಿರುವುದು ಮತ್ತು ಎಂಜಿನ್ ವೈಫಲ್ಯದ ಸಾಧ್ಯತೆಯೂ ಚರ್ಚೆಯಲ್ಲಿದೆ.
ಸಿವಿಲ್ ಏವಿಯೇಷನ್ ಸಚಿವ ರಾಮ್ ಮೋಹನ್ ನಾಯ್ಡು, ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ಮೂರು ತಿಂಗಳ ಒಳಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ.







