ಕರ್ನಾಟಕ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಆಹಾರ ಧಾನ್ಯ ಸಾಗಣೆ ವೆಚ್ಚ, ಸಗಟು ಮತ್ತು ಚಿಲ್ಲರೆ ಲಾಭಾಂಶಕ್ಕಾಗಿ ₹244.10 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಈ ಕ್ರಮದ ಬೆನ್ನಲ್ಲೇ, ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಗುತ್ತಿಗೆದಾರರ ಸಂಘವು ತಮ್ಮ ಮುಷ್ಕರವನ್ನು ವಾಪಸ್ ಪಡೆದಿದ್ದು, ರಾಜ್ಯಾದ್ಯಂತ ಆಹಾರ ಧಾನ್ಯ ಸಾಗಣೆಗೆ ಬಳಸುವ ಲಾರಿಗಳು ಮತ್ತೆ ರಸ್ತೆಗಿಳಿದಿವೆ.
ಅನ್ನಭಾಗ್ಯ ಯೋಜನೆ ಹಾಗೂ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ (ಎನ್ಎಫ್ಎಸ್ಎ) ಯೋಜನೆಗಳಡಿ ಆಹಾರ ಧಾನ್ಯ ಸಾಗಣೆಗೆ ಸಂಬಂಧಿಸಿದ ಬಿಲ್ಗಳನ್ನು ಫೆಬ್ರವರಿಯಿಂದ ಜೂನ್ವರೆಗೆ ಪಾವತಿಸದಿರುವುದನ್ನು ಖಂಡಿಸಿ, ಲಾರಿ ಮಾಲೀಕರು ಜುಲೈ 7ರಿಂದ ರಾಜ್ಯವ್ಯಾಪಿ ಮುಷ್ಕರ ಆರಂಭಿಸಿದ್ದರು. ಇದರಿಂದಾಗಿ, ಪಡಿತರ ಚೀಟಿ ಹೊಂದಿರುವ 4.42 ಕೋಟಿ ಫಲಾನುಭವಿಗಳಿಗೆ ಆಹಾರ ಧಾನ್ಯ ವಿತರಣೆಯಲ್ಲಿ ವ್ಯತ್ಯಯ ಉಂಟಾಗಿತ್ತು.
ಇದನ್ನೂ ಓದಿ | ಅನ್ನಭಾಗ್ಯಕ್ಕೆ ಅಡ್ಡಿ: 4,500 ಲಾರಿ ಮಾಲಕರ ಮುಷ್ಕರ, ಸರಕಾರದ ವಿರುದ್ಧ ಆಕ್ರೋಶ
ಗುತ್ತಿಗೆದಾರರ ಸಂಘದ ಒತ್ತಾಯಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ, ಫೆಬ್ರವರಿಯಿಂದ ಮೇ 2025ರವರೆಗಿನ ಸಾಗಾಣಿಕೆ, ಸಗಟು ಮತ್ತು ಚಿಲ್ಲರೆ ಲಾಭಾಂಶ ವೆಚ್ಚಕ್ಕಾಗಿ ₹244.10 ಕೋಟಿಯನ್ನು ಬಿಡುಗಡೆ ಮಾಡಿತು. ಈ ಅನುದಾನವನ್ನು ಖಜಾನೆ-2 ತಂತ್ರಾಂಶದ ಮೂಲಕ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ನ ಮುಖ್ಯ ಲೆಕ್ಕಾಧಿಕಾರಿಗೆ ವರ್ಗಾಯಿಸಲಾಗಿದೆ. ಜಿಲ್ಲಾಧಿಕಾರಿಗಳ ಮೂಲಕ ಈ ಹಣವನ್ನು ಗುತ್ತಿಗೆದಾರರಿಗೆ ವಿತರಿಸಲಾಗುತ್ತಿದೆ. ಉಳಿದ ಬಾಕಿ ಹಣವನ್ನು 48 ಗಂಟೆಗಳ ಒಳಗೆ ಬಿಡುಗಡೆ ಮಾಡುವ ಭರವಸೆಯನ್ನು ಸರ್ಕಾರ ನೀಡಿದೆ.
ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ, “ಸರ್ಕಾರ ನಮ್ಮ ಬೇಡಿಕೆಗೆ ಕಿವಿಗೊಟ್ಟು ₹244.10 ಕೋಟಿ ಬಿಡುಗಡೆ ಮಾಡಿದೆ. ಈ ಆದೇಶದಿಂದ ಲಾರಿಗಳು ಡಿಪೋಗಳಿಗೆ ತೆರಳಿ ಲೋಡಿಂಗ್ ಕಾರ್ಯ ಆರಂಭಿಸಿವೆ. ಮುಷ್ಕರ ನಡೆಸುವುದು ನಮ್ಮ ಉದ್ದೇಶವಲ್ಲ, ಆದರೆ ಆರ್ಥಿಕ ಸಂಕಷ್ಟದಿಂದ ಈ ಕ್ರಮ ಕೈಗೊಳ್ಳಬೇಕಾಯಿತು,” ಎಂದು ಪ್ರಜಾವಾಣಿಗೆ ತಿಳಿಸಿದ್ದಾರೆ.







