ಬೆಳಗಾವಿಯ ಕಾನೂನು ಸುವ್ಯವಸ್ಥೆ ವಿಭಾಗದ ನೂತನ ಉಪ ಪೊಲೀಸ್ ಆಯುಕ್ತರಾಗಿ (ಡಿಸಿಪಿ) ಆಗಮಿಸಿರುವ ನಾರಾಯಣ ಬರಮಣಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆಯಿಂದ ಆತ್ಮೀಯ ಸ್ವಾಗತವನ್ನು ಕೋರಲಾಯಿತು. ಧಾರವಾಡದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ (ಎಎಸ್ಪಿ) ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದ ಬರಮಣಿ ಅವರಿಗೆ ಈ ಬಡ್ತಿಯನ್ನು ಕರ್ನಾಟಕ ಸರ್ಕಾರವು ಇತ್ತೀಚೆಗೆ ಘೋಷಿಸಿತು. ಧಾರವಾಡದಲ್ಲಿ ಎಎಸ್ಪಿಯಾಗಿ ಸೇವೆ ಸಲ್ಲಿಸಿದ್ದ ಬರಮಣಿ, 2007ರಲ್ಲಿ ಕುಖ್ಯಾತ ರೌಡಿ ಪ್ರವೀಣ್ ಶಿಂತ್ರೆ ಎನ್ಕೌಂಟರ್ನ ನೇತೃತ್ವ ವಹಿಸಿದ್ದರು.
ಬೆಳಗಾವಿಯಲ್ಲಿ ಏಪ್ರಿಲ್ನಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ, ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದ್ದರು. ಈ ಘಟನೆಯ ಸಂದರ್ಭದಲ್ಲಿ, ಭದ್ರತಾ ವ್ಯವಸ್ಥೆಯ ವೈಫಲ್ಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧಾರವಾಡದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ನಾರಾಯಣ ಬರಮಣಿ ಅವರನ್ನು ವೇದಿಕೆಗೆ ಕರೆದು ಸಾರ್ವಜನಿಕವಾಗಿ ಕೈ ಎತ್ತಿ ಹೊಡೆಯಲು ಯತ್ನಿಸಿದ್ದರು. ಈ ಘಟನೆಯಿಂದ ಅವಮಾನಕ್ಕೊಳಗಾದ ಬರಮಣಿ ಅವರು ಸ್ವಯಂ ನಿವೃತ್ತಿಗೆ (ವಿಆರ್ಎಸ್) ಮನವಿ ಸಲ್ಲಿಸಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ದೂರವಾಣಿ ಮೂಲಕ ಮಾತನಾಡಿ, ಉದ್ದೇಶಪೂರ್ವಕವಾಗಿ ಆ ರೀತಿ ವರ್ತಿಸಿಲ್ಲ ಎಂದು ಸಮಾಧಾನಪಡಿಸಿದ್ದರು. ಇದರಿಂದ ಬರಮಣಿ ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದರು.
ಇದನ್ನೂ ಓದಿ | ಶಿಗ್ಗಾವಿಯಲ್ಲಿ ಕರವೇ ಗಜಸೇನೆಯಿಂದ ದ್ವಿಭಾಷಾ ನೀತಿಗೆ ಒತ್ತಾಯ: ತಹಶೀಲ್ದಾರ್ಗೆ ಮನವಿ
ಬರಮಣಿ ಅವರ ಪ್ರತಿಕ್ರಿಯೆ
ನಾರಾಯಣ ಬರಮಣಿ ಅವರು ತಮ್ಮ ವರ್ಗಾವಣೆ ಕುರಿತು ಪ್ರತಿಕ್ರಿಯಿಸಿದ್ದು, “ಸರ್ಕಾರವು ಡಿಸಿಪಿಯಾಗಿ ವರ್ಗಾವಣೆ ಆದೇಶವನ್ನು ಹೊರಡಿಸಿದೆ. ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆಯ ನಿರ್ವಹಣೆಗೆ ಅವಕಾಶವನ್ನು ನೀಡಲಾಗಿದೆ. ಹಿರಿಯ ಅಧಿಕಾರಿಗಳ ಸಲಹೆ-ಸೂಚನೆಗಳನ್ನು ಪಾಲಿಸಿಕೊಂಡು ಕೆಲಸ ಮಾಡುತ್ತೇನೆ” ಎಂದು ಹೇಳಿದ್ದಾರೆ.







