ಜನ ಸೂರಜ್ ಪಕ್ಷದ (JSP) ಸಂಸ್ಥಾಪಕ ಪ್ರಶಾಂತ್ ಕಿಶೋರ್, ಬಿಹಾರದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಿ, ರಾಜ್ಯದ ಜನತೆ ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿಯಿಂದ ಮುಕ್ತರಾಗಲು ಆಶಿಸುತ್ತಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಪೂರ್ವ ಚಂಪಾರಣದ ಲೌರಿಯಾದಲ್ಲಿ ಭಾನುವಾರ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಹಾರದ ಹಿಂದಿನ ಮತ್ತು ಪ್ರಸ್ತುತ ಆಡಳಿತಗಾರರು ರಾಜ್ಯದ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಕಿಶೋರ್, ತಮ್ಮ ಭಾಷಣದಲ್ಲಿ ಮಾತನಾಡುತ್ತಾ, “ನಾನು ಈ ರಸ್ತೆಯಲ್ಲಿ ನಡೆದಿದ್ದೇನೆ. ಈ ರಸ್ತೆಯಲ್ಲಿ ಮೊಣಕಾಲಿನಾಳದಷ್ಟು ಮರಳು ಇತ್ತು. ಆಗ ನಾನು ಈ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದ್ದರಿಂದ, ಇಂದು ಇಲ್ಲಿ ಜನರ ಗುಂಪನ್ನು ನೋಡುತ್ತಿದ್ದೇನೆ, ಅವರೆಲ್ಲರೂ ಬದಲಾವಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಲಾಲು, ನಿತೀಶ್ ಮತ್ತು ಮೋದಿಯಿಂದ ಮುಕ್ತರಾಗಲು ಜನರು ಇಚ್ಛಿಸುತ್ತಿದ್ದಾರೆ,” ಎಂದರು. ಈ ಹೇಳಿಕೆಯು ಬಿಹಾರದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ, ವಿಶೇಷವಾಗಿ ಜನ ಸೂರಜ್ ಪಕ್ಷದ ಉದಯದಿಂದಾಗಿ ರಾಜ್ಯದಲ್ಲಿ ಹೊಸ ರಾಜಕೀಯ ತಿರುವು ಸೃಷ್ಟಿಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ | ಬಿಹಾರ್ ಚುನಾವಣೆ: ನಿತೀಶ್ ಕುಮಾರ್ರ ಅಧಿಕಾರದ ಓಟಕ್ಕೆ ಬೀಳುತ್ತಾ ಬ್ರೇಕ್?
ಪ್ರಶಾಂತ್ ಕಿಶೋರ್ ತಮ್ಮ ಪಕ್ಷದ ಚುನಾವಣಾ ತಂತ್ರವನ್ನು ಸ್ಪಷ್ಟಪಡಿಸುವಾಗ, “ನಾವು ರಾಜಕೀಯ ಹಿನ್ನೆಲೆಯಿರುವವರನ್ನಾಗಲೀ, ಬಲಾಡ್ಯರನ್ನಾಗಲೀ ಚುನಾವಣೆಯ ಕಣಕ್ಕಿಳಿಸುವುದಿಲ್ಲ. ನಮ್ಮ ಅಭ್ಯರ್ಥಿಗಳು ಸಾಮಾನ್ಯ ಜನರಿಂದ ಬಂದವರಾಗಿರಬೇಕು, ಜನರ ಸಮಸ್ಯೆಗಳನ್ನು ಅರಿತವರಾಗಿರಬೇಕು,” ಎಂದು ಪುನರುಚ್ಚರಿಸಿದರು. ಈ ಮೂಲಕ, ಜನ ಸೂರಜ್ ಪಕ್ಷವು ಸಾಮಾನ್ಯ ಜನರಿಗೆ ಆದ್ಯತೆ ನೀಡುವ, ಜನಕೇಂದ್ರಿತ ರಾಜಕಾರಣವನ್ನು ಉತ್ತೇಜಿಸುವ ಗುರಿಯನ್ನು ಹೇಳಿದರು.
ಈ ವೇಳೆ, ಕಿಶೋರ್ ಅವರು ಬಿಹಾರ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ದಿಲೀಪ್ ಜೈಸ್ವಾಲ್ ವಿರುದ್ಧ ಗಂಭೀರ ಅಪರಾಧಗಳ ಆರೋಪಗಳಿವೆ, ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾವು ಅಧಿಕಾರಕ್ಕೆ ಬಂದರೆ, ಬಿಜೆಪಿ ಮತ್ತು ಅದರ ನಾಯಕರ ಅಪರಾಧಗಳನ್ನು ಜನರ ಮುಂದೆ ಬಯಲಿಗೆ ತರುತ್ತೇವೆ,” ಎಂದು ಆರೋಪಿಸಿದರು.
ಜನ ಸೂರಜ್ ಪಕ್ಷದ ರಾಜಕೀಯ ವಿರೋಧಿಗಳಾದ ಆರ್ಜೆಡಿ, ಜೆಡಿಯು ಮತ್ತು ಬಿಜೆಪಿಯ ಒಕ್ಕೂಟಕ್ಕೆ ಸವಾಲು ಒಡ್ಡುವ ಉದ್ದೇಶ ಕಾಣಿಸುತ್ತದೆ. ಕಿಶೋರ್ ಅವರ ಹಿಂದಿನ ಚುನಾವಣಾ ತಂತ್ರಗಾರಿಕೆಯ ಯಶಸ್ಸಿನ ದಾಖಲೆಯನ್ನು ಗಮನಿಸಿದರೆ, ಜನ ಸೂರಜ್ ಪಕ್ಷವು ಬಿಹಾರ ಚುನಾವಣೆಯಲ್ಲಿ ಗಮನಾರ್ಹ ಪಾತ್ರ ವಹಿಸಬಹುದು.
ಸಾಮಾಜಿಕ ಜಾಲತಾಣಗಳಲ್ಲಿ ಈ ಹೇಳಿಕೆಗಳು ತೀವ್ರ ಚರ್ಚೆಗೆ ಕಾರಣವಾಗಿವೆ. ಕೆಲವರು ಕಿಶೋರ್ ಅವರ ಜನಕೇಂದ್ರಿತ ದೃಷ್ಟಿಕೋನವನ್ನು ಬೆಂಬಲಿಸಿದರೆ, ಇನ್ನು ಕೆಲವರು ಆರ್ಜೆಡಿ ಮತ್ತು ಜೆಡಿಯು-ಬಿಜೆಪಿ ಒಕ್ಕೂಟದ ಬೆಂಬಲಿಗರು ಈ ಆರೋಪಗಳನ್ನು ತಿರಸ್ಕರಿಸಿದ್ದಾರೆ.







