ಕರ್ನಾಟಕ ಸರ್ಕಾರವು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯಲ್ಲಿ ಐದು ಹೊಸ ನಗರ ಪಾಲಿಕೆಗಳ ರಚನೆಗೆ ಸಂಬಂಧಿಸಿದಂತೆ ವಾರ್ಡ್ಗಳ ಡಿ ಲಿಮಿಟೇಶನ್ ಪ್ರಕ್ರಿಯೆಯನ್ನು ಸೆಪ್ಟೆಂಬರ್ 3, 2025 ರಿಂದ ಆರಂಭಿಸಲಿದೆ. ಈ ಪ್ರಕ್ರಿಯೆಯ ಅಂತಿಮ ಅಧಿಸೂಚನೆಯನ್ನು ನವೆಂಬರ್ 1, 2025 ರಂದು ಹೊರಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಜುಲೈ 29, 2025 ರಂದು ಘೋಷಿಸಿದ್ದಾರೆ.
ಬೆಂಗಳೂರಿನ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, ಜಿಬಿಎ ಅಡಿಯಲ್ಲಿ ರಚನೆಯಾಗಲಿರುವ ಐದು ಹೊಸ ನಗರ ಪಾಲಿಕೆಗಳಾದ ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಕೇಂದ್ರ ನಗರ ಪಾಲಿಕೆಗಳಿಗೆ ವಾರ್ಡ್ಗಳ ಗಡಿಗಳನ್ನು ನಿರ್ಧರಿಸಲು ಡಿಲಿಮಿಟೇಶನ್ ಕಮಿಷನ್ ರಚಿಸಲಾಗುವುದು ಎಂದು ತಿಳಿಸಿದರು. ಈ ಪ್ರಕ್ರಿಯೆಯು ಜುಲೈ 19, 2025 ರಂದು ಹೊರಡಿಸಲಾದ ಕರಡು ಅಧಿಸೂಚನೆಯನ್ನು ಆಧರಿಸಿದ್ದು, ಇದಕ್ಕೆ ಸಾರ್ವಜನಿಕರು ಆಗಸ್ಟ್ 18, 2025 ರವರೆಗೆ ತಮ್ಮ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸಬಹುದಾಗಿದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024 ರ ಅಡಿಯಲ್ಲಿ, ಬಿಬಿಎಂಪಿ ಯ 712 ಚದರ ಕಿ.ಮೀ. ವಿಸ್ತೀರ್ಣವನ್ನು ಐದು ಸಣ್ಣ ಪಾಲಿಕೆಗಳಾಗಿ ವಿಭಜಿಸಲಾಗಿದೆ. ಈ ಕಾಯ್ದೆಯು ಫೆಬ್ರವರಿ 2024 ರಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕೃತವಾಗಿದ್ದು, ಮೇ 15, 2025 ರಿಂದ ಜಿಬಿಎ ಕಾರ್ಯಾರಂಭ ಮಾಡಲಿದೆ. ಈ ಐದು ಪಾಲಿಕೆಗಳು ಆಡಳಿತ ಸಾಮರ್ಥ್ಯ, ಜನಸಂಖ್ಯೆ, ಜನಸಾಂದ್ರತೆ ಮತ್ತು ಆಸ್ತಿ ತೆರಿಗೆ ಆದಾಯದ ಆಧಾರದ ಮೇಲೆ ರಚನೆಯಾಗಲಿವೆ.
ಡಿಲಿಮಿಟೇಶನ್ ಪ್ರಕ್ರಿಯೆಯು ಸೆಪ್ಟೆಂಬರ್ 3 ರಂದು ಆರಂಭವಾಗಲಿದ್ದು, ಕರಡು ವಾರ್ಡ್ ಪಟ್ಟಿಯನ್ನು ಸೆಪ್ಟೆಂಬರ್ 8 ರಂದು ಪ್ರಕಟಿಸಲಾಗುವುದು. ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ, ನವೆಂಬರ್ 1 ರಂದು ವಾರ್ಡ್ಗಳ ಅಂತಿಮ ಗಡಿಗಳು ಮತ್ತು ಮೀಸಲಾತಿ ಪಟ್ಟಿಯನ್ನು ಅಧಿಸೂಚನೆಯ ಮೂಲಕ ಘೋಷಿಸಲಾಗುವುದು. ಈ ಪ್ರಕ್ರಿಯೆಯು ಐದು ಪಾಲಿಕೆಗಳಿಗೆ ಚುನಾವಣೆ ನಡೆಸಲು ಮಾರ್ಗ ಮಾಡಿಕೊಡಲಿದೆ ಎಂದು ಡಿಕೆಶಿ ತಿಳಿಸಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಲಾಗುವುದು ಎಂದು ದೃಢಪಡಿಸಿದ್ದಾರೆ.
ಇದನ್ನೂ ಓದಿ | ಗ್ರೇಟರ್ ಬೆಂಗಳೂರು ಪ್ರಾಧಿಕಾರ | ಐದು ಪಾಲಿಕೆ ರಚನೆ: ಡಿಕೆ ಶಿವಕುಮಾರ್ ಘೋಷಣೆ
ಈ ಸಂದರ್ಭದಲ್ಲಿ, ಡಿಕೆಶಿವಕುಮಾರ್ ಅವರು ಆಸ್ತಿ ತೆರಿಗೆ ಸಂಗ್ರಹಣೆಯನ್ನು ಸುವ್ಯವಸ್ಥಿತಗೊಳಿಸುವ ಬಗ್ಗೆಯೂ ಮಾತನಾಡಿದರು. ಆಗಸ್ಟ್ 15, 2025 ರಂದು ಬಿ-ಖಾತಾವನ್ನು ಎ-ಖಾತಾವಾಗಿ ಪರಿವರ್ತಿಸುವ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್ (ಎಸ್ಒಪಿ) ಜಾರಿಗೊಳಿಸಲಾಗುವುದು. ಇದರ ಜೊತೆಗೆ, 25 ಲಕ್ಷ ಆಸ್ತಿ ಖಾತೆಗಳನ್ನು ಇ-ಖಾತಾವಾಗಿ ಪರಿವರ್ತಿಸುವ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಈಗಾಗಲೇ 5 ಲಕ್ಷ ಖಾತೆಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ಈ ಉಪಕ್ರಮವು ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿಯನ್ನು ಪಡೆದಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.







