ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಕನ್ನಡ ಚಿತ್ರನಟ ದರ್ಶನ್ ತೂಗುದೀಪ ಮತ್ತು ಪವಿತ್ರಾ ಗೌಡರ ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಎಲ್ಲರಲ್ಲಿ ಕುತೂಹಲಕಾರಿ ಹುಟ್ಟಿಸಿದೆ. ಕರ್ನಾಟಕ ಹೈಕೋರ್ಟ್ನಿಂದ 2024ರ ಡಿಸೆಂಬರ್ 13ರಂದು ದರ್ಶನ್, ಪವಿತ್ರಾ ಗೌಡ ಮತ್ತು ಇತರ ಐವರಿಗೆ ನೀಡಲಾದ ಜಾಮೀನಿನ ವಿರುದ್ಧ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಈ ಜಾಮೀನು ಆದೇಶವನ್ನು ರದ್ದುಗೊಳಿಸಬೇಕೆಂದು ಕೋರಿರುವ ರಾಜ್ಯ ಸರ್ಕಾರದ ಅರ್ಜಿಯನ್ನು ಪರಿಶೀಲಿಸುತ್ತಿರುವ ಸುಪ್ರೀಂ ಕೋರ್ಟ್, ಹೈಕೋರ್ಟ್ನ ಜಾಮೀನು ಆದೇಶದ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. ಈ ನಡುವೆ, ಪವಿತ್ರಾ ಗೌಡ ಮತ್ತು ದರ್ಶನ್ರವರ ಪರ ವಕೀಲರು ತಮ್ಮ ಜಾಮೀನು ರದ್ದುಗೊಳಿಸದಂತೆ ಕೋರಿ ಲಿಖಿತ ಮನವಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದಾರೆ.
ಈ ಪ್ರಕರಣದ ಮೊದಲ ಆರೋಪಿಯಾಗಿದ ಪವಿತ್ರಾ ಗೌಡ, ರೇಣುಕಾಸ್ವಾಮಿಯ ಅಪಹರಣ ಮತ್ತು ಕೊಲೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎಂದು ರಾಜ್ಯ ಸರ್ಕಾರದ ಪರ ವಕೀಲರು ವಾದಿಸಿದ್ದಾರೆ. ಆದರೆ, ಪವಿತ್ರಾ ಗೌಡರ ವಕೀಲರು ಸಲ್ಲಿಸಿರುವ ಮನವಿಯಲ್ಲಿ, ರೇಣುಕಾಸ್ವಾಮಿಯಿಂದ ತಮ್ಮ ಕಕ್ಷಿದಾರರು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರು ಎಂದು ಹೇಳಿದ್ದಾರೆ.
ಘಟನೆಯ ದಿನದಂದು ಪವಿತ್ರಾ ಗೌಡರಿಗೆ ಇತರ ಆರೋಪಿಗಳೊಂದಿಗೆ ಯಾವುದೇ ಸಂವಹನ ನಡೆದಿಲ್ಲ ಎಂದು ಒತ್ತಿ ಹೇಳಿದ್ದಾರೆ. ಇದಲ್ಲದೆ, ರೇಣುಕಾಸ್ವಾಮಿಯ ಅಪಹರಣ ಮತ್ತು ಕೊಲೆಯ ಸಂಚಿನಲ್ಲಿ ಪವಿತ್ರಾ ಗೌಡ ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ವಾದಿಸಿದ್ದಾರೆ. ರೇಣುಕಾಸ್ವಾಮಿಯ ದೇಹದ ಮೇಲಿನ ಗಾಯಗಳು ಪವಿತ್ರಾ ಗೌಡರಿಂದ ಉಂಟಾಗಿಲ್ಲ ಎಂದು ಫಾರೆನ್ಸಿಕ್ ವರದಿಯನ್ನು ಉಲ್ಲೇಖಿಸಿದ್ದಾರೆ.
ಪವಿತ್ರಾ ಮನವಿ:
ಪವಿತ್ರಾ ಗೌಡರ ಮನವಿಯಲ್ಲಿ, ತಾವು ಒಬ್ಬಂಟಿ ತಾಯಿಯಾಗಿದ್ದು, 10ನೇ ತರಗತಿಯಲ್ಲಿ ಓದುತ್ತಿರುವ ಮಗಳನ್ನು ನೋಡಿಕೊಳ್ಳುವ ಜವಾಬ್ದಾರಿಯಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ವಯಸ್ಸಾದ ತಂದೆ-ತಾಯಿಗೆ ತಾವೇ ಆಧಾರವಾಗಿದ್ದೇನೆ ಎಂದು ಹೇಳಿದ್ದಾರೆ. “ನನಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ, ಬಂಧನದ ಕಾರಣಗಳನ್ನು ಪೊಲೀಸರು ಲಿಖಿತವಾಗಿ ನೀಡಿಲ್ಲ. ಮಹಿಳೆಯಾಗಿರುವುದರಿಂದ ಜಾಮೀನು ರದ್ದುಗೊಳಿಸುವುದು ಕಠಿಣ ಕ್ರಮವಾಗುತ್ತದೆ,” ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ. ಈ ವಾದದ ಜೊತೆಗೆ, ಕರ್ನಾಟಕ ಹೈಕೋರ್ಟ್ನ ಜಾಮೀನು ಆದೇಶವು ಸೂಕ್ತವಾಗಿದೆ ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ನ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲ ಮತ್ತು ಆರ್. ಮಹದೇವನ್ ಅವರ ದ್ವಿಸದಸ್ಯ ಪೀಠವು ಪರಿಶೀಲಿಸುತ್ತಿದೆ. ಹೈಕೋರ್ಟ್ನ ಆದೇಶವು ಸೂಕ್ತವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಗಮನಿಸಿದ್ದು, ಜಾಮೀನು ರದ್ದತಿಯ ಕುರಿತು ಆಗಸ್ಟ್ 6ರಂದು ವಿಚಾರಣೆ ನಡೆಸಿತು. ಪವಿತ್ರಾ ಗೌಡರ ವಕೀಲರಾದ ಕಪಿಲ್ ಸಿಬಲ್ ಅವರು, ಜಾಮೀನು ಆದೇಶವನ್ನು ರದ್ದುಗೊಳಿಸದಂತೆ ವಾದ ಮಂಡಿಸಿದ್ದಾರೆ. ಈ ಪ್ರಕರಣದಲ್ಲಿ ಸಾಕ್ಷಿಗಳ ಹೇಳಿಕೆಗಳಲ್ಲಿ ವ್ಯತ್ಯಾಸಗಳಿವೆ ಎಂದು ಹೈಕೋರ್ಟ್ ಗಮನಿಸಿತ್ತು, ಮತ್ತು ಆರೋಪಿಗಳಿಗೆ ಬಂಧನದ ಕಾರಣಗಳನ್ನು ಲಿಖಿತವಾಗಿ ಒದಗಿಸಲಾಗಿಲ್ಲ ಎಂಬ ಕಾರಣಕ್ಕೆ ಜಾಮೀನು ಮಂಜೂರು ಮಾಡಿತ್ತು.
ಇದನ್ನೂ ಓದಿ | ರೇಣುಕಾಸ್ವಾಮಿ ಕೊಲೆ: ದರ್ಶನ್ ಜಾಮೀನು: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಆಕ್ಷೇಪ
ಜೈಲಿನಿಂದ ಬಿಡುಗಡೆಯಾದ ನಂತರ ಪವಿತ್ರಾ ಗೌಡ, , ತಮ್ಮ ಫ್ಯಾಷನ್ ಡಿಸೈನ್ ಸ್ಟುಡಿಯೋವನ್ನು ಮರುಪ್ರಾರಂಭಿಸಿದ್ದಾರೆ ಮತ್ತು ಜನವರಿ 2025ರಲ್ಲಿ ಪ್ರಯಾಗ್ರಾಜ್ನ ಕುಂಭಮೇಳದಲ್ಲಿ ಭಾಗವಹಿಸಿದ್ದಾರೆ. ಆದರೆ, ಜಾಮೀನು ರದ್ದಾದರೆ ಅವರ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಸುಪ್ರೀಂ ಕೋರ್ಟ್ನ ತೀರ್ಪು ಈ ಪ್ರಕರಣದ ಭವಿಷ್ಯವನ್ನು ನಿರ್ಧರಿಸಲಿದೆ, ಮತ್ತು ಇದು ಕರ್ನಾಟಕದಲ್ಲಿ ವ್ಯಾಪಕ ಗಮನ ಸೆಳೆದಿದೆ.







