ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಯನ್ನು ತಿಳಿಯಲು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗುತ್ತಿರುವ ‘ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ-2025’ಗೆ ಆಶಾ ಕಾರ್ಯಕರ್ತೆಯರು ಭಾಗವಹಿಸದಿರಲು ನಿರ್ಧರಿಸಿದ್ದಾರೆ.
ಈ ನಿರ್ಧಾರವು ಸರ್ಕಾರದ ಹಿಂದಿನ ಸಮೀಕ್ಷೆಗಳಿಗೆ ಸಂಬಂಧಿಸಿದಂತೆ ಗೌರವಧನಗಳನ್ನು ಪಾವತಿ ಮಾಡದಿರುವುದರಿಂದ ಉಂಟಾಗಿದೆ. ಗ್ಯಾರಂಟಿ ಯೋಜನೆಯ ಅಡಿಯಲ್ಲಿ ನಡೆದ ಸಮೀಕ್ಷೆಗಳಿಗೆ ಭರವಸೆ ನೀಡಿದ್ದ ರೂ.1,000ರ ಗೌರವಧನವೂ ಇನ್ನೂ ಪಾವತಿಯಾಗಿಲ್ಲ. ಇದರಿಂದ ಆಶಾ ಕಾರ್ಯಕರ್ತೆಯರು ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಆಶಾ ಕಾರ್ಯಕರ್ತೆಯರಿಂದ ಮತ್ತೆ ಹೋರಾಟದ ಎಚ್ಚರಿಕೆ: ಭರವಸೆ ಈಡೇರಿಸದ ಸಿಎಂ
ಈ ಸಮೀಕ್ಷೆಯು ರಾಜ್ಯದಲ್ಲಿ ಜಾತಿ ಗಣತಿಯ ಮೊದಲ ಹಂತವಾಗಿದ್ದು, ಸೆಪ್ಟೆಂಬರ್ 22ರಿಂದ ಆರಂಭವಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಮೊದಲು ಪ್ರಾರಂಭವಾಗಿ, ಡಿಸೆಂಬರ್ನೊಳಗೆ ವರದಿ ಸಲ್ಲಿಸುವ ಗುರಿಯಿದೆ. ಈ ಸಮೀಕ್ಷೆಗೆ ರೂ.420 ಕೋಟಿ ವೆಚ್ಚವಾಗಲಿದೆ ಎಂದು ಮೂಲಗಳು ತಿಳಿಸಿವೆ. ಆಶಾ ಕಾರ್ಯಕರ್ತೆಯರು ಈ ಸಮೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಅವರು ಮನೆ ಮನೆಗೆ ತೆರಳಿ ಸಮೀಕ್ಷೆಯ ನಮೂನೆಯನ್ನು (ಸ್ಟಿಕ್ಕರ್) ವಿತರಿಸುವುದು, 60 ಪ್ರಶ್ನೆಗಳಿಗೆ ಮುಂಚಿತವಾಗಿ ಮಾಹಿತಿ ಸಂಗ್ರಹಿಸಿ ತಯಾರಿ ಮಾಡುವುದು, ನಂತರ ಎನ್ಯುಮರೇಟರ್ಗಳೊಂದಿಗೆ ಸಹಕಾರ ನೀಡುವುದು ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ವಿವರಗಳನ್ನು ಅಪ್ಲೋಡ್ ಮಾಡುವಂತೆ ಸೂಚಿಸಲಾಗಿದೆ. ಈ ಕಾರ್ಯಕ್ಕಾಗಿ ರೂ.2,000 ಗೌರವಧನ ನಿಗದಿಪಡಿಸಲಾಗಿದ್ದರೂ, ಸರ್ಕಾರದಿಂದ ಅಧಿಕೃತ ಆದೇಶ ಬಂದಿಲ್ಲ. ಹೀಗಾಗಿ ಆಶಾ ಕಾರ್ಯಕರ್ತೆಯರು ಈ ಕೆಲಸಕ್ಕೆ ಹೊರಬರದಿರಲು ನಿರ್ಧರಿಸಿದ್ದಾರೆ.







