“ಸರ್, ನಮ್ಮ ಎಕ್ಸಾಮ್ ಬಂದಿಲ್ಲ, ವಯಸ್ಸು ಆಗಾಯ್ತು. ಆ ಕಡೆ ಉದ್ಯೋಗವೂ ಇಲ್ಲ. ಇಲ್ಲಿ ಏಜ್ ಆಗಿದೆ ಅಂತ ಯಾರೂ ಕೆಲಸ ಕೊಡಲ್ಲ. ಇದು ಭಾರೀ ಅನ್ಯಾಯ ರೀ!” ಇಂತಹ ಮಾತುಗಳು ಧಾರವಾಡದ ಜುಬಿಲಿ ಸರ್ಕಲ್ನಲ್ಲಿ ಧ್ವನಿಸಿದವು. ಪಿಎಸ್ಐ ಎಕ್ಸಾಮ್ಗೆ ತಯಾರಿ ಮಾಡಿದ್ದ ಒಬ್ಬಳು ವಿದ್ಯಾರ್ಥಿನಿ ಕಣ್ಣೀರು ಚಿಮ್ಮಿಸುತ್ತಾ ಹೇಳಿದ ಮಾತು.
ವಿದ್ಯಾಕಾಶಿ ಎಂದೇ ಹೆಸರು ವಾಸಿಯಾದ ಧಾರವಾಡ ಜಿಲ್ಲೆಯಲ್ಲಿ ಇಂದು ನಿರುದ್ಯೋಗದ ಗಾಳಿ ಬೀಸುತ್ತಿದೆ. ಸಾವಿರಾರು ಸ್ಪರ್ದಾತ್ಮಕ ಪರಿಕ್ಷೆಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಹೌದು, ಈ ಹೋರಾಟದ ಹಿಂದೆ ಗಂಭೀರ ಅರ್ಥವಿದೆ. ಒಂದು ಕಡೆ ಜಾತಿ ಹೋರಾಟಗಳು ಜೋರಾಗಿವೆ, ಶಿಕ್ಷಕರ ಸಂಘಟನೆಗಳು ಯಾವಾಗ ಬೇಕಾದರು ಬಂಡಾಯ ಏಳಬಹುದು. ಈಗ ಆ ಮಾರ್ಗದಲ್ಲಿ ವಿದ್ಯಾರ್ಥಿಗಳು ಎದ್ದಿದ್ದಾರೆ.
ಸರ್ಕಾರಿ ನೇಮಕಾತಿಯ ವಿಷಯಕ್ಕೆ ಸಂಬಂಧಿಸಿದ ವಿವಾದ ಭುಗಿಲೆದ್ದಿದೆ. ವಯೋಮಿತಿ ಹೆಚ್ಚಿಸಿ, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುರ್ತು ಭರ್ತಿ ಮಾಡಬೇಕು ಎಂದು ಆಗ್ರಹಿಸಿ, ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘ (ಎಕೆವಿಎಸ್ಎ)ದಿಂದ ಸಾವಿರಾರು ವಿದ್ಯಾರ್ಥಿಗಳು ಬುಧವಾರ ಧಾರವಾಡದಲ್ಲಿ ದೊಡ್ಡ ಹೋರಾಟ ನಡೆಸಿದರು.
ರಾಜ್ಯದ ಬೇರೆಬೇರೆ ಇಲಾಖೆಗಳಲ್ಲಿ ವರ್ಷಗಳಿಂದ ನೇಮಕಾತಿಯೇ ಆಗಿಲ್ಲ. ಪೊಲೀಸ್ ಇಲಾಖೆಯ ಪಿಎಸ್ಐ, ಸಿಬಿಐ, ಎಸ್ಐ ಹುದ್ದೆಗಳು ಸೇರಿದಂತೆ ಸಾವಿರಾರು ಖಾಲಿ ಸ್ಥಾನಗಳು ತುಂಬಿಲ್ಲ. ಕಾಂಗ್ರೆಸ್ ಸರ್ಕಾರವು ಈ ವಿಳಂಬಕ್ಕೆ ಕಾರಣವಾಗಿದೆ ಎಂದು ಆರೋಪಿಸುತ್ತಾ, ನಿರುದ್ಯೋಗಿ ಯುವಕರಿಗೆ ತಕ್ಷಣ ಉದ್ಯೋಗ ನೀಡಿ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಹೋರಾಟದ ಸ್ವರೂಪ ಜೋರಾಗಿದೆ. ಜುಬಿಲಿ ಸರ್ಕಲ್ನಲ್ಲಿ ಸುಮಾರು 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಗ್ಗೂಡಿ ಜಾತಾ ಮಾಡಿದರು. ರಸ್ತೆಯನ್ನು 30 ನಿಮಿಷಗಳಕ್ಕಿಂತಲೂ ಹೆಚ್ಚು ಸಮಯ ತಡೆಹಿಡಿದರು. ನಗರದ ಸಾಮಾನ್ಯರ ಜೀವನ ಸ್ಥಗಿತಗೊಂಡಿತು. ಪೊಲೀಸ್ ವ್ಯವಸ್ಥೆ ಕಟ್ಟುನಿಟ್ಟಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರೂ, ವಿದ್ಯಾರ್ಥಿಗಳ ಉದ್ಘೋಷಣೆಯ ಧ್ವನಿ ನಗರವನ್ನು ನಡುಕಗೊಳಿಸಿತು.
ಎಕೆವಿಎಸ್ಎ ರಾಜ್ಯಾಧ್ಯಕ್ಷರ ಮಾತು
ಎಕೆವಿಎಸ್ಎ ರಾಜ್ಯಾಧ್ಯಕ್ಷ ಕಾಂತ್ ಕುಮಾರ್ ಮಾತನಾಡಿ, “ಕೋವಿಡ್ನಿಂದಾಗಿ ನೇಮಕಾತಿ ವಿಳಂಬವಾಯಿತು. ಇದರಿಂದಾಗಿ ಸಾವಿರಾರು ಯುವಕರು ವಯಸ್ಸು ಮೀರಿ ಹೊರಬಿದ್ದಿದ್ದಾರೆ. ಕನಿಷ್ಠ 5 ವರ್ಷದ ವಯಸ್ಸು ವಯೋಸಡಿಲಿಕೆ ನೀಡಿ, ಖಾಲಿ ಹುದ್ದೆಗಳನ್ನು ತುರ್ತು ಭರ್ತಿ ಮಾಡಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ | ಸದನದಲ್ಲಿ ಚರ್ಚೆಗೆ ಬಾರದ ಶಿಕ್ಷಣ, ನಿರುದ್ಯೋಗ ಸಮಸ್ಯೆ: ಸರ್ಕಾರ ನಿರ್ಲಕ್ಷ!
ಧಾರವಾಡ ಜಿಲ್ಲೆಯು ಶಿಕ್ಷಣ ಕೇಂದ್ರವಾಗಿದ್ದರೂ, ಇಲ್ಲಿನ ಯುವಕರು ನಿರುದ್ಯೋಗದ ಕಗ್ಗಂಟು ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ 8.5%ಕ್ಕೂ ಹೆಚ್ಚಾಗಿದೆ. ಸರ್ಕಾರಿ ಉದ್ಯೋಗಗಳು ಮಾತ್ರವಲ್ಲ, ಖಾಸಗಿ ಸಂಸ್ಥೆಗಳಲ್ಲೂ ಅವಕಾಶಗಳು ಕಡಿಮೆ. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಹೋರಾಟವು ಸರ್ಕಾರಕ್ಕೆ ಒತ್ತಡ ಹೇರುತ್ತಿದೆ.
ಇದೇ ರೀತಿ ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಇತರ ಜಿಲ್ಲೆಗಳಲ್ಲೂ ಇದೇ ಬೇಡಿಕೆಗಳು ಎದ್ದಿವೆ. ಇದು ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ವಿದ್ಯಾರ್ಥಿಗಳು ಹೇಳುವಂತೆ, “ನಾವು ಓದಿದ್ದು ದೇಶಕ್ಕಾಗಿ, ಆದರೆ ಸರ್ಕಾರ ನಮ್ಮನ್ನು ಮರೆತಿದೆ. ವಯೋಮಿತಿ ಹೆಚ್ಚಿಸದಿದ್ದರೆ, ನಮ್ಮಂಥ ಹಲವರ ಕನಸುಗಳು ಮಾಯವಾಗುತ್ತವೆ.” ಈ ಹೋರಾಟವು ಕೇವಲ ಧಾರವಾಡಕ್ಕೆ ಸೀಮಿತವಲ್ಲ. ರಾಜ್ಯಾದ್ಯಂತ ಯುವಕರಲ್ಲಿ ಹರಡುತ್ತಿದೆ. ಸರ್ಕಾರ ಈಗಲೇ ಕ್ರಮ ತೆಗೆದುಕೊಳ್ಳದಿದ್ದರೆ, ಹೋರಾಟಗಳು ಇನ್ನಷ್ಟು ತೀವ್ರಗೊಳ್ಳಬಹುದು. ನಿರುದ್ಯೋಗವನ್ನು ನಿಯಂತ್ರಿಸಲು ಉದ್ಯೋಗ ಸೃಷ್ಟಿ, ನೇಮಕಾತಿ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸುವುದು ಅನಿವಾರ್ಯ. ಧಾರವಾಡದ ಈ ಧ್ವನಿ ರಾಜ್ಯದ ಇತರ ಭಾಗಗಳಿಗೂ ತಲುಪಬೇಕು – ಯುವಕರ ಭವಿಷ್ಯಕ್ಕಾಗಿ ಸರ್ಕಾರಕ್ಕೆ ಕೇಳಬೇಕು.







