ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಅಕ್ಟೋಬರ್ 15ರಂದು ಸಿಪಿಐ(ಮಾವೋಯಿಸ್ಟ್) ಪೊಲಿಟ್ಬ್ಯೂರೋ ಸದಸ್ಯ ಭೂಪತಿ ಎಂದು ಕರೆಯಲ್ಪಡುವ ಮಲ್ಲೋಜುಲಾ ವೇಣುಗೋಪಾಲ್ ರಾವ್ ಸೇರಿ 61ಜನ ನಕ್ಸಲರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ರ ಸಮ್ಮುಖದಲ್ಲಿ ಶರಣಾಗಿದ್ದಾರೆ.
6 ಕೋಟಿ ರೂ. ಇನಾಮು ಹೊತ್ತಿದ್ದ ಭೂಪತಿ ಮಾವೋಯಿಸ್ಟ್ ಸಂಘಟನೆಯ ಪ್ರಮುಖ ರಣತಂತ್ರಜ್ಞರಾಗಿದ್ದರು. ಗಡ್ಚಿರೋಲಿ ಪೊಲೀಸ್ ಮುಖ್ಯ ಕಚೇರಿಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಎದುರು ಈ ಶರಣಾಗತಿ ಯಾಗಿದ್ದಾರೆ. ಇದು ಮಹಾರಾಷ್ಟ್ರದ ಇತಿಹಾಸದಲ್ಲೇ ಅತಿದೊಡ್ಡ ನಕ್ಸಲ್ ಶರಣಾಗತಿ ಎಂದು ಪರಿಗಣಿಸಲಾಗಿದೆ.
ಶರಣಾಗಿದ್ದವರೊಂದಿಗೆ 54 ಶಸ್ತ್ರಾಸ್ತ್ರಗಳು ಸಿಕ್ಕಿವೆ. ಅದರಲ್ಲಿ 7 ಎಕೆ-47 ರೈಫಲ್ಗಳು, 9 ಇನ್ಸಾಸ್ ರೈಫಲ್ಗಳು, ಎಸ್ಎಲ್ಆರ್, ಕಾರ್ಬೈನ್ ಮತ್ತು ಪಿಸ್ತೂಲುಗಳು ಸೇರಿವೆ. ಭೂಪತಿ 50 ವರ್ಷಗಳಿಂದ ಮಾವೋಯಿಸ್ಟ್ ಚಳವಳಿಯಲ್ಲಿ ಇದ್ದರು. ಅವರು ಪೊಲಿಟ್ಬ್ಯೂರೋ ಸದಸ್ಯರಾಗಿ ಮಹಾರಾಷ್ಟ್ರ-ಛತ್ತೀಸ್ಗಢ ಗಡಿ ಪ್ರದೇಶದಲ್ಲಿ ಕಾರ್ಯಾಚರಣೆಗಳನ್ನು ಮುನ್ನಡೆಸುತ್ತಿದ್ದರು. ಭೂಪತಿ ಮತ್ತು ಕ್ಯಾಡರ್ಗಳು ಪೊಲೀಸರಿಗೆ ಶರಣಾಗಿ, ಮಾವೋಯಿಸ್ಟ್ ಸಂಘಟನೆಯ ಆಂತರಿಕ ಗೊಂದಲಗಳನ್ನು ಬಹಿರಂಗಪಡಿಸಿದ್ದಾರೆ.
“ಮಾವೋಯಿಸ್ಟ್ ತತ್ವಜ್ಞಾನದಲ್ಲಿ ವೈಫಲ್ಯಗಳಿವೆ. ನೀಡಿದ ಭರವಸೆಗಳು ನೆರವೇರಲಿಲ್ಲ ಆಂತರಿಕ ಕಲಹಗಳು ಹೆಚ್ಚಿದವು ಪೊಲೀಸರ ನಿರಂತರ ಒತ್ತಡದಿಂದ ಶರಣಾಗಿದ್ದೇವೆ. ಕಳೆದ ಒಂದು ತಿಂಗಳಿಂದ ಪೊಲೀಸರು ಮಾತುಕತೆ ನಡೆಸಿದರು. ಶರಣಾಗತಿಗೆ ಅವಕಾಶ ನೀಡಿದರು. ಇದರಿಂದ ಮಾವೋಯಿಸ್ಟ್ ಚಳವಳಿಯು ಕುಸಿಯುತ್ತಿದೆ” ಎಂದು ಭೂಪತಿ ಹೇಳಿದ್ದಾರೆ.
ಇದನ್ನೂ ಓದಿ | ಮಹಾರಾಷ್ಟ್ರ ಸರ್ಕಾರದಿಂದ ‘ನಗರ ನಕ್ಸಲಿಸಂ’ ವಿರುದ್ಧ ಹೊಸ ಕಾನೂನು
ಸಿಎಂ ಫಡ್ನವಿಸ್ ಸಭೆಯಲ್ಲಿ ಮಾತನಾಡಿ. “ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ 2014ರಿಂದ ಮಾವೋಯಿಸ್ಟ್ ವಿರುದ್ಧ ಅಭಿಯಾನ ಆರಂಭವಾಯಿತು. ಮಹಾರಾಷ್ಟ್ರದಲ್ಲಿ ನಕ್ಸಲ್ ಚಳವಳಿಯನ್ನು ನಿಯಂತ್ರಿಸಿದ್ದೇವೆ. ಭೂಪತಿ ಶರಣಾಗತಿ ಮಾವೋಯಿಸ್ಟ್ ಬೆನ್ನುಮೂಳೆ ಮುರಿದಂತೆ. ಇದು ಮಹಾರಾಷ್ಟ್ರದಲ್ಲಿ ನಕ್ಸಲ್ ಮುಕ್ತತೆಯ ಆರಂಭ. ಗಡ್ಚಿರೋಲಿ ಪೊಲೀಸರಿಗೆ ರೂ. 1 ಕೋಟಿ ಬಹುಮಾನ ನೀಡುತ್ತೇವೆ. ಛತ್ತೀಸ್ಗಢದ ನಕ್ಸಲರು ಕೂಡ ಶರಣಾಗಬಹುದು” ಎಂದರು.







