ನಾಳೆಯಿಂದ (ಜನವರಿ 22) ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದ್ದು, ಸಂಪ್ರದಾಯದಂತೆ ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಬೇಕಿದೆ. ಆದರೆ, ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಭಾಷಣದ ಪ್ರತಿಯಲ್ಲಿರುವ ಕೆಲವು ಅಂಶಗಳಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಭಾಷಣ ಮಾಡಲು ತಾವು ಬರುವುದಿಲ್ಲ ಎಂದು ಅವರು ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸರ್ಕಾರಕ್ಕೆ ತಲೆನೋವಾದ ‘ನರೇಗಾ’ (NREGA) ವಿಷಯ:
ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (MGNREGA) ಹೆಸರನ್ನು ಬದಲಾಯಿಸಲು ಅಥವಾ ರದ್ದುಗೊಳಿಸಲು ಮುಂದಾಗಿದೆ ಎಂಬ ವಿಷಯದ ಬಗ್ಗೆ ರಾಜ್ಯ ಸರ್ಕಾರ ತನ್ನ ಭಾಷಣದಲ್ಲಿ ಕಟುವಾದ ಟೀಕೆಗಳನ್ನು ಸೇರಿಸಿದೆ ಎಂದು ತಿಳಿದುಬಂದಿದೆ. ಕೇಂದ್ರದ ನಿಲುವುಗಳನ್ನು ಟೀಕಿಸುವ ಸಾಲುಗಳನ್ನು ಓದಲು ರಾಜ್ಯಪಾಲರು ಹಿಂದೇಟು ಹಾಕುತ್ತಿದ್ದಾರೆ. ತಮಿಳುನಾಡಿನಲ್ಲೂ ಇದೇ ರೀತಿಯ ಸನ್ನಿವೇಶ ಎದುರಾಗಿತ್ತು.
ರಾಜ್ಯಪಾಲರ ಈ ನಡೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅಧಿವೇಶನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಉಂಟಾಗಿರುವ ಈ ಬಿಕ್ಕಟ್ಟನ್ನು ಬಗೆಹರಿಸಲು ಸರ್ಕಾರ ತುರ್ತು ಕಸರತ್ತು ನಡೆಸಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ (H.K. Patil) ಅವರ ನೇತೃತ್ವದ ಹಿರಿಯ ಸಚಿವರ ನಿಯೋಗವು ಇಂದು ಸಂಜೆ 5:45ಕ್ಕೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವೊಲಿಸಲು ನಿರ್ಧರಿಸಿದೆ. ಭಾಷಣದಲ್ಲಿರುವ ವಿವಾದಾತ್ಮಕ ಅಂಶಗಳನ್ನು ಕೈಬಿಡುವ ಭರವಸೆ ನೀಡಿ, ರಾಜ್ಯಪಾಲರನ್ನು ಅಧಿವೇಶನಕ್ಕೆ ಕರೆತರುವುದು ಸರ್ಕಾರದ ಉದ್ದೇಶವಾಗಿದೆ.
ಇದನ್ನೂ ಓದಿ | ರಾಜ್ಯಪಾಲರ ಭಾಷಣದ ಸಂಪ್ರದಾಯಕ್ಕೆ ಬ್ರೇಕ್? ಸಂವಿಧಾನ ತಿದ್ದುಪಡಿಗೆ ಸ್ಟಾಲಿನ್ ಪಟ್ಟು!
ನಾಳೆಯಿಂದ ಕಾವೇರಲಿದೆ ಕಲಾಪ:
ಜನವರಿ 22 ರಿಂದ 31 ರವರೆಗೆ ನಡೆಯಲಿರುವ ಅಧಿವೇಶನವು ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಡುವಿನ ವಾಕ್ಸಮರಕ್ಕೆ ಸಾಕ್ಷಿಯಾಗಲಿದೆ. ಬರ ಪರಿಹಾರ, ಕೇಂದ್ರದ ಅನುದಾನ ತಾರತಮ್ಯ ಮತ್ತು ನರೇಗಾ ವಿಷಯಗಳು ಕಲಾಪದಲ್ಲಿ ಪ್ರಮುಖವಾಗಿ ಚರ್ಚೆಯಾಗಲಿವೆ.







