ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು(ಕಸಾಪ)ದ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಅವರು ಇಂದು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಈ ನೇಮಕಾತಿಯು ಮಹೇಶ್ ಜೋಶಿ ಅವರಿಗೆ ದೊಡ್ಡ ಹಿನ್ನಡೆಯಾಗಿದೆ.
ಕಸಾಪ ಎಂಬ ಪ್ರಮುಖ ಸಾಹಿತ್ಯ ಸಂಸ್ಥೆಯು ಇದೀಗ ಭ್ರಷ್ಟಾಚಾರದ ಆರೋಪಗಳಲ್ಲಿ ಸಿಲುಕಿದೆ. ಡಾ. ಮಹೇಶ್ ಜೋಶಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಣಕಾಸಿನ ಅವ್ಯವಹಾರ ಮತ್ತು ಅಧಿಕಾರ ದುರ್ಬಳಕೆಯ ಗಂಭೀರ ಆರೋಪಗಳು ಕೇಳಿಬಂದವು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದೆ.
ಈ ವಿವಾದದ ಮೂಲ ಕಾರಣಗಳು ಕಳೆದ ಕೆಲವು ತಿಂಗಳುಗಳ ಹಿಂದೆಯೇ ಆರಂಭವಾಗಿದ್ದವು. 2025ರ ಜೂನ್ ತಿಂಗಳಲ್ಲಿ ಪ್ರಸಿದ್ಧ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಅವರು ಕಸಾಪದಲ್ಲಿ ಆರ್ಥಿಕ ಅಶಿಸ್ತು ನಡೆಯುತ್ತಿದೆ ಎಂದು ಆರೋಪಿಸಿದ್ದರು. ಅವರು ಮಹೇಶ್ ಜೋಶಿ ವಿರುದ್ಧ ಸರ್ಕಾರಕ್ಕೆ ದೂರು ಸಲ್ಲಿಸಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಇದಲ್ಲದೆ, ಸದಸ್ಯರಿಗೆ ವಿನಾಕಾರಣ ನೋಟಿಸ್ಗಳು, ಕಿರುಕುಳ, ಅನುದಾನದ ದುರ್ಬಳಕೆಯಂತಹ ಆರೋಪಗಳು ಪದೇ ಪದೇ ಕೇಳಿಬಂದವು. ಇದರ ಪರಿಣಾಮವಾಗಿ, 2025ರ ಜುಲೈ ತಿಂಗಳಲ್ಲಿ ಸಹಕಾರ ಇಲಾಖೆಯು ವಿಚಾರಣಾಧಿಕಾರಿಯನ್ನು ನೇಮಿಸಿ ತನಿಖೆ ಆರಂಭಿಸಿತು. ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯು ಅಧಿಕಾರಿಗಳ ಸಮಿತಿಯನ್ನು ರಚಿಸಿ, 2023-24ನೇ ಆರ್ಥಿಕ ವರ್ಷದ ಖರ್ಚು-ವೆಚ್ಚಗಳನ್ನು ಪರಿಶೀಲಿಸುವಂತೆ ಆದೇಶ ನೀಡಿದರು.
ಮಹೇಶ್ ಜೋಶಿ ಅವರು ಈ ಎಲ್ಲ ಆರೋಪಗಳನ್ನು ತೀವ್ರವಾಗಿ ಖಂಡಿಸಿ. “ಇದು ವೈಯಕ್ತಿಕ ದ್ವೇಷದಿಂದ ಬಂದ ಆರೋಪಗಳು. ನಾನು ತನಿಖೆಗೆ ಸಂಪೂರ್ಣವಾಗಿ ಸಿದ್ಧನಿದ್ದೇನೆ” ಎಂದು ಅವರು ಹೇಳಿಕೊಂಡಿದ್ದರು. ಆದರೆ, ಬೈಲಾ ತಿದ್ದುಪಡಿ ವಿವಾದ ಮತ್ತು 2025ರ ಫೆಬ್ರುವರಿಯಲ್ಲಿ ಹಳೆಯ 12 ವರ್ಷದ ಪ್ರಕರಣಕ್ಕೆ ಸಂಬಂಧಿಸಿದಂತೆ 1.20 ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದ ಘಟನೆಗಳು ಸರ್ಕಾರದ ಮೇಲೆ ಒತ್ತಡ ಹೇರಿದವು.
ಇದನ್ನೂ ಓದಿ | “ಸಾಹಿತ್ಯ ಸಮ್ಮೇಳನ ಭ್ರಷ್ಟಾಚಾರದ ಕೂಪವಾಗಿಸಿದ್ದಾರೆ”: ನಾಗಣ್ಣಗೌಡ
ಇಂದು ನಡೆದ ನೇಮಕಾತಿಯು ಸರ್ಕಾರದ ನಿಲುವನ್ನು ಸೂಚಿಸುತ್ತದೆ. ಕೆ.ಎಂ. ಗಾಯತ್ರಿ ಅವರು ಐಎಎಸ್ ಅಧಿಕಾರಿಯಾಗಿದ್ದು, ಇಲಾಖೆಯ ನಿರ್ದೇಶಕಿಯಾಗಿ ಅನುಭವ ಹೊಂದಿದ್ದಾರೆ. ಅವರು ಈಗ ಕಸಾಪದ ಆರ್ಥಿಕ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಬೇಕಿದೆ. ಜೊತೆಗೆ, ಸಾಹಿತ್ಯಿಕ ಚಟುವಟಿಕೆಗಳನ್ನು ಸುಗಮವಾಗಿ ನಡೆಸುವ ಜವಾಬ್ದಾರಿಯೂ ಅವರ ಮೇಲಿದೆ. ಆದರೆ, ಈ ನೇಮಕಾತಿಗೂ ಮುನ್ನ ಅಕ್ಟೋಬರ್ 17ರಂದು ಕಸಾಪದ ಕಾರ್ಯಕಾರಿ ಸಮಿತಿಯು ಗಾಯಿತ್ರಿ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿತ್ತು. ಅವರ ಕ್ರಮಗಳು ಪಕ್ಷಪಾತಪೂರಿತ ಎಂದು ಆರೋಪಿಸಲಾಗಿತ್ತು.







