‘ರಾಮಾ ರಾಮಾ ರೇ’ ಚಿತ್ರದ ಮೂಲಕ ನಿರ್ದೇಶಕನಾಗಿ ಗಮನ ಸೆಳೆದ ಸತ್ಯ ಪ್ರಕಾಶ್ ನಾಲ್ಕನೆಯ ಚಿತ್ರದೊಂದಿಗೆ ಕನ್ನಡದ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಎರಡು ವರ್ಷಗಳ ದೀರ್ಘ ಬ್ರೇಕ್ನ ನಂತರ ವಿಶಿಷ್ಟ ಕಥಾ ಹಂದರದ ಚಿತ್ರದೊಂದಿಗೆ ಕನ್ನಡದ ಸಿನಿ ಪ್ರೇಕ್ಷಕರಿಗೆ ವಿಶಿಷ್ಟ ಸಿನಿ ಅನುಭವ ನೀಡುವ ವಿಶ್ವಾಸದೊಂದಿಗೆ ಜೂನ್ 26ರ ಪ್ರದರ್ಶನಕ್ಕೆ ಕಾತರರಾಗಿದ್ದಾರೆ.
ಚಿತ್ರ ಬಿಡುಗಡೆಯ ಹಿನ್ನೆಲೆಯಲ್ಲಿ, ‘ತಾಯ್ನಾಡು ನ್ಯೂಸ್‘ನೊಂದಿಗೆ ಮಾತನಾಡಿದ ಸತ್ಯ ಪ್ರಕಾಶ್, ಎಕ್ಸ್ ಅಂಡ್ ವೈ, ಹೊಸ ತರದ ಸಿನಿಮಾಗಳ ಅಗತ್ಯ ಕುರಿತು ಮಾತನಾಡಿದ್ದಾರೆ.
- ‘ರಾಮಾ ರಾಮಾ ರೇ’, ‘ಒಂದಲ್ಲ,ಎರಡರಲ್ಲ’, ‘ಮ್ಯಾನ್ ಆಫ್ ದಿ ಮ್ಯಾಚ್’ ನಂತರ, ‘ಎಕ್ಸ್ ಅಂಡ್ ವೈ’.. ಏನಿದೆ ಈ ಚಿತ್ರದಲ್ಲಿ?
ಎರಡು ವರ್ಷಗಳ ನಂತರ ಬರುತ್ತಿರುವ ಸಿನಿಮಾ ಎಕ್ಸ್ ಅಂಡ್ ವೈ. ಹಿಂದಿನ ಮೂರು ಸಿನಿಮಾಗಳಿಗೆ ಹೋಲಿಸಿದರೆ, ಈ ಚಿತ್ರದ ಅಪ್ರೋಚ್ ಭಿನ್ನ. ಹಿಂದಿನ ಚಿತ್ರಗಳಲ್ಲಿ ಸಾಮಾಜಿಕವಾದ, ಸೂಕ್ಷ್ಮವಾದ ಸಂಗತಿಗಳನ್ನು ಕಥಾವಸ್ತುವನ್ನಾಗಿಸಿಕೊಂಡಿದ್ದೆ. ಇದರಲ್ಲೂ ಅಂತಹ ಕಥಾವಸ್ತು ಇದೆ, ಜೊತೆಗೆ ಹಾಸ್ಯ, ಫ್ಯಾಂಟಸಿಯೂ ಇದೆ. ಬೃಂದಾ ಆಚಾರ್ಯ, ಡಿ.ಸತ್ಯಪ್ರಕಾಶ್, ಅಯಾನ, ಅಥರ್ವ ಪ್ರಕಾಶ್, ದೊಡ್ಡಣ್ಣ, ವೀಣಾ ಸುಂದರ್, ಸುಂದರ್ ವೀಣಾ, ಹರಿಣಿ, ಧರ್ಮಣ್ಣ ಕಡೂರ್, ತೇನಪ್ಪನ್ ಸೇರಿ ಹಲವರು ಜೊತೆಗಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿವೆ. ಒಂದೊಂದು ವಿಶೇಷವಾಗಿದೆ, ಭಿನ್ನವಾಗಿದೆ.
- ಫ್ಯಾಂಟಸಿ ಅಂದ್ರೆ ಮಕ್ಕಳ ಚಿತ್ರವೇನೊ ಎಂದು ಕನ್ನಡದ ಪ್ರೇಕ್ಷಕರು ಭಾವಿಸುತ್ತಾರೆ. ಯಾಕಂದ್ರೆ ಕನ್ನಡದಲ್ಲಿ ಇಂತಹ ಪ್ರಯೋಗ ನಡೆದಿಲ್ಲ. ನೀವೇಕೆ ಫ್ಯಾಂಟಸಿಯ ಮಾಧ್ಯಮ ಆಯ್ಕೆ ಮಾಡಿಕೊಂಡ್ರಿ?
ಫ್ಯಾಂಟಿಸಿಯ ಆಯಾಮ ತೆಗೆದುಕೊಳ್ಳುವುದಕ್ಕೆ ಕಥಾ ವಸ್ತುವೇ ಕಾರಣ. ಇಲ್ಲಿಯವರೆಗೂ, ಮನುಷ್ಯ ಹುಟ್ಟಿ, ಸತ್ತು ದೆವ್ವ ಆಗು ಸಿನಿಮಾ ನೋಡಿದ್ದೀವಿ. ಮನುಷ್ಯ ಮತ್ತೆ ಮತ್ತೆ ಹುಟ್ಟುವ ಪುನರ್ಜನ್ಮದ ಕತೆಗಳಿರುವ ಸಿನಿಮಾಗಳನ್ನುನೋಡಿದ್ದೀವಿ. ಆದರೆ ಇಲ್ಲಿರುವುದು ಮನುಷ್ಯ ಹುಟ್ಟುವುದಕ್ಕಿಂತ ಮುಂಚಿನ ಕತೆ. ಈ ರೀತಿಯ ಕತೆಯನ್ನು ಯಾರು ಕೈಗೆತ್ತಿಕೊಂಡಿರಲಿಲ್ಲ. ಎಕ್ಸ್ ಮತ್ತು ವೈ ಅನ್ನೋದು ನಮ್ಮ ದೇಹದಲ್ಲಿರುವ ಕ್ರೋಮೋಸೋಮ್ಗಳು. ಅವು ಒಂದಕ್ಕೊಂದು ಕೂಡಿದರೆ ಮಗು ಹುಟ್ಟುವುದಕ್ಕೆ ಅವಕಾಶವಾಗುತ್ತದೆ. ಹುಟ್ಟೋ ಮಗುವಿನ, ಆಸೆ, ಕುತೂಹಲ, ಕನಸುಗಳು ಏನಾಗಿರುತ್ತದೆ ಅನ್ನೋದನ್ನು ಹೇಳುವುದಕ್ಕೆ ಫ್ಯಾಂಟಸಿ ಬೇಕಿತ್ತು. ಆ ಪಾತ್ರವೇ ಫ್ಯಾಂಟಸಿ ಆಗಿರೋದ್ರಿಂದ, ಕತೆಯಲ್ಲಿ ಅದನ್ನು ತರಬೇಕಾಯ್ತು. ಜೊತೆಗೆ ಏಲಿಯನ್ ಪಾತ್ರದ ಮೂಲಕ ಸಮಾಜ, ನಮ್ಮ ಸುತ್ತಮುತ್ತಲ ವಿಷಯಗಳನ್ನು ನೋಡುವ ಪ್ರಯತ್ನ ಮಾಡಿದ್ದೀನಿ.
- ಕನ್ನಡದ ಸಿನಿಮಾ ಟ್ರೆಂಡ್ ಹಾಗೂ ಕನ್ನಡದ ವೀಕ್ಷಕರ ಮನಸ್ಥಿತಿಗೆ ಈ ರೀತಿಯ ಚಿತ್ರ ಒಗ್ಗುವುದಾ?
ಇದು ಸೈನ್ಸ್ ಸಿನಿಮಾ ಅಲ್ಲ, ಭಾವನೆಗಳಿಂದ ಕೂಡಿದ ಸಿನಿಮಾ. ದೇಹದಲ್ಲಿರುವ ಕ್ರೋಮೋಸೋಮ್ಗಳು ಭಾವನೆಗಳಿಂದಾಗಿ ಕ್ರಿಯಾಶೀಲವಾಗಿರುತ್ತವೆ. ಗಂಡು-ಹೆಣ್ಣು ಸಂತೋಷವಾಗಿದ್ದಾಗ ಅವುಗಳು ವರ್ತನೆಯೇ ಬೇರೆ ರೀತಿ. ಹಾಗಾಗಿ ಇಡೀ ಚಿತ್ರ ಭಾವನಾತ್ಮಕವಾಗಿ ವೀಕ್ಷಕರನ್ನು ಹಿಡಿದಿಡುತ್ತದೆ. ಈ ರೀತಿಯ ಕತೆಯನ್ನು ಜನರ ಮುಂದೆ ಒಯ್ಯುವುದು ಸವಾಲೇ. ಕತೆ ನಮಗೆ ಎಷ್ಟೇ ಒಪ್ಪಿಗೆಯಾಗಿದ್ದರೂ, ಜನರ ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಅಲ್ಲವೆ ಚಿತ್ರದ ಯಶಸ್ಸು ನಿಂತಿರುವುದು? ಒಂದೇ ಒಂದು ವಿಶ್ವಾಸದ ಸಂಗತಿಯೇನೆಂದರೆ, ಚಿತ್ರಸಿದ್ಧವಾದಾಗ ಆಟೋ ಡ್ರೈವರ್ಗಳು, ಗೃಹಿಣಿಯರು ಸೇರಿದಂತೆ ಹಲವರಿಗೆ ತೋರಿಸಿದ್ದೆ. ಅವರೆಲ್ಲರೂ ನೋಡಿ ಮೆಚ್ಚಿದರು. ಇದು ನನ್ನೊಳಗೆ ವಿಶ್ವಾಸ ಮೂಡಿಸಿತು.
- ನಿಮ್ಮ ತಂಡ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿದೆ. ಇಂತಹ ಪ್ರಯೋಗಗಳು ಎಷ್ಟು ಬೇಕು? ಕನ್ನಡ ವೀಕ್ಷಕರು ಹೇಗೆ ಸ್ವೀಕರಿಸುತ್ತಾ ಬಂದಿದ್ದಾರೆ?
ಈ ರೀತಿಯ ಪ್ರಯತ್ನಗಳು, ಪ್ರಯೋಗಗಳು ಸತತವಾಗಿ, ನಿರಂತರವಾಗಿ ಆಗಬೇಕು. ಆಗ ಜನರಲ್ಲೂ ಇಂತಹ ಚಿತ್ರಗಳ ಅಭಿರುಚಿ ಬೆಳೆಯುತ್ತೆ. ಆದರೆ ವಿಭಿನ್ನ ಪ್ರಯೋಗಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಧ್ಯವಾಗುವುದಿಲ್ಲ. ನಮ್ಮಚಿತ್ರಗಳಿಗೆ ನಿರ್ಮಾಪಕರು ಸಿಕ್ಕುವುದಿಲ್ಲ. ನಾವೇ ಹಣ ಹೊಂದಿಸಿಕೊಂಡು ಚಿತ್ರ ನಿರ್ಮಿಸಬೇಕು. ಇದರಿಂದಾಗಿ ಸಿನಿಮಾ ನಿರ್ಮಾಣದಲ್ಲಿ ವಿಳಂಬವಾಗುತ್ತದೆ. ಜನರಿಗೆ ಅಭ್ಯಾಸ ಮಾಡಿಸುವ ಅಗತ್ಯವಿದೆ. ಈಗ ನೋಡಿ ಮಣಿರತ್ನಂ ಚಿತ್ರಗಳು ಎಂದರೆ ಹೀಗೆ ಎಂಬುದು ಜನರಿಗೆ ಗೊತ್ತು. ಅವರ ಸಿನಿಮಾಗಳನ್ನು ನೋಡಲು ಹೋಗುತ್ತಾರೆ. ಹಾಗೇ ಕನ್ನಡದ ಪ್ರೇಕ್ಷಕರಿಗೂ ಅಭ್ಯಾಸ ಮಾಡಿಸಬೇಕಿದೆ.
- ಈ ಚಿತ್ರದಿಂದ ಏನನ್ನ ನಿರೀಕ್ಷಿಸ್ತಾ ಇದ್ದೀರಿ?
ಇದು ಹೊಸ ರೀತಿಯ ಕತೆ. ರಾಮಾ ರಾಮ ರೇ ಚಿತ್ರದ ಮೂಲಕ ಸಿಕ್ಕ ಇಮೇಜ್ ಇನ್ನಷ್ಟು ಗಟ್ಟಿಯಾಗುತ್ತದೆ ಎಂಬ ನಿರೀಕ್ಷೆ ಇದೆ. ನನ್ನನ್ನು, ನಮ್ಮ ಪ್ರಯತ್ನವನ್ನು ಕನ್ನಡದ ಪ್ರೇಕ್ಷಕರು ಗಟ್ಟಿಯಾಗಿ ನಂಬುತ್ತಾರೆ ಎಂಬ ಭರವಸೆ ಇಟ್ಟುಕೊಂಡಿದ್ದೇನೆ.







