ಅನಿಯಮಿತ ಮಳೆ, ಬರ, ಪ್ರವಾಹ ಮತ್ತು ಬದಲಾಗುತ್ತಿರುವ ಬೆಳೆ ಪದ್ಧತಿಗಳೊಂದಿಗೆ ಹವಾಮಾನ ಬದಲಾವಣೆಯು ಗ್ರಾಮೀಣ ಜೀವನೋಪಾಯಕ್ಕೆ ನಿರಂತರವಾಗಿ ಬೆದರಿಕೆಯನ್ನು ಒಡ್ಡುತ್ತಿದೆ. ಈ ಹಿನ್ನೆಲೆಯಲ್ಲಿ, ಸೆಲ್ಕೊ ಫೌಂಡೇಶನ್ ಮತ್ತು ಪುಟ್ಟಣ್ಣಯ್ಯ ಫೌಂಡೇಶನ್, ಪ್ರಮುಖ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ, ಮಂಡ್ಯ ಜಿಲ್ಲೆಯ ಪಾಂಡವಪುರ ಜುಲೈ 19ರಂದು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ‘ ಸೌರಶಕ್ತಿ-ಸ್ವ ಉದ್ಯೋಗ ಮೇಳ‘ ಹಮ್ಮಿಕೊಳ್ಳಲಾಗಿದೆ.
ಬುಧವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯನರು, ಸೌರಶಕ್ತಿ ಸ್ವ ಉದ್ಯೋಗ ಮೇಳ ಕುರಿತು ಮಾಹಿತಿ ನೀಡಿದರು.
“ಗ್ರಾಮೀಣ ಭಾರತದಲ್ಲಿ, ಸ್ವಸಹಾಯ ಗುಂಪುಗಳು ಪ್ರಬಲ ವೇದಿಕೆಗಳಾಗಿ ಹೊರಹೊಮ್ಮಿವೆ. ವಿಶೇಷವಾಗಿ ಮಹಿಳೆಯರ ದೃಷ್ಟಿಕೋನದಲ್ಲಿ ಈ ಗುಂಪುಗಳ ಪ್ರಭಾವ ದೊಡ್ಡದು. ಸಾಲ, ಕಲ್ಯಾಣ ಯೋಜನೆಗಳು ಮತ್ತು ಮಾರುಕಟ್ಟೆ ಅವಕಾಶಗಳನ್ನು ಸೇರಿದಂತೆ, ಸ್ವಸಹಾಯ ಗುಂಪುಗಳು ತಳಮಟ್ಟದ ನಾಯಕತ್ವ ಮತ್ತು ಸಮುದಾಯ ಭಾಗವಹಿಸುವಿಕೆಯನ್ನು ಸಾಧ್ಯವಾಗಿಸಿವೆ. ಈ ಸಂಘಗಳನ್ನು ಒಂದೆಡೆ ಸೇರಿಸುವ ಮೂಲಕ ಸ್ತ್ರೀ ಸಬಲೀಕರಣದ ಮೂಲಕ ಮತ್ತಷ್ಟು ಹೊಸ ಸಾಧ್ಯತೆಯನ್ನು ಹುಡುಕುವುದು ಈ ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದರು.
“ಟಿಎಪಿಸಿಎಂಎಸ್ ರೈತ ಸಭಾಭವನ, ಪಾಂಡವಪುರದಲ್ಲಿ ನಡೆಯಲಿರುವ ಒಂದು ದಿನದ ಕಾರ್ಯಕ್ರಮದಲ್ಲಿ ಸ್ವಸಹಾಯ ಗುಂಪುಗಳಿಗೆ ಹವಾಮಾನ ಸ್ನೇಹಿ ಜೀವನೋಪಾಯ ಪರಿಹಾರಗಳ ಮೂಲಕ ಸಬಲೀಕರಣ ಎಂಬ ವಿಷಯದಲ್ಲಿ ಹಿನ್ನೆಲೆಯಲ್ಲಿ ಸಂವಾದ, ಪ್ರಾತ್ಯಕ್ಷಿಕೆ, ಮಾದರಿ ಪ್ರಯೋಗಗಳ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ದೇಶಗಳ ಕುರಿತು ಅವರು ಹೀಗೆ ಹೇಳಿದರು:
- ಕೃಷಿ ಮತ್ತು ಗ್ರಾಮೀಣ ಉದ್ಯಮಗಳಲ್ಲಿನ ಹವಾಮಾನ ಅಪಾಯಗಳು ಮತ್ತು ಜೀವನೋಪಾಯದ ಸವಾಲುಗಳನ್ನು ಗುರುತಿಸಲು ಸಮುದಾಯದ ಧ್ವನಿಗಳನ್ನು ದಾಖಲಿಸುವುದು.
- ಆದಾಯ ಉತ್ಪಾದನೆ ಮತ್ತು ಸಂಪನ್ಮೂಲ ಉತ್ತಮಗೊಳಿಸುವಿಕೆಗಾಗಿ ಪ್ರಾಯೋಗಿಕ, ಹವಾಮಾನ-ಸ್ಮಾರ್ಟ್ ತಂತ್ರಜ್ಞಾನಗಳನ್ನು ಪ್ರದರ್ಶಿಸುವುದು.
- ಸ್ವಸಹಾಯ ಗುಂಪುಗಳ ಉದ್ಯಮಗಳಿಗೆ ಹಣಕಾಸು, ತರಬೇತಿ ಮತ್ತು ನೀತಿಗತ ಬೆಂಬಲ ಒದಗಿಸಲು ಕಾರ್ಯಕ್ರಮ
- ಹವಾಮಾನ ಪ್ರತಿರೋಧಕತೆ ತಂತ್ರಗಳನ್ನು ಅಸ್ತಿತ್ವದಲ್ಲಿರುವ ವ್ಯವಸ್ಥೆಗಳಲ್ಲಿ ಸಂಯೋಜಿಸಲು ಸಹಯೋಗದ ಮೂಲಕ ಸಂಬಂಧಗಳ ನಿರ್ಮಾಣ.
ಮುಂದುವರೆದು, “ಈ ಕಾರ್ಯಕ್ರಮವು ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು, ಎನ್ಆರ್ಎಲ್ಎಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪುಟ್ಟಣ್ಣಯ್ಯ ಫೌಂಡೇಶನ್ ಮತ್ತು ಇತರ ತಳಮಟ್ಟದ ಪಾಲುದಾರ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡಂತೆ ವಿವಿಧ ಮಧ್ಯಸ್ಥಗಾರರನ್ನು ಒಟ್ಟುಗೂಡಿಸಲಿದೆ. ಕಸಬಾ ಹೋಬಳಿಯ ಸ್ವಸಹಾಯ ಗುಂಪುಗಳು, ರೈತ ಸಮೂಹಗಳು, ಪ್ರಾಥಮಿಕ ಕೃಷಿ ಸಾಲ ಸಂಘಗಳು, ಹಣಕಾಸು ಸಂಸ್ಥೆಗಳು, ಸಾಮರ್ಥ್ಯ-ನಿರ್ಮಾಣ ಏಜೆನ್ಸಿಗಳು ಮತ್ತು ತಂತ್ರಜ್ಞಾನ ಒದಗಿಸುವವರನ್ನು ಸಹ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ’ ಎಂದು ಶಾಸಕರು ಮಾಹಿತಿ ನೀಡಿದರು.
“ಈ ಕಾರ್ಯಕ್ರಮದಲ್ಲಿ ಸ್ವಸಹಾಯ ಗುಂಪಿನ ಬಹುಮುಖ್ಯ ಸಾಧಕರಾದ ಶ್ರೀಮತಿ ಪದ್ಮಾಕ್ಷಿ, ಶ್ರೀಮತಿ ಮಂಗಳಮ್ಮ, ಶ್ರೀಮತಿ ಗೀತಾ ಸಜ್ಜನ್ / ಶ್ರೀಮತಿ ಗಿರಿಜಾ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.”
“ಕ್ಷೇತ್ರದ 800ಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳ ಸದಸ್ಯರು ಪಾಲ್ಗೊಳ್ಳುವ ನಿರೀಕ್ಷೆ ಇರುವುದಾಗಿ ಹೇಳಿದ ಅವರು, ಈ ಮೇಳದಲ್ಲಿ, ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಕೆ. ಆರ್. ನಂದಿನಿ (ZP CEO), ಸೆಲ್ಕೋ ಫೌಂಡೇಷನ್ ನಿರ್ದೇಶಕರಾದ ಶ್ರೀಮತಿ ಹುದಾ ಜಾಫರ್, ಕರ್ನಾಟಕ ರಾಜ್ಯ ರೈತ ಸಂಘ, ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷರಾದ ಎ. ಎಲ್ ಕೆಂಪೂಗೌಡ , ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀ ವಿ. ಎಸ್. ಅಶೋಕ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಶ್ರೀಮತಿ ಕೆ. ಎನ್ ರೂಪಶ್ರೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀ ರಾಜಮೂರ್ತಿ ಎಸ್, ಜಿಲ್ಲಾ ಕೈಗಾರಿಕಾ ಕೇಂದ್ರ ಪ್ರತಿನಿಧಿ, ನಬಾರ್ಡ್ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ’ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಇದನ್ನೂ ಓದಿ | ಪಂಚಾಯಿತಿ ಹ್ಯಾಕಾಥಾನ್: ಸರ್ಕಾರಿ ಸೇವೆ ಜನರ ಬಳಿಗೆ ಒಯ್ದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ
ಸುದ್ದಿಗೋಷ್ಠಿಯಲ್ಲಿ ಸೆಲ್ಕೋಫೌಂಡೇಷನ್ನ ಪ್ರಕಾಶ್, ಪುಟ್ಟಣ್ಣಯ್ಯ ಫೌಂಡೇಷನ್ನ ರಣಜಿತ್ ಉಪಸ್ಥಿತರಿದ್ದರು.







