“ಕಾವ್ಯವೆಂದರೆ ಕೇವಲ ಪಾಠದ ವಿಷಯವಲ್ಲ, ಜೀವನವನ್ನು ಅರ್ಥಮಾಡಿಕೊಳ್ಳುವ ದಾರಿ” ಎಂದು ಕಿರಂ ನಂಬಿದ್ದರು ಎಂದು ಜನಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಪ್ರದೀಪ್ ಮಾಲ್ಗುಡಿಯವರು ಹೇಳಿದರು. ತಾಯ್ನಾಡು.ನ್ಯೂಸ್ನೊಂದಿಗೆ ಮಾತನಾಡಿದ ಅವರು ಕಿರಂ ಅವರ ನೆನಪುಗಳನ್ನು ಹಂಚಿಕೊಂಡರು.
“ಕಿರಂ ಮೇಷ್ಟ್ರು ನನಗೆ ಪ್ರೀತಿಯ ಗುರುಗಳಾಗಿದ್ದರು” ಎಂದು ಭಾವುಕರಾಗಿ ಹಲವು ನೆನಪುಗಳನ್ನು ಹಂಚಿಕೊಂಡರು. ಕಿರಂ ಅವರು ಕೇವಲ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರಲಿಲ್ಲ; ಅವರು ಕಾವ್ಯ, ನಾಟಕ, ಮತ್ತು ಜನಪದ ಕಲೆಯನ್ನು ಜೀವನದ ತಿರುಳಾಗಿ ಒಡಮೂಡಿಸಿದ ಮಹಾನ್ ಚೇತನವಾಗಿದ್ದರು. “ಕಾವ್ಯವೆಂದರೆ ಕೇವಲ ಪಾಠದ ವಿಷಯವಲ್ಲ, ಜೀವನವನ್ನು ಅರ್ಥಮಾಡಿಕೊಳ್ಳುವ ದಾರಿ” ಎಂದು ತಿಳಿದಿದ್ದ ಕಿರಂ, ತಮ್ಮ ಕಾವ್ಯ ಮಂಡಲ ಸಂಸ್ಥೆಯ ಮೂಲಕ ಕವಿತೆಯನ್ನು ಜನಸಾಮಾನ್ಯರಿಗೆ ತಲುಪಿಸಿದರು.
ಶಿವರಾತ್ರಿಯಂದು ‘ಕಾವ್ಯ ಶಿವರಾತ್ರಿ’ ಆಚರಿಸುವ ಅವರ ವಿಶಿಷ್ಟ ಶೈಲಿಯು ಕಾವ್ಯದ ಆತ್ಮವನ್ನು ಜನರ ಮನಸಿನಲ್ಲಿ ಜಾಗೃತಗೊಳಿಸಿತು. ಶಿಷ್ಯರಾದ ಡಾ. ಪ್ರದೀಪ್ ಮಾಲ್ಗುಡಿಯವರು, 2011ರಲ್ಲಿ, ಕಿರಂ ನಾಗರಾಜ ಅವರ ಸ್ಮರಣೆಗಾಗಿ ‘ಕಿರಂ ನುಡಿನಮನ’ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಡಾ. ಪ್ರದೀಪ್ ಮತ್ತು ಸಂಸಾ ಸುರೇಶ್ ತಮ್ಮ ಗುರುಗಳಿಗೆ ಒಂದು ಶಾಶ್ವತ ಗೌರವದ ಹಾದಿಯನ್ನು ರೂಪಿಸಿದರು. ಈ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಯು. ಆರ್. ಅನಂತಮೂರ್ತಿ, ಚಂದ್ರಶೇಖರ ಕಂಬಾರ, ಎಸ್. ಜಿ. ಸಿದ್ದರಾಮಯ್ಯ, ಮತ್ತು ಆರ್. ಜೆ. ಹಳ್ಳಿ ನಾಗರಾಜ್, ಎಚ್. ಎಲ್. ಪುಷ್ಪ, ಸಿದ್ದಲಿಂಗಯ್ಯನಂತಹ ಕವಿಗಳು ಭಾಗವಹಿಸಿ, ಕಾವ್ಯ ಗೋಷ್ಠಿಯನ್ನು ಅದ್ಭುತಗೊಳಿಸಿದ್ದರು.

ಕೃತಿ ಬಿಡುಗಡೆ:
ಈ ಸಂದರ್ಭದಲ್ಲಿ ಡಾ. ಪ್ರದೀಪ್ ಸಂಪಾದಿಸಿದ ‘ನಿಜದ ನಾಡೋಜ’ ಎಂಬ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಈ ಪುಸ್ತಕವು ಕಿರಂ ಅವರ ಕುರಿತಾದ ಕವಿತೆಗಳು, ಲೇಖನಗಳ ಸಂಗ್ರಹವಾಗಿದ್ದು, ಅವರಿಗೆ ಸಮರ್ಪಿತವಾದ ಅಭಿನಂದನಾ ಗ್ರಂಥದ ಕನಸನ್ನು ಸಾಕಾರಗೊಳಿಸಿತು. “ಕಿರಂ ಸರ್ಗೆ ಜೀವಂತಿರುವಾಗಲೇ ಅಭಿನಂದನಾ ಗ್ರಂಥ ಕೊಡಬೇಕಿತ್ತು, ಆದರೆ ಅವರಿಗೆ ಗೌರವ ಸ್ವೀಕರಿಸುವುದೇ ಮುಜುಗರವಾಗಿತ್ತು” ಎಂದು ಡಾ. ಪ್ರದೀಪ್ ಭಾವುಕರಾಗಿ ಹೇಳಿದರು.
‘ಕಾಡುವ ಕಿರಂ’ ಕಾರ್ಯಕ್ರಮವು 2012ರಿಂದ ಒಂದು ಸಾಂಸ್ಕೃತಿಕ ಉತ್ಸವವಾಗಿ ವಿಕಸನಗೊಂಡಿದೆ. ಕವಿಗೋಷ್ಠಿಗಳು, ಜನಪದ ಗೀತೆಗಳ ಗಾಯನ, ಮಹಾಕಾವ್ಯ ಪಠನ, ವಿಶೇಷ ಉಪನ್ಯಾಸಗಳು, ಮತ್ತು ನಾಟಕಗಳ ಮೂಲಕ ಕಿರಂ ಅವರ ಒಲವಾದ ಕಾವ್ಯ, ಸಂಗೀತ, ಮತ್ತು ನಾಟಕದ ಜಗತ್ತನ್ನು ಜೀವಂತವಾಗಿಡಲಾಗಿದೆ. ಕಿರಂ ಅವರಿಗೆ ಜನಪದ ಸಾಹಿತ್ಯದ ಬಗ್ಗೆ ವಿಶೇಷ ಆಸಕ್ತಿಯಿತ್ತು; ಅವರು ಪಂಪ, ರನ್ನ, ಕುಮಾರವ್ಯಾಸರಂತಹ ಕನ್ನಡದ ಮಹಾಕವಿಗಳ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿ, ಅವುಗಳನ್ನು ಜನಸಾಮಾನ್ಯರಿಗೆ ಸರಳವಾಗಿ ತಿಳಿಸುತ್ತಿದ್ದರು. “ಪಂಪನ ಕೃತಿಗಳನ್ನು ಉಲ್ಟಾವಾಗಿಯೂ ಓದಿ ಅರ್ಥೈಸಿಕೊಳ್ಳುತ್ತಿದ್ದರು” ಎಂದು ಡಾ. ಪ್ರದೀಪ್ ಅವರ ಸಾಹಿತ್ಯಿಕ ಚಾತುರ್ಯವನ್ನು ಸ್ಮರಿಸಿದ್ದಾರೆ.
ಕಿರಂ ಅವರ ವ್ಯಕ್ತಿತ್ವದ ವಿಶೇಷತೆಯೆಂದರೆ ಅವರ ಜಾತ್ಯತೀತ ಚಿಂತನೆ. ಸಂವಿಧಾನದ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಅವರು, ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. “ಯಾವ ವಿದ್ಯಾರ್ಥಿಯನ್ನಾಗಲಿ, ಸಹೋದ್ಯೋಗಿಯನ್ನಾಗಲಿ, ಕಿರಂ ಸರ್ ಎಂದೂ ತಾರತಮ್ಯ ಮಾಡಲಿಲ್ಲ. ಅವರ ನಗು ಒಂದು ಮಗುವಿನಂತೆ ಮುಗ್ದವಾಗಿತ್ತು” ಎಂದು ಡಾ. ಪ್ರದೀಪ್ ಭಾವುಕರಾಗಿ ಹೇಳಿದರು.
‘ಕಾಡುವ ಕಿರಂ’ ಕಾರ್ಯಕ್ರಮವು ಕಿರಂ ಅವರ ಆದರ್ಶಗಳನ್ನು ಮುಂದುವರೆಸುವ ಸಲುವಾಗಿ ‘ಕಿರಂ ಪುರಸ್ಕಾರ’ವನ್ನು ಸ್ಥಾಪಿಸಿತು. ಈ ಪುರಸ್ಕಾರವು ಪತ್ರಿಕೋದ್ಯಮ, ಸಾಹಿತ್ಯ, ಅನುವಾದ, ಮತ್ತು ಜನಪರ ಹೋರಾಟದಲ್ಲಿ ಕೊಡುಗೆ ನೀಡಿದವರನ್ನು ಗೌರವಿಸುತ್ತದೆ. ಈ ವರ್ಷ, ಎಂ. ಗೋಪಾಲ್ ಮತ್ತು ಡಾ. ಎಂ. ಉಷಾ ಅವರಂತಹ ಹಲವು ಸಾಧಕರಿಗೆ ಈ ಪುರಸ್ಕಾರ ನೀಡಲಾಗುತ್ತಿದೆ. “ಈ ಪುರಸ್ಕಾರ ದೊಡ್ಡ ಹಣದಾನವಲ್ಲ, ಆದರೆ ಕಿರಂ ಅವರ ಚಿಂತನೆಯನ್ನು ಮುಂದುವರೆಸುವವರಿಗೆ ಒಂದು ಸಾಂಕೇತಿಕ ಗೌರವ” ಎಂದು ಡಾ. ಪ್ರದೀಪ್ ತಿಳಿಸಿದರು.
13 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಕ್ರಮವು ಕಿರಂ ಅವರ ಆದರ್ಶಗಳನ್ನು ಜನರಿಗೆ ತಲುಪಿಸುವ ಒಂದು ಜೀವಂತ ವೇದಿಕೆಯಾಗಿದೆ. “ಇಂತಹ ಕಾರ್ಯಕ್ರಮ ಎಲ್ಲಿಯೂ ಇಲ್ಲ. ಕಿರಂ ಸರ್ನ ಚಿಂತನೆಯನ್ನು ಜನರಿಗೆ ತಲುಪಿಸುವ ಈ ಯಾತ್ರೆಯನ್ನು ಎಲ್ಲರ ಬೆಂಬಲದೊಂದಿಗೆ ಮುಂದುವರೆಸುತ್ತೇವೆ” ಎಂದು ಡಾ. ಪ್ರದೀಪ್ ಭರವಸೆಯಿಂದ ಹೇಳಿದರು.
ಅಹೋರಾತ್ರಿ ಕಾರ್ಯಕ್ರಮದ ವಿವರ:
ಜನಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು ಆರ್ಟ್ ಫೌಂಡೇಷನ್, ಮತ್ತು ಕಿರಂ ಪ್ರಕಾಶನದಿಂದ ಆಗಸ್ಟ್ 7, 2025ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡದ ಖ್ಯಾತ ವಿಮರ್ಶಕ ಪ್ರೊ. ಕಿ. ರಂ. ನಾಗರಾಜ ಅವರ ಸ್ಮರಣಾರ್ಥ 13ನೇ ವರ್ಷದ ‘ಅಹೋರಾತ್ರಿ ಕಾಡುವ ಕಿರಂ’ ಕಾರ್ಯಕ್ರಮ ಆಯೋಜನೆಗೊಂಡಿದೆ. ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಲಿದ್ದು, ‘ಕಾಡುವ ಕಿರಂ ಹೊಸ ಕವಿತೆಗಳು 2025’ ಕೃತಿಯನ್ನು ಡಾ. ಎಂ. ಎಸ್. ಮೂರ್ತಿ ಬಿಡುಗಡೆ ಮಾಡಲಿದ್ದಾರೆ. ಕವಿಗೋಷ್ಠಿ, ಜನಪದ ಗಾಯನ, ಮತ್ತು ಉಪನ್ಯಾಸಗಳೊಂದಿಗೆ, ಎಂ. ಗೋಪಾಲ್ (ಜನಪರ ಹೋರಾಟ), ಡಾ. ಎಂ. ಉಷಾ (ಸ್ತ್ರೀವಾದ, ಸಾಹಿತ್ಯ), ಪ್ರೊ. ಎಂ. ಜಿ. ಚಂದ್ರಶೇಖರಯ್ಯ (ಸಾಹಿತ್ಯ), ಶ್ರೀನಿವಾಸ ನಟೇಕರ್ (ವೈಚಾರಿಕತೆ, ರಂಗಭೂಮಿ), ಡಾ. ಕೂಡ್ಲೂರು ವೆಂಕಟಪ್ಪ (ಸಾಹಿತ್ಯ, ಸಂಶೋಧನೆ), ಮತ್ತು ಟಿ. ನಾರಾಯಣ್ (ಚಿತ್ರಕಲೆ) ಅವರಿಗೆ ‘ಕಿರಂ ಪುರಸ್ಕಾರ’ ಪ್ರದಾನ ಮಾಡಲಾಗುತ್ತದೆ.







