ಬಿಹಾರದ ರಾಜಕೀಯ ವಲಯದಲ್ಲಿ ಭಾರೀ ಗದ್ದಲ ಸೃಷ್ಟಿಯಾಗಿದೆ. ಉಪಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ವಿಜಯ್ ಕುಮಾರ್ ಸಿನ್ಹಾ ಎರಡು ಮತದಾರ ಗುರುತಿನ ಚೀಟಿಗಳನ್ನು (EPIC) ಹೊಂದಿದ್ದಾರೆ ಎಂಬ ಆರೋಪದ ಮೇಲೆ ಚುನಾವಣಾ ಆಯೋಗವು ಅವರಿಗೆ ನೋಟಿಸ್ ಜಾರಿಗೊಳಿಸಿದೆ. ರಾಷ್ಟ್ರೀಯ ಜನತಾ ದಳದ (RJD) ನಾಯಕ ತೇಜಸ್ವಿ ಯಾದವ್ ಅವರು ಈ ಆರೋಪವನ್ನು ಮಾಡಿದ ಬೆನ್ನಲ್ಲೇ, ಆಗಸ್ಟ್ 10ರಂದು ಬಂಕಿಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಾಧಿಕಾರಿಗಳು ಸಿನ್ಹಾ ಅವರಿಗೆ ವಿವರಣೆ ಕೋರಿ ನೋಟಿಸ್ ರವಾನಿಸಿದ್ದಾರೆ. ಆಗಸ್ಟ್ 14ರ ಸಂಜೆ 5 ಗಂಟೆಯೊಳಗೆ ಈ ವಿಷಯಕ್ಕೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.
ತೇಜಸ್ವಿ ಯಾದವ್ ಅವರು ಈ ಆರೋಪವನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಸಿನ್ಹಾ ಅವರ ಹೆಸರು ಲಕ್ಕೀಸರಾಯ್ (EPIC ಸಂಖ್ಯೆ: IAF3939337) ಮತ್ತು ಬಂಕಿಪುರ (EPIC ಸಂಖ್ಯೆ: AFS0853341) ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ ಎಂದು ದಾಖಲೆಗಳೊಂದಿಗೆ ತೋರಿಸಿದ್ದಾರೆ. ಇದರ ಜೊತೆಗೆ, ಒಂದು ಪಟ್ಟಿಯಲ್ಲಿ ಸಿನ್ಹಾ ಅವರ ವಯಸ್ಸು 57 ಎಂದೂ, ಮತ್ತೊಂದರಲ್ಲಿ 60 ಎಂದೂ ದಾಖಲಾಗಿರುವುದು ವಿವಾದಕ್ಕೆ ಕಾರಣವಾಗಿದೆ. “ಇದು ಮೋಸವಲ್ಲವೇ? ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ನಂತರವೂ ಇಂತಹ ದೋಷಗಳು ಉಳಿದಿವೆ. ಇದಕ್ಕೆ ಯಾರು ಜವಾಬ್ದಾರರು? ಸಿನ್ಹಾ ರಾಜೀನಾಮೆ ನೀಡುತ್ತಾರೆಯೇ?” ಎಂದು ತೇಜಸ್ವಿ ಪ್ರಶ್ನಿಸಿದ್ದಾರೆ.
ಈ ಆರೋಪಕ್ಕೆ ಸಿನ್ಹಾ ತಿರುಗೇಟು ನೀಡಿದ್ದು, ತಾವು ಎರಡು ಗುರುತಿನ ಚೀಟಿಗಳನ್ನು ಉದ್ದೇಶಪೂರ್ವಕವಾಗಿ ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. “ನಾನು ಮತ್ತು ನನ್ನ ಕುಟುಂಬದವರ ಹೆಸರು ಈ ಹಿಂದೆ ಬಂಕಿಪುರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿತ್ತು. ಏಪ್ರಿಲ್ 2024ರಲ್ಲಿ, ಲಕ್ಕೀಸರಾಯ್ ಕ್ಷೇತ್ರದಲ್ಲಿ ನನ್ನ ಹೆಸರನ್ನು ಸೇರಿಸಲು ಅರ್ಜಿ ಸಲ್ಲಿಸಿದೆ. ಅದೇ ಸಮಯದಲ್ಲಿ ಬಂಕಿಪುರದಿಂದ ಹೆಸರು ತೆಗೆಯಲು ಫಾರ್ಮ್ ಭರ್ತಿ ಮಾಡಿದ್ದೆ. ಆದರೆ, ಕಾರಣಾಂತರದಿಂದ ನನ್ನ ಹೆಸರು ಬಂಕಿಪುರದಿಂದ ತೆಗೆಯಲಾಗಿಲ್ಲ,” ಎಂದು ಸಿನ್ಹಾ ವಿವರಿಸಿದ್ದಾರೆ. ತಾವು ಕೇವಲ ಒಂದೇ ಸ್ಥಳದಿಂದ (ಲಕ್ಕೀಸರಾಯ್) ಮತ ಚಲಾಯಿಸುತ್ತೇನೆ ಎಂದು ಒತ್ತಿಹೇಳಿದ್ದಾರೆ. ತೇಜಸ್ವಿ ಯಾದವ್ ತಮ್ಮ ವಿರುದ್ಧ ತಪ್ಪು ಆರೋಪ ಮಾಡಿ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ ಸಿನ್ಹಾ, ತೇಜಸ್ವಿಯವರಿಂದ ಕ್ಷಮೆಯಾಚನೆಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ | ಬಿಹಾರ ಚುನಾವಣೆ 2025: ತೇಜಸ್ವಿಯ ಹೆಸರು ಕಾಣೆಯೇ? ಇಸಿ ಸ್ಪಷ್ಟ.
ಈ ವಿವಾದವು ಬಿಹಾರದಲ್ಲಿ ಚುನಾವಣಾ ಪರಿಷ್ಕರಣೆಗೆ ಸಂಬಂಧಿಸಿದಂತೆ ಒಡ್ಡಿರುವ ಸವಾಲುಗಳನ್ನು ಎತ್ತಿ ತೋರಿಸಿದೆ. ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ದೋಷಗಳನ್ನು ತೇಜಸ್ವಿ ಟೀಕಿಸಿದ್ದಾರೆ. ಇದೇ ಸಂದರ್ಭದಲ್ಲಿ, ತೇಜಸ್ವಿ ಯಾದವ್ ಕೂಡ ಎರಡು ಮತದಾರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿದ್ದಾರೆ. ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ತೇಜಸ್ವಿ, “ಎರಡು ಗುರುತಿನ ಚೀಟಿಗಳನ್ನು ಚುನಾವಣಾ ಆಯೋಗವೇ ತಪ್ಪಾಗಿ ನೀಡಿದೆ. ಇದಕ್ಕೆ ನಾನೇಕೆ ವಿವರಣೆ ನೀಡಬೇಕು?” ಎಂದು ಪ್ರಶ್ನಿಸಿದ್ದಾರೆ.ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.







