ಭಾರತದ ಸಿಲಿಕಾನ್ ಸಿಟಿ ಎಂದೇ ಪ್ರಖ್ಯಾತಿ ಪಡೆದಿರುವ ಬೆಂಗಳೂರು, ಈಗ ತನ್ನ ಜನದಟ್ಟಣೆಯ ರಸ್ತೆಗಳಿಂದ ಟ್ರಾಫಿಕ್ ಸಿಟಿ ಎಂದೇ ಹೆಸರುವಾಸಿಯಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ, ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್ (ಬಿಎಂಟಿಸಿ) ಬಸ್ಗಳಿಂದ ಆಗುತ್ತಿರುವ ದುರಂತಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಇವೆ. ಈ ಘಟನೆಗಳು ಸಾರ್ವಜನಿಕ ಸಾರಿಗೆ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿವೆ.
ಜಯನಗರ 4ನೇ ಬ್ಲಾಕ್ನಲ್ಲಿ 64ವರ್ಷದ ಸಂಪಂಗಿ ಎಂಬ ವೃದ್ಧೆಯೊಬ್ಬರು ಬಿಎಂಟಿಸಿ ಬಸ್ನ ಬಾಗಿಲಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಬಿಎಂಟಿಸಿ ಬಸ್ಗಳ ಸುರಕ್ಷತೆಯ ಕೊರತೆಯನ್ನು ಮತ್ತೊಮ್ಮೆ ಒತ್ತಿಹೇಳಿದೆ.
ಜಯನಗರ 4ನೇ ಬ್ಲಾಕ್ ಘಟನೆಯ ವಿವರ
ಇಂದು (ಆಗಸ್ಟ್ 20) ಜಯನಗರ 4ನೇ ಬ್ಲಾಕ್ನಲ್ಲಿ ನಡೆದ ಈ ಘಟನೆಯಲ್ಲಿ, ಸಂಪಂಗಿ ಅವರು ಬಿಎಂಟಿಸಿ ಬಸ್ಗೆ ಏರುತ್ತಿರುವಾಗಲೇ ಚಾಲಕ ಬಾಗಿಲನ್ನು ಮುಚ್ಚಿದ್ದಾನೆ. ಇದರಿಂದಾಗಿ ಸಂಪಂಗಿಯವರ ಕೈ ಬಾಗಿಲಿನ ಒಳಗೆ ಸಿಲುಕಿದರೆ, ದೇಹ ಹೊರಗಡೆ ಉಳಿಯಿತು. ಬಸ್ ಚಲಿಸಿದಾಗ ಅವರು ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟರು. ಈ ಘಟನೆಯು ಚಾಲಕನ ಎಡವಟ್ಟಿನಿಂದಾಗಿ ಸಂಭವಿಸಿದೆ ಎಂದು ಆರೋಪಿಸಲಾಗಿದ್ದು, ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕ ಘಟನೆಯ ನಂತರ ಓಡಿಹೋಗಿದ್ದಾನೆ ಎಂದು ವರದಿಯಾಗಿದೆ.
ಬಿಎಂಟಿಸಿ ಬಸ್ ದುರಂತಗಳ ಸಂಖ್ಯೆ ಏರಿಕೆ
ಜಯನಗರದ ಈ ಘಟನೆ ಒಂದು ಪ್ರತ್ಯೇಕ ಘಟನೆಯಲ್ಲ. ಕಳೆದ ಕೆಲವು ದಿನಗಳಲ್ಲಿ ಬಿಎಂಟಿಸಿ ಬಸ್ಗಳಿಗೆ ಸಂಬಂಧಿಸಿದ ಹಲವು ದುರಂತಗಳು ಸಂಭವಿಸಿವೆ. ಈ ಘಟನೆಗಳು ಬಿಎಂಟಿಸಿ ಬಸ್ಗಳ ಚಾಲಕರ ತರಬೇತಿಯ ಕೊರತೆ, ಯಾಂತ್ರಿಕ ದೋಷಗಳು, ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸುರಕ್ಷತಾ ಮಾನದಂಡಗಳ ಕುರಿತು ಗಂಭೀರ ಚಿಂತನೆಯನ್ನು ಹುಟ್ಟುಹಾಕಿವೆ. ಪೀಣ್ಯದಲ್ಲಿ ಸಂಭವಿಸಿದ್ದ ಘಟನೆಯಲ್ಲಿ, ಕಂಡಕ್ಟರ್ ರಮೇಶ್ಗೆ ಎಲೆಕ್ಟ್ರಿಕ್ ಬಸ್ ಚಾಲನೆಯ ಅನುಭವವಿರಲಿಲ್ಲ. ಬಿಎಂಟಿಸಿ ಚಾಲಕರಿಗೆ ಕಟ್ಟುನಿಟ್ಟಾದ ತರಬೇತಿ ಮತ್ತು ಪರೀಕ್ಷೆಗಳ ಅಗತ್ಯವಿದೆ. ಅಲ್ಲದೇ ಘಟನೆಯ ನಂತರ ಚಾಲಕರು ಮತ್ತು ಕಂಡಕ್ಟರ್ಗಳು ಪರಾರಿಯಾಗುವುದು ಸಾಮಾನ್ಯವಾಗಿದೆ, ಇದು ಬೇಜವಾಬ್ದಾರಿಯ ಕೊರತೆಯನ್ನು ತೋರಿಸುತ್ತದೆ.
ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗಳನ್ನು ಚಾಲಕರಿಂದ ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. “ಎಲೆಕ್ಟ್ರಿಕ್ ಬಸ್ನಲ್ಲಿ ಪ್ರಯಾಣಿಸಿದವರಿಗೆ ಗೊತ್ತಿರುತ್ತದೆ, ಚಾಲಕ ಬಸ್ಸನ್ನು ರೇಸಿಂಗ್ ಕಾರಿನಂತೆ ಚಲಾಯಿಸುತ್ತಾನೆ. ಒಮ್ಮೊಮ್ಮೆ ಒಳಗೆ ನಿಲ್ಲಲು ಭಯವಾಗುತ್ತದೆ. ಕೆಲವೊಂದು ಬಾರಿ ವೃದ್ಧರನ್ನು ಲೆಕ್ಕಿಸದೆ ಹಾಗೆಯೇ ಹತ್ತಿದ ತಕ್ಷಣ ವೇಗವಾಗಿ ಚಲಾಯಿಸುತ್ತಾರೆ. ಹಲವರು ನಿಯಂತ್ರಣ ತಪ್ಪಿ ಬಸ್ಸಿನಲ್ಲಿ ಬಿದ್ದಿರುವ ಉದಾಹರಣೆಗಳು ತುಂಬಾ ಇವೆ.
ಬಿಎಂಟಿಸಿ ಅಧಿಕಾರಿಗಳು ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಗಿರುವ ಕ್ರಮಗಳು ಸಾಕಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಸರ್ಕಾರವು ಚಾಲಕರಿಗೆ ಕಟ್ಟುನಿಟ್ಟಾದ ತರಬೇತಿ, ವಾಹನಗಳ ನಿಯಮಿತ ತಪಾಸಣೆ, ಮತ್ತು ಆಟೋಮೇಟಿಕ್ ಬಾಗಿಲು ಸುರಕ್ಷತಾ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು.
ಇದನ್ನೂ ಓದಿ | ಕಾಂಗ್ರೆಸ್ ಸಮರ್ಪಣಾ ಸಂಕಲ್ಪ: ಬಳ್ಳಾರಿಗೆ 800ಕ್ಕೂ ಹೆಚ್ಚು ಬಸ್ಗಳು
ಬಿಎಂಟಿಸಿ ಬಸ್ಗಳು ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬೆನ್ನೆಲುಬಾಗಿವೆ. ಆದರೆ, ಈ ದುರಂತಗಳು ಸಾರ್ವಜನಿಕರಲ್ಲಿ ಭಯ ಮತ್ತು ಅಪನಂಬಿಕೆಯನ್ನು ಹುಟ್ಟುಹಾಕಿವೆ. ಸಂಪಂಗಿಯವರ ಸಾವು ಒಂದು ಎಚ್ಚರಿಕೆಯ ಕರೆಯಾಗಿದೆ. ಬಿಎಂಟಿಸಿ ಮತ್ತು ಕರ್ನಾಟಕ ಸರ್ಕಾರವು ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಚಾಲಕರ ತರಬೇತಿಯನ್ನು ಸುಧಾರಿಸಿ, ಜನರ ಜೀವವನ್ನು ರಕ್ಷಿಸುವ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇದು ಕೇವಲ ನೀತಿಯ ಸಮಸ್ಯೆಯಲ್ಲ, ಇದು ಜನರ ಜೀವನದ ಪ್ರಶ್ನೆಯಾಗಿದೆ.







