ಕೇರಳ ಸರ್ಕಾರವು ದೇಶದ ಮೊದಲ ಹಿರಿಯ ನಾಗರಿಕರ ಆಯೋಗವನ್ನು ಸ್ಥಾಪಿಸಿದ್ದು, ಹಿರಿಯರ ಹಕ್ಕುಗಳ ರಕ್ಷಣೆ ಮತ್ತು ನಿರ್ಲಕ್ಷ್ಯ, ನಿಂದನೆಯಂತಹ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಂಡಿದೆ. ಕೇರಳ ರಾಜ್ಯ ಹಿರಿಯ ನಾಗರಿಕರ ಆಯೋಗದ ಅಧ್ಯಕ್ಷರಾಗಿ ಕೆ. ಸೋಮಪ್ರಸಾದ್ ಅವರನ್ನು ನೇಮಿಸಲಾಗಿದೆ ಎಂದು ಸಾಮಾಜಿಕ ನ್ಯಾಯ ಸಚಿವೆ ಆರ್. ಬಿಂದು ತಿಳಿಸಿದ್ದಾರೆ.
ಆಯೋಗದ ಸದಸ್ಯರಾಗಿ ಅಮರವಿಲಾ ರಾಮಕೃಷ್ಣನ್, ಇ.ಎಂ. ರಾಧಾ, ಕೆ.ಎನ್.ಕೆ. ನಂಬೂದಿರಿ, ಮತ್ತು ಲೋಪ್ಸ್ ಮ್ಯಾಥ್ಯೂ ಅವರನ್ನು ನೇಮಕ ಮಾಡಲಾಗಿದೆ. ಇದೇ ಮಾರ್ಚ್ನಲ್ಲಿ ರಚನೆಯಾದ ಕೇರಳ ರಾಜ್ಯ ಹಿರಿಯ ನಾಗರಿಕರ ಆಯೋಗ ಕಾಯ್ದೆಯಡಿ ಈ ಆಯೋಗವು ಕಾರ್ಯನಿರ್ವಹಿಸಲಿದೆ. ಆಯೋಗವು ಹಿರಿಯರ ಕಲ್ಯಾಣಕ್ಕಾಗಿ ಮಾರ್ಗಸೂಚಿಗಳನ್ನು ಒದಗಿಸುವುದು, ಪುನರ್ವಸತಿಗೆ ಸಹಾಯ ಮಾಡುವುದು ಮತ್ತು ಸಾಮಾಜಿಕ ಸೇರ್ಪಡೆಯನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ.
ಇದನ್ನೂ ಓದಿ | ಅಮೇರಿಕಾ ಸುಂಕ ಭಾರತದ ಆರ್ಥಿಕತೆಗೆ ಯಾವ ರೀತಿ ಪರಿಣಾಮಬೀರುತ್ತದೆ?
ಕೇರಳದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, 2036ರ ವೇಳೆಗೆ 22.8% ಜನಸಂಖ್ಯೆ 60 ವರ್ಷಕ್ಕಿಂತ ಮೇಲ್ಪಟ್ಟವರಾಗಿರುತ್ತಾರೆ ಎಂದು ಯುಎನ್ ವರದಿ ತಿಳಿಸಿದೆ. ಈ ಆಯೋಗವು ಹಿರಿಯರಿಗೆ ಆರ್ಥಿಕ ಭದ್ರತೆ, ಆರೋಗ್ಯ ಸೇವೆ, ಮತ್ತು ಕಾನೂನು ಸಹಾಯವನ್ನು ಒದಗಿಸಲು ಕೆಲಸ ಮಾಡಲಿದೆ.
ಆಯೋಗಕ್ಕೆ ವಾರ್ಷಿಕ 1 ಕೋಟಿ ರೂ. ಮತ್ತು ಮೊದಲಬಾರಿಗೆ 9ಲಕ್ಷ ರೂ. ಸ್ಥಾಪನೆಗೆ ಖರ್ಚಾಗಲಿದೆ. ಕೇರಳದ ಈ ಮಾದರಿಯು ಇತರ ರಾಜ್ಯಗಳಿಗೆ ದಾರಿದೀಪವಾಗಬಹುದು ಎಂದು ಸಚಿವೆ ಆರ್. ಬಿಂದು ಹೇಳಿದ್ದಾರೆ.







