ನಿರಂತರ ಸುರಿಯುತ್ತಿರುವ ಮಳೆಯಿಂದ ಭೀಮಾ ಮತ್ತು ಕೃಷ್ಣಾ ನದಿಗಳು ಅಬ್ಬರಿಸಿ ಕಲ್ಯಾಣ ಕರ್ನಾಟಕ ಭಾಗವನ್ನು ಜಲಾವೃತಗೊಳಿಸಿದ್ದು, ಸಾವಿರಾರು ಜನರು ತಮ್ಮ ಬೆಳೆ, ಜಾನುವಾರು, ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಪ್ರವಾಹ ಸಂಕಷ್ಟದಿಂದ ರೈತರು ಕಂಗಾಲಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ವೈಮಾನಿಕ ಸಮೀಕ್ಷೆ ನಡೆಸಿ, ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿದ್ದಾರೆ. 11 ಕಡೆಗಳಲ್ಲಿ ನಡೆದ ಈ ಸಮೀಕ್ಷೆಯಲ್ಲಿ ಬೀದರ್, ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳ ಹಾನಿಯನ್ನು ಅವರು ಪರಿಶೀಲಿಸಿದ್ದಾರೆ. ಪ್ರವಾಹ ನಿರ್ವಹಣೆಗೆ ಸೂಚನೆ ನೀಡಿ, ರಕ್ಷಣಾ ಕಾರ್ಯಗಳನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ಸೆಪ್ಟೆಂಬರ್ 22ರಿಂದ 28ರವರೆಗೆ ಸುರಿದ ಮಳೆಯಿಂದ ನದಿಗಳು ತುಂಬಿ ಸಂಕಷ್ಟ ಎದುರಿಸುವಂತಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 93 ಮಿ.ಮೀ. ಮಳೆ (ಸಾಮಾನ್ಯಕ್ಕಿಂತ 122% ಹೆಚ್ಚು) ಸುರಿದಿದ್ದು, ಶಹಾಪುರ ತಾಲೂಕಿನ ರೋಜಾ ಗ್ರಾಮವು ಸಂಪೂರ್ಣ ಜಲಾವೃತವಾಗಿದೆ. ಗ್ರಾಮದಲ್ಲಿ ಮನೆಗಳು ಜಲಾವೃತವಾಗಿ, ಮೂಕಪ್ರಾಣಿಗಳು ಮೇವಿಲ್ಲದೆ ರೋದಿಸುತ್ತಿವೆ. ಬೋಟ್ಗಳ ಮೂಲಕ ಮೇವು ಮತ್ತು ಆಹಾರ ಸರಬರಾಜು ಮಾಡಲಾಗುತ್ತಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಖೇಡಗಿ ಗ್ರಾಮದಲ್ಲಿ ಭೀಮಾ ನದಿ ಪ್ರವಾಹದಿಂದ 30ಕ್ಕೂ ಹೆಚ್ಚು ಮನೆಗಳು ನೀರಿನಲ್ಲೇ ಮುಳುಗಿವೆ. ಆಂಜನೇಯ ಸ್ವಾಮಿ ದೇವಸ್ಥಾನ, ಲಾಲ್ಸಾಬ್ ದರ್ಗಾ ಮತ್ತು ಬಸವಣ್ಣ ದೇವಸ್ಥಾನಗಳು ಜಲಾವೃತವಾಗಿವೆ. ಜನರು ತೆಪ್ಪಗಳಲ್ಲೇ ಓಡಾಡುತ್ತಿದ್ದು, ಈಡೀ ಬಸವೇಶ್ವರ ಮಠವು ಸಂಪೂರ್ಣ ನೀರಿನಲ್ಲಿ ಮುಳುಗಿದೆ.
ರಾಯಚೂರು ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಅಪಾರ ಹತ್ತಿ ಬೆಳೆ ನಾಶವಾಗಿದ್ದು, 8.6 ಲಕ್ಷ ಹೆಕ್ಟೇರ್ಗೂ ಹೆಚ್ಚು ಬೆಳೆಗಳು ನಾಶಗೊಂಡಿವೆ. ಎಕರೆಗೆ 20-30 ಸಾವಿರ ರೂಪಾಯಿ ಖರ್ಚು ಮಾಡಿರುವ ರೈತರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಘಟಪ್ರಭಾ ನದಿ ಅಬ್ಬರಕ್ಕೆ ಹುಕ್ಕೇರಿ ತಾಲೂಕಿನ ಜಿನ್ರಾಳ ಗ್ರಾಮದಲ್ಲಿ ಕಟಾವಿಗೆ ಬಂದಿದ್ದ ಮೆಕ್ಕೆಜೋಳ ಮತ್ತು ಕಬ್ಬು ಬೆಳೆಗಳು ಸರ್ವನಾಶವಾಗಿವೆ. ಕಷ್ಟಪಟ್ಟು ಬೆಳೆದಿದ್ದ ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಸುಮಾರು 10,000ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದು ಆಶ್ರಯ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಸಮೀಕ್ಷೆಯಲ್ಲಿ ಪ್ರವಾಹ ಹಾನಿಯನ್ನು ಮೌಲ್ಯಮಾಪನ ಮಾಡಿ, ಬೋಟ್ಗಳೊಂದಿಗೆ ರಕ್ಷಣಾ ತಂಡಗಳನ್ನು ತೊಡಗಿಸಿ, ಶಾಲೆಗಳು ಮತ್ತು ಸಮುದಾಯ ಭವನಗಳನ್ನು ಆಶ್ರಯ ಕೇಂದ್ರಗಳಾಗಿ ಮಾಡಲು ಸೂಚನೆ ನೀಡಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಭೀಮಾ ಮತ್ತು ಕೃಷ್ಣಾ ನದಿಗಳು ತುಂಬಿ ಹರಿಯುತ್ತಿರುವುದನ್ನು ವೀಕ್ಷಿಸಿ, ರಸ್ತೆಗಳು ಮುಚ್ಚಿರುವುದು ಮತ್ತು ರೈತರ ಬೆಳೆ ನಾಶವನ್ನು ಗಮನಿಸಿದ್ದಾರೆ. ‘ಪ್ರವಾಹ ನಿರ್ವಹಣೆಗೆ ತಕ್ಷಣ ಕ್ರಮ ತೆಗೆದುಕೊಳ್ಳಿ, ಪರಿಹಾರವನ್ನು ತ್ವರಿತವಾಗಿ ವಿತರಿಸಿ’ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ | ಉತ್ತರ ಕರ್ನಾಟಕದಲ್ಲಿ ಬೆಳೆ ಹಾನಿ: ಪರಿಹಾರಕ್ಕಾಗಿ ಖರ್ಗೆ ಮೋದಿಗೆ ಪತ್ರ!
ರಾಜಕೀಯ ಜಟಾಪಟಿ:
ಈ ನಡುವೆ, ರಾಜಕೀಯ ನಾಯಕರ ನಡುವೆ ವಾಗ್ವದ ನಡೆದಿದ್ದು, ಬಿಜೆಪಿ ವಿಪಕ್ಷ ನಾಯಕ ಆರ್. ಅಶೋಕ್ ಅವರು ಸಿಎಂನ ವೈಮಾನಿಕ ಸಮೀಕ್ಷೆಯನ್ನು ವ್ಯಂಗ್ಯ ಮಾಡಿ, ‘ನೀವು ಜನರ ಆಕ್ರೋಶಕ್ಕೆ ಹೆದರಿ ಆಕಾಶದಿಂದಲೇ ವೀಕ್ಷಣೆ ಮಾಡುತ್ತಿದ್ದೀರಾ? ಜನರಿಗೆ ತಕ್ಷಣ ಪರಿಹಾರ ನೀಡಿ’ ಎಂದು ಪ್ರಶ್ನಿಸಿದ್ದಾರೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ‘ಪರಿಹಾರ ಘೋಷಣೆ ಮಾಡಿ ಸಮೀಕ್ಷೆಗೆ ಬರಬೇಕಿತ್ತು, ಇದು ಕೇವಲ ಫೋಟೋ ಶೂಟ್ ಮಾತ್ರ’ ಎಂದು ಕಿಡಿಕಾರಿದ್ದಾರೆ. ಬಿಜೆಪಿ ಪಕ್ಷವು ಸರ್ಕಾರದ ವಿರುದ್ಧ ತೀವ್ರ ಟೀಕೆಗಳನ್ನು ವ್ಯಕ್ತಪಡಿಸಿ, ತ್ವರಿತ ರಕ್ಷಣಾ ಕಾರ್ಯಗಳನ್ನು ಒತ್ತಾಯಿಸಿದೆ.







