ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವಿನ ಅಧಿಕಾರ ಹಂಚಿಕೆ ವಿವಾದ ತೀವ್ರಗೊಂಡಿದ್ದು, ಶಿವಕುಮಾರ್ ಬೆಂಬಲಿಗ ಶಾಸಕರ ದೆಹಲಿ ಪ್ರಯಾಣಕ್ಕೆ ಸಿದ್ದರಾಮಯ್ಯ ಅವರು ಸ್ಪಷ್ಟ ಪ್ರತಿಕ್ರಿಯೆ ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, “ಶಾಸಕರು ದೆಹಲಿಗೆ ಹೋಗಿ ಹೈಕಮಾಂಡ್ಗೆ ಅಭಿಪ್ರಾಯ ಹೇಳಲು ಸ್ವಾತಂತ್ರ್ಯವಿದೆ. ಆದರೆ ಅಂತಿಮ ನಿರ್ಣಯ ಹೈಕಮಾಂಡ್ನದ್ದು. ನಾನು ಹಾಗೂ ಶಿವಕುಮಾರ್ ಎಲ್ಲರೂ ಅದನ್ನು ಒಪ್ಪಿಕೊಳ್ಳಬೇಕು. ಈ ಎಲ್ಲ ಗೊಂದಲಗಳಿಗೆ ಹೈಕಮಾಂಡ್ ಫುಲ್ ಸ್ಟಾಪ್ ಇಡಬೇಕು” ಎಂದು ಹೇಳಿದರು.
ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಸರ್ಕಾರ 2.5 ವರ್ಷಗಳ ಅವಧಿ ಪೂರ್ಣಗೊಂಡಿದ್ದು, ‘ನವೆಂಬರ್ ಕ್ರಾಂತಿ’ ಎಂದು ಕರೆಯಲ್ಪಡುತ್ತಿರುವ ಸಿಎಂ ಬದಲಾವಣೆ ಚರ್ಚೆಗಳು ಉಲ್ಬಣಗೊಂಡಿವೆ. ಈ ಹಿನ್ನೆಲೆಯಲ್ಲಿ ಡಿಕೆಶಿ ಬೆಂಬಲಿಗರು 10ಕ್ಕೂ ಹೆಚ್ಚು ಶಾಸಕರು ದೆಹಲಿಗೆ ತೆರಳಿ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಇತರ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದಾರೆ. ಇದರಲ್ಲಿ ಸಚಿವ ಚೇಲುವರಾಯಸ್ವಾಮಿ ಸೇರಿದಂತೆ ಮೂರನೇ ಬ್ಯಾಚ್ ಶಾಸಕರು ಸೋಮವಾರ ರಾತ್ರಿ ದೆಹಲಿಗೆ ತಲುಪಿದ್ದಾರೆ.
ಸಿದ್ದರಾಮಯ್ಯ ಅವರು ಈ ಚರ್ಚೆಗಳನ್ನು ‘ಮಾಧ್ಯಮ ಸೃಷ್ಟಿ’ ಎಂದು ತಳ್ಳಿಹಾಕಿ, “ನಾನು 5 ವರ್ಷಗಳ ಅವಧಿ ಪೂರ್ಣಗೊಳಿಸುತ್ತೇನೆ. ಹೈಕಮಾಂಡ್ ನಿರ್ಣಯಿಸಿದರೆ ಮಾತ್ರ ಬದಲಾವಣೆ ಸಾಧ್ಯ” ಎಂದು ಹೇಳಿದ್ದಾರೆ. ಶನಿವಾರ ಬೆಂಗಳೂರಿನಲ್ಲಿ ಖರ್ಗೆ ಅವರೊಂದಿಗೆ ನಡೆದ ಸಭೆಯಲ್ಲಿ ಪಕ್ಷದ ಸಂಘಟನೆ, ಸ್ಥಳೀಯ ಚುನಾವಣೆಗಳು ಮತ್ತು ಜಿಲ್ಲಾ/ತಾಲೂಕು ಪಂಚಾಯತ್ ಚುನಾವಣೆಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. “ಕ್ಯಾಬಿನೆಟ್ ಬದಲಾವಣೆಯ ಬಗ್ಗೆ ಚರ್ಚೆಯಾಗಿಲ್ಲ. ಶಾಸಕರು ಹೈಕಮಾಂಡ್ಗೆ ಅಭಿಪ್ರಾಯ ಹೇಳಿದರೂ, ಅಂತಿಮವಾಗಿ ನಾಯಕರ ನಿರ್ಣಯಕ್ಕೆ ಒಗ್ಗೂಡಬೇಕು” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ | “ಸಿದ್ದರಾಮಯ್ಯ ನಮ್ಮ ದೊಡ್ಡ ಆಸ್ತಿ”: ಡಿ.ಕೆ.ಶಿವಕುಮಾರ್ ಹೇಳಿಕೆ
ಡಿಕೆಶಿ ಅವರು ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿ, “ನಾನು ಯಾವ ಬಣದ ನಾಯಕನೂ ಇಲ್ಲ. ಪಕ್ಷದ ಒಗ್ಗಟ್ಟಿಗಾಗಿ ಕೆಲಸ ಮಾಡುತ್ತಿದ್ದೇನೆ. ಶಾಸಕರು ದೆಹಲಿಗೆ ಹೋಗಿರುವುದು ಸಹಜ, ಕ್ಯಾಬಿನೆಟ್ ಬದಲಾವಣೆಗಾಗಿ ಅವರು ಒತ್ತಾಯ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.







