ಚಿತ್ರದುರ್ಗದ ಪ್ರಖ್ಯಾತ ಮುರುಘಾ ಮಠದ ಮುಖ್ಯಸ್ಥ ಡಾ. ಶಿವಮೂರ್ತಿ ಮುರುಘಾ ಶರಣರು ಮತ್ತು ಇತರ ನಾಲ್ವರು ಆರೋಪಿಗಳನ್ನು ಪೋಕ್ಸೋ ಕಾಯ್ದೆ ಪ್ರಕರಣದಲ್ಲಿ ಚಿತ್ರದುರ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಸಂಪೂರ್ಣ ಖುಲಾಸೆಗೊಳಿಸಿ ತೀರ್ಪು ನೀಡಿದೆ.
2022ರಲ್ಲಿ ಆರೋಪಗಳು ಎದುರಾದ ನಂತರ ಈ ಪ್ರಕರಣ ರಾಜ್ಯದಾದ್ಯಂತ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಸಾಕ್ಷ್ಯಾಧಾರಗಳ ಕೊರತೆ ಮತ್ತು ವಿಶ್ವಾಸಾರ್ಹತೆಯ ಕೊರತೆಯನ್ನು ಗಮನಿಸಿ ನ್ಯಾಯಾಧೀಶ ಎಸ್.ಎಲ್. ಪಾಟೀಲ್ ಅವರು ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸಿದ್ದಾರೆ.
ಆಗಸ್ಟ್ 31,2022 ರಂದು ಮೈಸೂರು ಮೂಲದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮುರುಘಾ ಮಠದಲ್ಲಿ ವಾಸಿಸುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ದಾಖಲಿಸಿದ್ದರು. ಇದರೊಂದಿಗೆ ಪೋಕ್ಸೋ ಕಾಯ್ದೆ ಸೆಕ್ಷನ್ 4, 6, 8, 12, ಎಸ್ಸಿ/ಎಸ್ಟಿ ಅತ್ಯಾಚಾರ ನಿಗ್ರಹ ಕಾಯ್ದೆ ಮತ್ತು ಧಾರ್ಮಿಕ ಸಂಸ್ಥೆಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿ, ಸೆಪ್ಟೆಂಬರ್ 1ರಂದು ಶಿವಮೂರ್ತಿ ಶರಣರನ್ನು ಬಂಧಿಸಲಾಯಿತು. ಸುಮಾರು 14 ತಿಂಗಳ ಕಾಲ ಬಳ್ಳಾರಿ ಮತ್ತು ಚಿತ್ರದುರ್ಗ ಜೈಲಿನಲ್ಲಿದ್ದ ಶ್ರೀಗಳು 2023 ನವೆಂಬರ್ 16ರಂದು ಕರ್ನಾಟಕ ಹೈಕೋರ್ಟ್ನಿಂದ ಷರತ್ತುಬದ್ಧ ಜಾಮೀನು ಪಡೆದು ಹೊರಬಂದಿದ್ದರು.
ತನಿಖೆಯ ಸಮಯದಲ್ಲಿ ಆರೋಪಿ ಪಕ್ಷದ ವಕೀಲರು ಸಾಕ್ಷ್ಯಗಳಲ್ಲಿ ಗಂಭೀರ ದೋಷಗಳನ್ನು ಸಾಬೀತುಪಡಿಸಿದ್ದರು. ಬಾಲಕಿಯರ ವೈದ್ಯಕೀಯ ವರದಿಯಲ್ಲಿ ಲೈಂಗಿಕ ದೌರ್ಜನ್ಯದ ಯಾವುದೇ ಆಧಾರ ಕಂಡುಬಂದಿಲ್ಲ. ದೂರುದಾರರ ಮೊದಲ ಹೇಳಿಕೆಯನ್ನು ವೀಡಿಯೊ/ಆಡಿಯೋ ರೆಕಾರ್ಡ್ ಮಾಡದೇ ಕೇವಲ ಬರೆದುಕೊಂಡಿದ್ದಾರೆ, ತನಿಖಾಧಿಕಾರಿಗಳು ಆರೋಪಿಗಳ ಪರವಾಗಿ ಹೇಳಿಕೆ ನೀಡಿರುವುದು, ಮಠದ ವಾರ್ಡನ್ ರುದ್ರೇಶ್ ಮತ್ತು ಇತರ ಸಾಕ್ಷಿಗಳು ತಿರುಗಿ ಹೇಳಿಕೆ ನೀಡಿರುವುದು, ಇವೆಲ್ಲವೂ ನ್ಯಾಯಾಲಯದ ಗಮನಕ್ಕೆ ಬಂದವು.
ಇದನ್ನೂ ಓದಿ | ಪೋಕ್ಸೊ ಪ್ರಕರಣ: ಹೈಕೋರ್ಟ್ನಲ್ಲಿ ಬಿಎಸ್ವೈಗೆ ಭಾರಿ ಹಿನ್ನಡೆ
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಲಕ್ಷ್ಮೀನಾರಾಯಣ ಅವರನ್ನು ಸ್ವತಃ ನ್ಯಾಯಾಲಯ ಕರೆಸಿ ವಿಚಾರಣೆ ನಡೆಸಿದ್ದು, ಅವರು “ದೂರು ಸತ್ಯಕ್ಕೆ ದೂರವಾಗಿದೆ” ಎಂದು ಸ್ವೀಕರಿಸಿದ್ದಾರೆ ಎನ್ನುವುದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.







