ಇನ್ನೇನು ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಎದುರಿಸಲಿರುವ ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಚುನಾವಣಾ ಆಯೋಗ (ಇಸಿಐ) ನಡೆಸಿದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆ ಉಂಟಾಗಿದೆ. ಡಿಸೆಂಬರ್ 16, 2025ರಂದು ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಲ್ಲಿ ಸುಮಾರು 58.20 ಲಕ್ಷ ಮತದಾರರ ಹೆಸರುಗಳನ್ನು ತೆರವುಗೊಳಿಸಲಾಗಿದೆ. ಇದರಲ್ಲಿ 24.16 ಲಕ್ಷ ಮಂದಿ ಮೃತಪಟ್ಟವರು, 19.88 ಲಕ್ಷ ಸ್ಥಳಾಂತರಗೊಂಡವರು, 12.20 ಲಕ್ಷ ಅನುಪಸ್ಥಿತರು ಹಾಗೂ 1.38 ಲಕ್ಷ ನಕಲಿ ಅಥವಾ ಡ್ಯೂಪ್ಲಿಕೇಟ್ ಹೆಸರುಗಳು ಸೇರಿವೆ.
ಚುನಾವಣಾ ಆಯೋಗದ ಮುಖ್ಯ ಉದ್ದೇಶ ಮತದಾರರ ಪಟ್ಟಿಯನ್ನು ಶುದ್ಧೀಕರಿಸಿ, ನಕಲಿ, ಮೃತ ಮತ್ತು ಸ್ಥಳಾಂತರಿತ ಹೆಸರುಗಳನ್ನು ತೆಗೆದುಹಾಕುವುದು. ಎಸ್ಐಆರ್ ಪ್ರಕ್ರಿಯೆ ನವೆಂಬರ್ 4ರಿಂದ ಡಿಸೆಂಬರ್ 11ರವರೆಗೆ ನಡೆದಿದ್ದು, ಬೂತ್ ಲೆವೆಲ್ ಆಫೀಸರ್ಗಳು (ಬಿಎಲ್ಒ) ಮನೆಮನೆಗೆ ತೆರಳಿ ಪರಿಶೀಲನೆ ನಡೆಸಿದ್ದರು. ಕರಡು ಪಟ್ಟಿ ಪ್ರಕಟಕ್ಕೂ ಮುನ್ನವೇ ಡಿಲೀಟ್ ಆದ ಹೆಸರುಗಳ ಪಟ್ಟಿಯನ್ನು ಆಯೋಗದ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಾಗಿದೆ.
ಈ ಬದಲಾವಣೆಯಿಂದ ರಾಜ್ಯದ ಮತದಾರರ ಸಂಖ್ಯೆ 7.66 ಕೋಟಿಯಿಂದ 7.08 ಕೋಟಿಗೆ ಇಳಿದಿದೆ. ಆದರೆ ಈ ನಿರ್ಧಾರ ವಿವಾದಕ್ಕೆ ಗ್ರಾಸವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇದನ್ನು ಬಿಜೆಪಿ ಮತ್ತು ಚುನಾವಣಾ ಆಯೋಗದ ಷಡ್ಯಂತ್ರ ಎಂದು ಆರೋಪಿಸಿದ್ದು, ನಿಜವಾದ ಮತದಾರರನ್ನು ಹೊರಗಿಟ್ಟು ಚುನಾವಣೆಯನ್ನು ಪ್ರಭಾವಿತಗೊಳಿಸುವ ಪ್ರಯತ್ನ ಎಂದು ಟೀಕಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಈಗಾಗಲೇ ಪ್ರತಿಭಟನೆಗಳನ್ನು ನಡೆಸುತ್ತಿದೆ.
ಚುನಾವಣಾ ಆಯೋಗ ತನ್ನ ನಿಲುವನ್ನು ಸಮರ್ಥಿಸಿಕೊಂಡು, ಡಿಲೀಟ್ ಆದವರು ಆಕ್ಷೇಪಣೆ ಸಲ್ಲಿಸಬಹುದು ಎಂದಿದೆ. ಡಿಸೆಂಬರ್ 16, 2025ರಿಂದ ಜನವರಿ 15, 2026ರವರೆಗೆ ನಮೂನೆ-6ರಲ್ಲಿ ಘೋಷಣೆ ಮತ್ತು ಪೋಷಕರ ದಾಖಲೆಗಳೊಂದಿಗೆ ಹಕ್ಕು ಸಲ್ಲಿಸಬಹುದು. ಕರಡು ಪಟ್ಟಿಯನ್ನು ceowestbengal.wb.gov.in ಅಥವಾ voters.eci.gov.inನಲ್ಲಿ ಪರಿಶೀಲಿಸಬಹುದು.
ಇದನ್ನೂ ಓದಿ | ಬಿಹಾರ್ ಚುನಾವಣೆ: SIRನಿಂದ 65 ಲಕ್ಷ ಮತದಾರರ ಡಿಲೀಟ್, ಯಾರಿಗಾಯಿತು ಲಾಭ?
294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ 2026ರ ಮೊದಲಾರ್ಧದಲ್ಲಿ ಚುನಾವಣೆ ನಡೆಯಲಿದೆ. ಅಂತಿಮ ಮತದಾರರ ಪಟ್ಟಿ ಫೆಬ್ರವರಿ 14, 2026ರಂದು ಪ್ರಕಟವಾಗಲಿದೆ. ಈ ಪ್ರಕ್ರಿಯೆಯಿಂದ ಮತದಾರರ ಪಟ್ಟಿ ಹೆಚ್ಚು ನಿಖರವಾಗಲಿದೆ ಎಂದು ಆಯೋಗ ಹೇಳಿದೆ. ಆದರೆ ರಾಜಕೀಯ ಪಕ್ಷಗಳ ನಡುವೆ ಈಗಾಗಲೇ ತೀವ್ರ ಚರ್ಚೆ ಆರಂಭವಾಗಿದೆ.







