ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ವಲಸೆ ನೀತಿಯಲ್ಲಿ ಮತ್ತೊಂದು ಕ್ರಾಂತಿಕಾರಿ ಮತ್ತು ಅಷ್ಟೇ ವಿಚಿತ್ರವಾದ ಕ್ರಮಕ್ಕೆ ಮುಂದಾಗಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಲಕ್ಷಾಂತರ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಲು ಅವರು “ದಂಡ ಪ್ರಯೋಗ”ದ ಬದಲು “ದಾನ ಪ್ರಯೋಗ”ಕ್ಕೆ ಇಳಿದಿದ್ದಾರೆ. ದಾಖಲೆಗಳಿಲ್ಲದೆ ಅಮೆರಿಕದಲ್ಲಿ ವಾಸಿಸುತ್ತಿರುವವರು ಸ್ವಯಂಪ್ರೇರಣೆಯಿಂದ ದೇಶ ತೊರೆದರೆ ಅವರಿಗೆ ಪ್ರಯಾಣದ ವೆಚ್ಚದ ಜೊತೆಗೆ ಭಾರಿ ಮೊತ್ತದ ನಗದು ನೀಡುವುದಾಗಿ ಘೋಷಿಸಲಾಗಿದೆ.
ಏನಿದು ಕ್ರಿಸ್ಮಸ್ ಆಫರ್?
ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ (DHS) ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಡಿಸೆಂಬರ್ 31 ರೊಳಗೆ ಅಮೆರಿಕವನ್ನು ತೊರೆಯಲು ಒಪ್ಪುವ ಅಕ್ರಮ ವಲಸಿಗರಿಗೆ ಈ ಸೌಲಭ್ಯ ಸಿಗಲಿದೆ. ಇದನ್ನು ಒಂದು ರೀತಿಯ ‘ಕ್ರಿಸ್ಮಸ್ ಕೊಡುಗೆ’ ಎಂದೇ ಬಿಂಬಿಸಲಾಗುತ್ತಿದೆ.
ತಮ್ಮ ತಾಯ್ನಾಡಿಗೆ ಮರಳಲು ಉಚಿತ ವಿಮಾನ ಟಿಕೆಟ್ ನೀಡಲಾಗುವುದು. ಇದರ ಜೊತೆಗೆ, ಪುನರ್ವಸತಿಗಾಗಿ ಅಥವಾ ಕೈ ಖರ್ಚಿಗಾಗಿ ಒಬ್ಬರಿಗೆ ಸುಮಾರು 3,000 ಡಾಲರ್ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಅಂದಾಜು 2.7 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ.
ಟ್ರಂಪ್ ಸರ್ಕಾರದ ಲೆಕ್ಕಾಚಾರವೇನು?
ಟ್ರಂಪ್ ಅವರ ಈ ನಡೆ ಮೇಲ್ನೋಟಕ್ಕೆ ವಲಸಿಗರ ಪರವಾಗಿ ಕಂಡರೂ, ಇದರ ಹಿಂದೆ ದೊಡ್ಡ ಆರ್ಥಿಕ ಲೆಕ್ಕಾಚಾರವಿದೆ. ಅಕ್ರಮ ವಲಸಿಗರನ್ನು ಬಲವಂತವಾಗಿ ಬಂಧಿಸಿ, ಜೈಲಿನಲ್ಲಿಟ್ಟು, ಕಾನೂನು ಪ್ರಕ್ರಿಯೆ ನಡೆಸಿ, ನಂತರ ಅವರನ್ನು ಗಡಿಪಾರು ಮಾಡುವುದು ಅಮೆರಿಕ ಸರ್ಕಾರಕ್ಕೆ ಅತ್ಯಂತ ದುಬಾರಿ ಪ್ರಕ್ರಿಯೆಯಾಗಿದೆ. ಒಬ್ಬ ವ್ಯಕ್ತಿಯನ್ನು ಬಲವಂತವಾಗಿ ಗಡಿಪಾರು ಮಾಡಲು ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಅದರ ಬದಲು, ಇಂತಿಷ್ಟು ಹಣ ನೀಡಿ ಅವರಾಗಿಯೇ ಹೋಗುವಂತೆ ಮಾಡಿದರೆ, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ಡಾಲರ್ ಉಳಿತಾಯವಾಗಲಿದೆ ಎಂಬುದು ಟ್ರಂಪ್ ಆಡಳಿತದ ವಾದ.
ಈ ಆಫರ್ ಮುಖ್ಯವಾಗಿ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ, ಕೇವಲ ವೀಸಾ ಅವಧಿ ಮುಗಿದು ತಂಗಿರುವ ಅಥವಾ ಅಕ್ರಮವಾಗಿ ಗಡಿ ನುಸುಳಿ ಬಂದು ದಾಖಲೆಗಳಿಲ್ಲದೆ ಕೆಲಸ ಮಾಡುತ್ತಿರುವವರಿಗೆ ಅನ್ವಯಿಸುತ್ತದೆ. ಆದರೆ, ಈ ಹಣ ಪಡೆದು ಒಮ್ಮೆ ಅಮೆರಿಕದಿಂದ ಹೊರಬಂದರೆ, ಅಂತಹ ವ್ಯಕ್ತಿಗಳು ಮತ್ತೆ ಹಲವು ವರ್ಷಗಳ ಕಾಲ ಅಮೆರಿಕಕ್ಕೆ ಪ್ರವೇಶಿಸುವಂತಿಲ್ಲ ಎಂಬ ಷರತ್ತು ಕೂಡ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | ಕೇಂದ್ರದ ವಿರುದ್ಧ ಗುಡುಗಿದ್ದ ತರೂರ್ ಬಿಹಾರದಲ್ಲಿ ‘ಎನ್ಡಿಎ’ಗೆ ಮೆಚ್ಚುಗೆ!
ಭಾರತೀಯರ ಮೇಲಾಗುವ ಪರಿಣಾಮವೇನು?
ಈ ಸುದ್ದಿ ಅಮೆರಿಕದಲ್ಲಿರುವ ಸಾವಿರಾರು ಭಾರತೀಯ ಅಕ್ರಮ ವಲಸಿಗರಲ್ಲಿ ಸಂಚಲನ ಮೂಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ‘ಡಂಕಿ ರೂಟ್’ (Donkey Route) ಮೂಲಕ ಅಕ್ರಮವಾಗಿ ಅಮೆರಿಕ ಸೇರಿರುವ ಭಾರತೀಯರ ಸಂಖ್ಯೆ ಹೆಚ್ಚಾಗಿದೆ. ಅಂತಹವರಿಗೆ ಇದೊಂದು ಪಲಾಯನ ಮಾರ್ಗವಾಗಿ ಕಾಣುತ್ತಿದೆ. ಬಲವಂತವಾಗಿ ಗಡಿಪಾರಾದರೆ ಮುಂದೆಂದೂ ವೀಸಾ ಸಿಗುವುದಿಲ್ಲ ಮತ್ತು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಅದರ ಬದಲು ಹಣ ಪಡೆದು ಗೌರವಯುತವಾಗಿ ಮರಳುವುದು ಲೇಸು ಎಂದು ಕೆಲವರು ಯೋಚಿಸುತ್ತಿದ್ದಾರೆ.
ಆದರೆ, ಮಾನವ ಹಕ್ಕುಗಳ ಹೋರಾಟಗಾರರು ಇದನ್ನು ಟೀಕಿಸಿ. “ಬಡ ವಲಸಿಗರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು ಅವರನ್ನು ಹಣದ ಆಮಿಷದ ಮೂಲಕ ಹೊರಹಾಕಲಾಗುತ್ತಿದೆ,” ಎಂದು ಅವರು ಆರೋಪಿಸಿದ್ದಾರೆ.







