ಕಳೆದ ಕೆಲ ದಿನಗಳಿಂದ ರಾಜ್ಯದ ಜನತೆಯನ್ನು, ವಿಶೇಷವಾಗಿ ಪೋಷಕರನ್ನು ಕಾಡುತ್ತಿದ್ದ ಬಹುದೊಡ್ಡ ಆತಂಕವೊಂದಕ್ಕೆ ರಾಜ್ಯ ಸರ್ಕಾರ ಅಂತ್ಯ ಹಾಡಿದೆ. ಮಾರುಕಟ್ಟೆಯಲ್ಲಿ ಸಿಗುವ ಮೊಟ್ಟೆಗಳಲ್ಲಿ (Eggs) ಕ್ಯಾನ್ಸರ್ ಕಾರಕ ಅಂಶಗಳಿವೆ ಎಂಬ ವದಂತಿಗಳು ವ್ಯಾಪಕವಾಗಿ ಹಬ್ಬಿದ್ದವು. ಆದರೆ, ಈ ಬಗ್ಗೆ ಸ್ವತಃ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಸ್ಪಷ್ಟನೆ ನೀಡಿದ್ದು, “ರಾಜ್ಯದಲ್ಲಿ ಪೂರೈಕೆಯಾಗುತ್ತಿರುವ ಮೊಟ್ಟೆಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಇದರಲ್ಲಿ ಯಾವುದೇ ಕ್ಯಾನ್ಸರ್ ಕಾರಕ ಅಂಶಗಳಿಲ್ಲ,” ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣ, ಸುದ್ದಿ ವಾಹಿನಿಗಳಲ್ಲಿ ತುಂಬಾ ಅಚ್ಚರಿ ಮೂಡಿಸಿದ್ದ ವಿಷಯ. ಕೋಳಿ ಮೊಟ್ಟೆಯಲ್ಲಿ ಹಾನಿಕಾರಕ ರಾಸಾಯನಿಕಗಳು ಮತ್ತು ಕ್ಯಾನ್ಸರ್ ತರುವಂತಹ ಅಂಶಗಳು ಸೇರಿಕೊಂಡಿವೆ ಎಂಬ ಸುದ್ದಿ ಹರಿದಾಡಿತ್ತು. ಇದು ಸಾರ್ವಜನಿಕರಲ್ಲಿ, ಅದರಲ್ಲೂ ಶಾಲಾ ಮಕ್ಕಳಿಗೆ ಬಿಸಿಯೂಟದಲ್ಲಿ ಮೊಟ್ಟೆ ನೀಡುತ್ತಿರುವ ಪೋಷಕರಲ್ಲಿ ತೀವ್ರ ಭಯ ಹುಟ್ಟುಹಾಕಿತ್ತು. ಕೃತಕ ಮೊಟ್ಟೆಗಳು ಅಥವಾ ಅತಿಯಾದ ಆ್ಯಂಟಿಬಯೋಟಿಕ್ ಬಳಸಿ ಉತ್ಪಾದಿಸಿದ ಮೊಟ್ಟೆಗಳು ಆರೋಗ್ಯಕ್ಕೆ ಕುತ್ತು ತರುತ್ತವೆ ಎಂಬ ಚರ್ಚೆಗಳು ಜೋರಾಗಿದ್ದವು.
ಈ ವದಂತಿಗಳನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಆರೋಗ್ಯ ಇಲಾಖೆ ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI), ರಾಜ್ಯದ ವಿವಿಧ ಜಿಲ್ಲೆಗಳಿಂದ ಹಠಾತ್ ದಾಳಿ ನಡೆಸಿ ಮೊಟ್ಟೆಯ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಬೆಂಗಳೂರು, ಮೈಸೂರು ಸೇರಿದಂತೆ ಪ್ರಮುಖ ನಗರಗಳ ಮಾರುಕಟ್ಟೆಗಳು ಮತ್ತು ಫಾರಂಗಳಿಂದ ಸಂಗ್ರಹಿಸಿದ ಮೊಟ್ಟೆಗಳನ್ನು ಸುಧಾರಿತ ಪ್ರಯೋಗಾಲಯಗಳಿಗೆ (Labs) ಪರೀಕ್ಷೆಗೆ ಕಳುಹಿಸಲಾಗಿತ್ತು.
ಈಗ ಆ ಪರೀಕ್ಷಾ ವರದಿಗಳು ಕೈಸೇರಿವೆ. ಈ ಕುರಿತು ಮಾತನಾಡಿರುವ ಸಚಿವ ದಿನೇಶ್ ಗುಂಡೂರಾವ್, “ಲ್ಯಾಬ್ ವರದಿಗಳು ಬಂದಿದ್ದು, ಅವುಗಳಲ್ಲಿ ಯಾವುದೇ ಹಾನಿಕಾರಕ ಅಥವಾ ಕ್ಯಾನ್ಸರ್ ಕಾರಕ (Carcinogenic) ಅಂಶಗಳು ಪತ್ತೆಯಾಗಿಲ್ಲ. ಎಫ್ಎಸ್ಎಸ್ಎಐ (FSSAI) ಮಾನದಂಡಗಳ ಪ್ರಕಾರ ಮೊಟ್ಟೆಗಳು ಸೇವನೆಗೆ ಯೋಗ್ಯವಾಗಿವೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ | ಸಿಡಬ್ಲ್ಯೂಸಿ ನೆಪ, ಅಧಿಕಾರದ್ದೇ ಜಪ? ದೆಹಲಿಗೆ ಹಾರಿದ ಸಿದ್ದರಾಮಯ್ಯ
ವದಂತಿಗಳಿಗೆ ಕಿವಿಗೊಡಬೇಡಿ:
“ಜನರು ಇಲ್ಲಸಲ್ಲದ ವದಂತಿಗಳಿಗೆ ಕಿವಿಗೊಟ್ಟು ಆತಂಕ ಪಡುವ ಅಗತ್ಯವಿಲ್ಲ. ಮೊಟ್ಟೆ ಪೌಷ್ಟಿಕಾಂಶದ ಆಗರ. ಬಡವರು ಮತ್ತು ಮಕ್ಕಳ ಆರೋಗ್ಯ ವೃದ್ಧಿಯಲ್ಲಿ ಮೊಟ್ಟೆ ಪ್ರಮುಖ ಪಾತ್ರ ವಹಿಸುತ್ತದೆ. ಸುಳ್ಳು ಸುದ್ದಿಗಳನ್ನು ನಂಬಿ ಮೊಟ್ಟೆ ಸೇವನೆಯನ್ನು ನಿಲ್ಲಿಸಬೇಡಿ. ಸರ್ಕಾರ ಜನರ ಆರೋಗ್ಯದ ವಿಷಯದಲ್ಲಿ ಯಾವುದೇ ರಾಜಿಯಾಗುವುದಿಲ್ಲ. ನಿರಂತರವಾಗಿ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಲಾಗುತ್ತಿದೆ,” ಎಂದು ಸಚಿವರು ಭರವಸೆ ನೀಡಿದ್ದಾರೆ.
ಕ್ಯಾನ್ಸರ್ ಕಾರಕ ಎಂಬ ವದಂತಿ ಹಬ್ಬಿದ ತಕ್ಷಣ ಕೋಳಿ ಸಾಕಾಣಿಕೆ ಮತ್ತು ಮೊಟ್ಟೆ ಮಾರಾಟ ಉದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು. ಬೆಲೆ ಕುಸಿತ ಮತ್ತು ಬೇಡಿಕೆ ಕಡಿಮೆಯಾಗುವ ಭೀತಿ ಎದುರಾಗಿತ್ತು. ಇದೀಗ ಸರ್ಕಾರದ ಅಧಿಕೃತ ಸ್ಪಷ್ಟನೆಯಿಂದಾಗಿ ನಿಟ್ಟುಸಿರು ಬಿಡುವಂತಾಗಿದೆ.







