ಕರ್ನಾಟಕದ ಬಳ್ಳಾರಿಯ ಜೀನ್ಸ್ ಉದ್ಯಮವು ತೀವ್ರ ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡಿದೆ. ಈ ಉದ್ಯಮ ರಾಜ್ಯದ ಗಡಿಯನ್ನು ಮೀರಿ, ದೇಶದಾದ್ಯಂತ ಜನಪ್ರಿಯವಾಗಿದ್ದು, ಸುಮಾರು ಎರಡು ಲಕ್ಷ ಜನರ ಜೀವನಾಧಾರವಾಗಿದೆ. ಆದರೆ, ಈಗ ಈ ಉದ್ಯಮವೇ ಸಂಪೂರ್ಣ ಬಂದ್ ಆಗುವ ಆತಂಕದಲ್ಲಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಕಠಿಣ ಕ್ರಮಗಳು ಮತ್ತು ಮೂಲಸೌಕರ್ಯ ಕೊರತೆಯಿಂದ ಈ ಸಂಕಟ ಉಂಟಾಗಿದೆ. ಇದರಿಂದಾಗಿ ಜೀನ್ಸ್ ವಾಷಿಂಗ್ ಘಟಕಗಳು ಮುಚ್ಚುವ ಭೀತಿಯಲ್ಲಿವೆ, ಇದರಿಂದ ಸಾವಿರಾರು ಕಾರ್ಮಿಕರ ಜೀವನೋಪಾಯಕ್ಕೆ ಧಕ್ಕೆ ಉಂಟಾಗಲಿದೆ.
ರಾಹುಲ್ ಗಾಂಧಿಯ ಭರವಸೆ: ನನಸಾಗದ ಕನಸು
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪಿಸುವ ಭರವಸೆಯನ್ನು ನೀಡಿದ್ದರು. ಈ ಯೋಜನೆಯಿಂದ ಉದ್ಯಮಕ್ಕೆ ಹೊಸ ಚೈತನ್ಯ ತುಂಬುವ ಆಸೆ ಇತ್ತು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಾ ಜಮೀನು ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಈ ಯೋಜನೆಯ ಕನಸು, ಕನಸಾಗಿಯೇ ಉಳಿದಿದೆ. ಜೀನ್ಸ್ ಪಾರ್ಕ್ ಸ್ಥಾಪನೆಯ ಚರ್ಚೆ ಇನ್ನೂ ಮುಗಿದಿಲ್ಲ, ಬದಲಿಗೆ ಈಗ ಇರುವ ಜೀನ್ಸ್ ವಾಷಿಂಗ್ ಘಟಕಗಳೇ ಮುಚ್ಚುವ ಹಂತದಲ್ಲಿವೆ.
ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶ: ಕಾರಣವೇನು?
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಬಳ್ಳಾರಿ ಕಚೇರಿಯು, ಜೀನ್ಸ್ ವಾಷಿಂಗ್ ಘಟಕಗಳಿಂದ ಕಲುಷಿತ ನೀರನ್ನು ಸಂಸ್ಕರಿಸದೇ ಜಲಮೂಲಗಳಿಗೆ ಬಿಡುಗಡೆ ಮಾಡುತ್ತಿರುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂದು ವರದಿ ಸಲ್ಲಿಸಿದೆ. ಈ ಕಾರಣಕ್ಕಾಗಿ, ಕೇಂದ್ರ ಕಚೇರಿಯು ಶೀಘ್ರದಲ್ಲೇ ಈ ಘಟಕಗಳನ್ನು ಸ್ಥಗಿತಗೊಳಿಸುವ ಆದೇಶ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಕ್ರಮವು ಉದ್ಯಮವನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಬಹುದು. ಈಗಾಗಲೇ 80 ಜೀನ್ಸ್ ವಾಷಿಂಗ್ ಘಟಕಗಳ ಪೈಕಿ 40 ಘಟಕಗಳು ವಿದ್ಯುತ್ ದರ ಏರಿಕೆ, ನೀರಿನ ಕೊರತೆ, ಮತ್ತು ಕಚ್ಚಾ ವಸ್ತುಗಳ ದರ ಏರಿಕೆಯಿಂದ ಮುಚ್ಚಿಹೊಗಿವೆ. ಇದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿ, ಕಾರ್ಮಿಕರಿಗೆ ಸಂಬಳ ಕೊಡಲು ಕಷ್ಟವಾಗಿದೆ.
ಸರ್ಕಾರದಿಂದ ಪರಿಹಾರದ ನಿರೀಕ್ಷೆ
ಜೀನ್ಸ್ ಉದ್ಯಮಿಗಳು ಸರ್ಕಾರಕ್ಕೆ ಒಂದು ಬೃಹತ್ ಸಂಸ್ಕರಣಾ ಘಟಕವನ್ನು ಸ್ಥಾಪಿಸುವಂತೆ ಮನವಿ ಮಾಡಿದ್ದಾರೆ. ಇದರಿಂದ ಕಲುಷಿತ ನೀರನ್ನು ಸಂಸ್ಕರಿಸಿಟ್ಟು, ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು. ಜೊತೆಗೆ, ವಿದ್ಯುತ್ ದರ ಕಡಿಮೆ ಮಾಡಿದರೆ, ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಬಹುದು ಎಂದು ಒತ್ತಾಯಿಸಿದ್ದಾರೆ. ಆದರೆ, ಸರ್ಕಾರದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆಗಳು ಕಂಡುಬಂದಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸದಿದ್ದರೆ, ಎರಡು ಲಕ್ಷ ಜನರ ಜೀವನೋಪಾಯಕ್ಕೆ ತೀವ್ರ ಧಕ್ಕೆ ಉಂಟಾಗುತ್ತದೆ.







