ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಅಕ್ಟೋಬರ್ 29, 2025) ಹರಿಯಾಣದ ಅಂಬಾಲಾ ವಾಯುಪಡೆ ನಿಲ್ದಾಣದಿಂದ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ, ದಾಖಲೆ ಸೃಷ್ಟಿಸಿದ್ದಾರೆ. ಭಾರತೀಯ ವಾಯುಸೇನೆಯ ಸುಪ್ರೀಂ ಕಮಾಂಡರ್ ಆಗಿ, ರಫೇಲ್ನಲ್ಲಿ ಹಾರಾಟ ನಡೆಸಿದ ಮೊದಲ ರಾಷ್ಟ್ರಪತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಲಾಯಿತು. ವಿಮಾನದ ಡ್ಯುಯಲ್ ಕಂಟ್ರೋಲ್ ಸಿಸ್ಟಮ್ ಅಡಿಯಲ್ಲಿ ಸಹಪಾಲಟ್ ಜೊತೆಗೆ ಮುರ್ಮು ನಿಯಂತ್ರಣದ ಅನುಭವ ಪಡೆದರು. ವಾಯುಸೇನಾ ಮುಖ್ಯಸ್ಥ ಏರ್ ಚೀಫ್ ಮಾರ್ಶಲ್ ಎ.ಪಿ. ಸಿಂಗ್ ಅವರೊಂದಿಗೆ ಈ ಸವಾರಿಯಲ್ಲಿ ಭಾರತೀಯ ವಾಯುಶಕ್ತಿಯ ಸಾಮರ್ಥ್ಯವನ್ನು ಅನುಭವಿಸಿದರು.
ಈ ರಫೇಲ್ ವಿಮಾನವು ಇದೇ ಅಂಬಾಲಾ ನೆಲೆಯಿಂದ ಐದು ತಿಂಗಳ ಹಿಂದೆ ನಡೆದ ಆಪರೇಷನ್ ಸಿಂಧೂರ್ನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಮೇ 7 ರಂದು ಆರಂಭವಾದ ಈ ಕಾರ್ಯಾಚರಣೆಯಲ್ಲಿ ರಫೇಲ್ಗಳು ಪಾಕಿಸ್ಥಾನದ ಗಡಿ ಆಚೆಗಿನ ಭಯೋತ್ಪಾದಕ ಶಿಬಿರಗಳನ್ನು ನಿಖರವಾಗಿ ಗುರಿಯಾಗಿಸಿ ನಾಶಪಡಿಸಿದ್ದವು. ಈ ಆಪರೇಷನ್ ಪಹಲ್ಗಾಮ್ ದಾಳಿಗೆ ಸೇಡು ತೀರಿಸುವ ಉದ್ದೇಶದಿಂದ ನಡೆಸಲಾಗಿತ್ತು. ರಾಷ್ಟ್ರಪತಿ ಮುರ್ಮು ಅವರ ಇಂದಿನ ಹಾರಾಟವು ಆಪರೇಷನ್ನಲ್ಲಿ ಭಾಗವಹಿಸಿದ ರಫೇಲ್ ಸ್ಕ್ವಾಡ್ರನ್ನೊಂದಿಗೆ ನಡೆದಿದ್ದು, ವಾಯುಸೇನಾ ಸಿಬ್ಬಂದಿಗೆ ಗೌರವ ಸಲ್ಲಿಸುವ ಸಂಕೇತವಾಗಿದೆ.
ರಫೇಲ್ನಲ್ಲಿ ಹಾರಾಟದ ನಂತರ ಮಾತನಾಡಿದ ರಾಷ್ಟ್ರಪತಿ ಮುರ್ಮು, “ಭಾರತೀಯ ವಾಯುಸೇನೆಯ ಧೈರ್ಯ ಮತ್ತು ಸಾಮರ್ಥ್ಯವನ್ನು ನೇರವಾಗಿ ಅನುಭವಿಸಿದೆ. ನಮ್ಮ ಯೋಧರು ದೇಶದ ರಕ್ಷಣೆಗಾಗಿ ದಿನರಾತ್ರಿ ಶ್ರಮಿಸುತ್ತಿದ್ದಾರೆ” ಎಂದು ಹೇಳಿದರು. ವಾಯುಸೇನಾ ಮುಖ್ಯಸ್ಥರು, “ರಾಷ್ಟ್ರಪತಿಯವರ ಈ ಸವಾರಿಯು ನಮ್ಮ ಸಿಬ್ಬಂದಿಗೆ ಪ್ರೇರಣೆಯಾಗಿದೆ” ಎಂದು ತಿಳಿಸಿದರು.
ಇದನ್ನೂ ಓದಿ | ಆನ್ಲೈನ್ ಗೇಮಿಂಗ್ ಮಸೂದೆ: ರಾಷ್ಟ್ರಪತಿ ಮುರ್ಮು ಅನುಮೋದನೆ
ಅಂಬಾಲಾ ನಿಲ್ದಾಣದ 17 ಸ್ಕ್ವಾಡ್ರನ್ (ಗೋಲ್ಡನ್ ಅರ್ರೋಸ್) ಈ ಕಾರ್ಯಕ್ರಮಕ್ಕೆ ಆತಿಥೇಯತ್ವ ವಹಿಸಿತು. ರಫೇಲ್ಗಳು ಭಾರತದ ಆಧುನಿಕ ಯುದ್ಧ ಸಾಮರ್ಥ್ಯದ ಪ್ರತೀಕವಾಗಿದ್ದು, ಇಂದು ರಾಷ್ಟ್ರಪತಿಯವರ ಹಾರಾಟದೊಂದಿಗೆ ದೇಶದ ಗೌರವಕ್ಕೆ ಮತ್ತೊಂದು ಗರಿ ಸೇರಿದೆ. ಈ ಸಂದರ್ಭದಲ್ಲಿ ವಾಯುಪಡೆಯ ಆಧುನೀಕರಣ ಮತ್ತು ತಾಂತ್ರಿಕ ಪ್ರಗತಿಯನ್ನು ಎತ್ತಿ ತೋರಿಸಲಾಗಿದೆ.







