ವಿಮಾನಗಳ ರದ್ದತಿ ಮತ್ತು ವಿಳಂಬದ ಲಾಭವನ್ನು ಪಡೆದು ಟಿಕೆಟ್ ದರಗಳನ್ನು ವಿಪರೀತವಾಗಿ ಏರಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಇಂಡಿಗೋ (IndiGo) ವಿಮಾನಗಳ ಹಾರಾಟದಲ್ಲಿ ಉಂಟಾದ ವ್ಯತ್ಯಯ ಮತ್ತು ನಂತರದ ಬೆಳವಣಿಗೆಗಳು ಇದೀಗ ನ್ಯಾಯಾಲಯದ ಅಂಗಳಕ್ಕೆ ತಲುಪಿವೆ. ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಅವರ ನೇತೃತ್ವದ ವಿಭಾಗೀಯ ಪೀಠವು, ವಿಮಾನಯಾನ ಕ್ಷೇತ್ರದಲ್ಲಿ ಉಂಟಾಗಿರುವ ಅವ್ಯವಸ್ಥೆ ಮತ್ತು ಪ್ರಯಾಣಿಕರ ಶೋಷಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
40 ಸಾವಿರ ರೂ. ಟಿಕೆಟ್: ಇದು ನ್ಯಾಯವೇ?
ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾದ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡ ಇತರ ವಿಮಾನಯಾನ ಸಂಸ್ಥೆಗಳು ಮತ್ತು ಟಿಕೆಟ್ ಬುಕಿಂಗ್ ಪೋರ್ಟಲ್ಗಳು, ದರಗಳನ್ನು ಮನಸೋ ಇಚ್ಛೆ ಏರಿಕೆ ಮಾಡಿವೆ. ಸಾಮಾನ್ಯ ದಿನಗಳಲ್ಲಿ ದೊರೆಯುತ್ತಿದ್ದ ಟಿಕೆಟ್ ಬೆಲೆ ಏಕಾಏಕಿ 35 ರಿಂದ 40 ಸಾವಿರ ರೂಪಾಯಿಗಳಿಗೆ ತಲುಪಿರುವುದು ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದೆ. “ಒಂದು ಕಡೆ ವಿಮಾನಗಳು ರದ್ದಾಗುತ್ತಿವೆ, ಮತ್ತೊಂದು ಕಡೆ ಪರ್ಯಾಯ ವಿಮಾನಗಳ ದರ ಸಾಮಾನ್ಯ ಜನರ ಕೈಗೆಟುಕದಂತಾಗಿದೆ. 40 ಸಾವಿರ ರೂಪಾಯಿ ಕೊಟ್ಟು ಪ್ರಯಾಣಿಸಲು ಹೇಗೆ ಸಾಧ್ಯ? ಇದನ್ನು ತಡೆಯಲು ಸರ್ಕಾರ ಏಕೆ ವಿಫಲವಾಯಿತು?” ಎಂದು ಪೀಠವು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವನ್ನು ಪ್ರಶ್ನಿಸಿದೆ.
“ಬಿಕ್ಕಟ್ಟಿನ ಸಂದರ್ಭದಲ್ಲಿ ಜನರಿಗೆ ನೆರವಾಗುವ ಬದಲು, ಇತರ ಸಂಸ್ಥೆಗಳು ಲಾಭ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿದ್ದೇಕೆ?” ಎಂದು ನ್ಯಾಯಾಲಯ ಪ್ರಶ್ನಿಸಿದೆ. ವಿಪತ್ತು ಅಥವಾ ತಾಂತ್ರಿಕ ದೋಷಗಳಿಂದ ಒಂದು ಸಂಸ್ಥೆಯ ಸೇವೆ ಸ್ಥಗಿತಗೊಂಡಾಗ, ಇತರ ಸಂಸ್ಥೆಗಳು ‘ಡೈನಾಮಿಕ್ ಪ್ರೈಸಿಂಗ್’ (Dynamic Pricing) ಹೆಸರಿನಲ್ಲಿ ಲೂಟಿ ಮಾಡುವುದನ್ನು ನಿಯಂತ್ರಿಸಬೇಕಾದದ್ದು ನಿಯಂತ್ರಕರ ಜವಾಬ್ದಾರಿ. ಆದರೆ, ಇಲ್ಲಿ ಡಿಜಿಸಿಎ (DGCA) ಮತ್ತು ಸಚಿವಾಲಯ ಮೂಕಪ್ರೇಕ್ಷಕನಂತೆ ವರ್ತಿಸಿದೆ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ:
ಕೇವಲ ಪ್ರಯಾಣಿಕರ ಅನಾನುಕೂಲತೆ ಮಾತ್ರವಲ್ಲದೆ, ಈ ವಿದ್ಯಮಾನವು ದೇಶದ ಆರ್ಥಿಕತೆಯ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. “ವಿಮಾನಯಾನ ಎಂಬುದು ಇತ್ತೀಚಿನ ದಿನಗಳಲ್ಲಿ ಕೇವಲ ಐಷಾರಾಮಿ ಸೌಲಭ್ಯವಲ್ಲ, ಅದು ವಾಣಿಜ್ಯ ಮತ್ತು ತುರ್ತು ಸೇವೆಗಳ ಜೀವನಾಡಿ. ಇಂತಹ ಪರಿಸ್ಥಿತಿಯನ್ನು ಹೀಗೆಯೇ ಬಿಟ್ಟರೆ, ವ್ಯಾಪಾರ ವಹಿವಾಟುಗಳ ಮೇಲೆ ಹೊಡೆತ ಬೀಳುತ್ತದೆ. ನೀವು ಪರಿಸ್ಥಿತಿಯನ್ನು ಸುಧಾರಿಸುವ ಬದಲು ಇನ್ನಷ್ಟು ಹದಗೆಡಿಸಲು ಬಿಟ್ಟಿದ್ದೀರಿ,” ಎಂದು ನ್ಯಾಯಮೂರ್ತಿಗಳು ಕೇಂದ್ರದ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ | ಏಕಸ್ವಾಮ್ಯದ ಅಪಾಯದಂಚಿನಲ್ಲಿ ಭಾರತ: ಇಂಡಿಗೋ ಬಿಕ್ಕಟ್ಟು ಸರ್ಕಾರಕ್ಕೊಂದು ಎಚ್ಚರಿಕೆಯ ಗಂಟೆ
ವಿಮಾನಯಾನ ಸಂಸ್ಥೆಗಳು ತಮ್ಮ ಇಷ್ಟಬಂದಂತೆ ದರ ನಿಗದಿ ಮಾಡಲು ಸ್ವತಂತ್ರವಾಗಿದ್ದರೂ, ಅದಕ್ಕೊಂದು ಮಿತಿ ಇರಬೇಕು ಎಂದು ಸಾರ್ವಜನಿಕರು ಮತ್ತು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾದಾಗ ದರ ನಿಯಂತ್ರಣ ಮಾಡಬೇಕಾದ್ದು ಸರ್ಕಾರದ ಕರ್ತವ್ಯ. ಆದರೆ, ಸರ್ಕಾರ ಕಾರ್ಪೊರೇಟ್ ಕಂಪನಿಗಳ ಪರವಾಗಿ ನಿಂತಂತೆ ಕಾಣುತ್ತಿದೆ ಎಂಬ ಆರೋಪಕ್ಕೆ ಹೈಕೋರ್ಟ್ನ ಈ ಚಾಟಿ ಏಟು ಪುಷ್ಠಿ ನೀಡಿದೆ.







