“ಎರಡೂವರೆ ವರ್ಷಕ್ಕೆ ಸಿಎಂ ಹುದ್ದೆ ಹಂಚಿಕೆ ಅಂತ ಎಲ್ಲಿಯೂ ತೀರ್ಮಾನ ಆಗಿಲ್ಲ. ಹೈಕಮಾಂಡ್ ಮಟ್ಟದಲ್ಲಿ ಅಂತಹ ಯಾವುದೇ ಒಪ್ಪಂದ ನಡೆದಿಲ್ಲ,” ಎಂದು ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನೇರವಾಗಿ ಹೇಳುವ ಮೂಲಕ ಪೂರ್ಣಾವಧಿಗೆ ತಾವೇ ಮುಖ್ಯಮಂತ್ರಿ ಎಂಬುದನ್ನು ಪರೋಕ್ಷವಾಗಿ ಘೋಷಿಸಿದರು.
ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನವು ಕೇವಲ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಮಾತ್ರ ಸೀಮಿತವಾಗದೆ, ರಾಜ್ಯ ರಾಜಕೀಯದ ಮಹತ್ವದ ಬೆಳವಣಿಗೆಗೂ ಸಾಕ್ಷಿಯಾಗಿದೆ. ಗುರುವಾರ ನಡೆದ ಕಲಾಪದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಕುರಿತು ಗಂಭೀರ ಚರ್ಚೆ ನಡೆಯುತ್ತಿದ್ದ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಆರ್. ಅಶೋಕ್ ನಡುವೆ ನಡೆದ ಸ್ವಾರಸ್ಯಕರ ಸಂಭಾಷಣೆ ಹಾಗೂ ಸಿಎಂ ನೀಡಿದ ಅಧಿಕಾರಾವಧಿಯ ಸ್ಪಷ್ಟನೆ ಈಗ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಕಳೆದ ನಾಲ್ಕು ದಿನಗಳಿಂದ ಸಿಎಂ ಸಿದ್ದರಾಮಯ್ಯನವರು ಅನಾರೋಗ್ಯದ ಕಾರಣದಿಂದ ಅಥವಾ ಕೆಲಸದ ಒತ್ತಡದಿಂದ ಕೊಂಚ ಬಳಲಿದಂತೆ ಕಾಣುತ್ತಿದ್ದರು. ಇದನ್ನು ಗಮನಿಸಿದ ವಿಪಕ್ಷ ನಾಯಕ ಆರ್. ಅಶೋಕ್, ಸದನದಲ್ಲಿ ಮಾತನಾಡುವಾಗ ಸಿಎಂ ಕಾಲೆಳೆಯುವ ಪ್ರಯತ್ನ ಮಾಡಿದರು. “ಕಳೆದ ನಾಲ್ಕು ದಿನಗಳಿಂದ ನೀವು ತುಂಬಾ ಬಳಲಿದ್ರಿ. ನಾವು ಇದು ದೈಹಿಕ ಆಯಾಸ ಅಲ್ಲ, ‘ರಾಜಕೀಯ ನಿಶ್ಯಕ್ತಿ’ ಅಂದುಕೊಂಡಿದ್ವಿ. ಈಗ ನೋಡಿದರೆ ನಿಮಗೆ ರಾಜಕೀಯ ಶಕ್ತಿ ಬಂದಿದೆಯಾ?” ಎಂದು ಅಶೋಕ್ ವ್ಯಂಗ್ಯವಾಗಿ ಪ್ರಶ್ನಿಸಿದರು.
ಇದನ್ನೂ ಓದಿ | ಬಾಂಗ್ಲಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಸಾವು!
ಅಶೋಕ್ ಅವರ ಈ ಮಾತಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಸಿದ್ದರಾಮಯ್ಯ, “ನನಗೆ ರಾಜಕೀಯ ನಿಶ್ಯಕ್ತಿ ಅನ್ನೋದು ಇಲ್ವೇ ಇಲ್ಲ. ಅಂಥ ಪರಿಸ್ಥಿತಿ ಅಥವಾ ಅವಕಾಶ ನನ್ನ ರಾಜಕೀಯ ಜೀವನದಲ್ಲಿ ಸೃಷ್ಟಿಯಾಗೋದಿಲ್ಲ. ಅಷ್ಟೇ ಅಲ್ಲ, ರಾಜಕೀಯವನ್ನು ಅಷ್ಟೊಂದು ತಲೆ ಕೆಡಿಸಿಕೊಂಡು, ಮೈಮೇಲೆ ಎಳೆದುಕೊಂಡು ಮಾಡುವ ಅಗತ್ಯವೂ ನನಗಿಲ್ಲ. ನಾನು ಯಾವಾಗಲೂ ಲವಲವಿಕೆಯಿಂದಲೇ ಇರುತ್ತೇನೆ,” ಎಂದು ನಗುನಗುತ್ತಲೇ ತಿರುಗೇಟು ನೀಡಿದರು. ಈ ಮಾತುಕತೆ ಸದನದಲ್ಲಿ ಕೆಲಕಾಲ ನಗೆಯುಕ್ಕಿಸಿ, ಗಂಭೀರ ವಾತಾವರಣವನ್ನು ತಿಳಿಗೊಳಿಸಿತು.







