ಕೊಪ್ಪಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ಗವಿಸಿದ್ದಪ್ಪ ನಾಯಕ್ ಅವರ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ಬಿಜೆಪಿ ಬುಧವಾರ ಕರ್ನಾಟಕ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಮನವಿ ಪತ್ರ ಸಲ್ಲಿಸಿದೆ. ಈ ಹತ್ಯೆಯ ಹಿಂದೆ ಜಿಹಾದಿ ಉಗ್ರಗಾಮಿ ಸಂಘಟನೆಗಳ ಪಿತೂರಿ ಇದೆ ಎಂದು ಆರೋಪಿಸಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರವು ಉಗ್ರರ ಬಗ್ಗೆ ಮೃದು ದೋರಣೆ ಹೊಂದಿದೆ ಎಂದು ಟೀಕಿಸಿದೆ.
ಆಗಸ್ಟ್ 3, 2025ರಂದು ಕೊಪ್ಪಳ ಪಟ್ಟಣದ ಸೈಯದ್ ನದೀಮುಲ್ಲಾ ಖಾದ್ರಿ ಮಸೀದಿಯ ಮುಂದೆ ಸಂಜೆ 7.30ರಿಂದ ರಾತ್ರಿ 8 ಗಂಟೆಯ ನಡುವೆ ವಾಲ್ಮೀಕಿ ಸಮುದಾಯದ ಗವಿಸಿದ್ದಪ್ಪ ನಾಯಕ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಬಿಜೆಪಿಯ ಶಾಸಕರು ಮತ್ತು ನಾಯಕರು ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಈ ಕೊಲೆಯ ಹಿಂದೆ ಪಿಎಫ್ಐ ಮತ್ತು ಎಸ್ಡಿಪಿಐ ನಂತಹ ಸಂಘಟನೆಗಳ ಪಾತ್ರ ಇದೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ಸರ್ಕಾರದ ಮೃದು ನೀತಿಯಿಂದಾಗಿ ಉಗ್ರಗಾಮಿ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ನಿಯೋಗ ಆರೋಪಿಸಿದೆ.
ಮನವಿಯಲ್ಲಿ, “ಕೊಪ್ಪಳದ ಶಾಂತಿ ಮತ್ತು ನೆಮ್ಮದಿಯನ್ನು ಕದಡಿದ ಈ ಬರ್ಬರ ಹತ್ಯೆಯಿಂದಾಗಿ ಸಮುದಾಯಗಳ ನಡುವೆ ಭಯದ ವಾತಾವರಣ ಸೃಷ್ಟಿಯಾಗಿದೆ. ಪ್ರಕರಣದಲ್ಲಿ ಉಗ್ರಗಾಮಿ ಸಂಘಟನೆಗಳ ಕೈವಾಡ ಇದ್ದು, ಸ್ಥಳೀಯ ಪೊಲೀಸರ ತನಿಖೆಯಲ್ಲಿ ಸತ್ಯ ಬಯಲಾಗದು” ಎಂದು ಬಿಜೆಪಿ ಹೇಳಿದೆ. ಗವಿಸಿದ್ದಪ್ಪ ನಾಯಕ್ ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದು, ವಾಲ್ಮೀಕಿ ಸಮುದಾಯದವರಾಗಿದ್ದರು. ಹತ್ಯೆಯ ನಂತರ ಕೊಪ್ಪಳದಲ್ಲಿ ಉದ್ವಿಗ್ನತೆ ಮನೆಮಾಡಿದ್ದು, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ | ಹನಿಟ್ರ್ಯಾಪ್ನಿಂದ ರಾಜೀನಾಮೆಯವರೆಗೆ: ಪಕ್ಷದೊಳಗಿನ ರಾಜಣ್ಣ ವಿರೋಧಿಗಳಾರು?
ಬಿಜೆಪಿ ನಿಯೋಗದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವರು ಭಾಗವಹಿಸಿದ್ದು, ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸುವಂತೆ ಮತ್ತು ಕುಟುಂಬಕ್ಕೆ ರೂ 50 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದರು. ಈ ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರು ನಡೆಸುತ್ತಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸರ್ಕಾರ ಹೇಳಿದೆ, ಆದರೆ ಬಿಜೆಪಿ ಇದನ್ನು ಸಮರ್ಥಿಸದೆ ಎನ್ಐಎ ತನಿಖೆಗೆ ಒತ್ತಾಯಿಸಿದೆ.
ಈ ಘಟನೆಯು ಕರ್ನಾಟಕದಲ್ಲಿ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದ್ದು, ಬಿಜೆಪಿಯು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ರಾಜ್ಯಪಾಲರು ಈ ಮನವಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲಕರವಾಗಿದೆ.







