ಈಗಾಗಲೇ ಹಲವು ಬಾರಿ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಈಗಾಗಲೇ ಹಲವು ಬಾರಿ ಮುಂದುಡಲಾಗಿದ್ದು ಶಾಲೆಗಳಿಗೆ ರಜೆಯನ್ನು ನೀಡಿ ಸಮೀಕ್ಷೆ ನಡೆಸಲಾಗುತ್ತಿದೆ. ಈಗ ಮತ್ತೊಮ್ಮೆ ರಾಜ್ಯ ಸರ್ಕಾರ ಅಕ್ಟೋಬರ್ 31ರವರೆಗೆ ವಿಸ್ತರಿಸಲು ನಿರ್ಧರಿಸಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಈ ತೀರ್ಮಾನವನ್ನು ಘೋಷಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರವಿವಾರ ನಡೆದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಈ ಸಮೀಕ್ಷೆಯನ್ನು ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸಲಾಗುತ್ತಿದ್ದು, ರಾಜ್ಯದ ಸುಮಾರು 7 ಕೋಟಿ ಜನರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಅಧ್ಯಯನ ಮಾಡುವ ಉದ್ದೇಶ ಹೊಂದಿದೆ. ಆದರೆ ಸೆಪ್ಟೆಂಬರ್ ಅಂತ್ಯದಲ್ಲಿ ಪ್ರಾರಂಭವಾದ ಈ ಸಮೀಕ್ಷೆಯನ್ನು ಈಗಾಗಲೇ ಹಲವು ಬಾರಿ ವಿಸ್ತರಿಸಲಾಗಿದೆ. ಮೊದಲು ಅಕ್ಟೋಬರ್ 7ರವರೆಗೆ ನಿಗದಿಯಾಗಿದ್ದ ಗಡುವನ್ನು ನಂತರ ಅಕ್ಟೋಬರ್ 18ಕ್ಕೆ ಮತ್ತು ಬೆಂಗಳೂರಿನಲ್ಲಿ ಅಕ್ಟೋಬರ್ 24ಕ್ಕೆ ವಿಸ್ತರಿಸಲಾಗಿತ್ತು. ಆದರೆ, ಸಮೀಕ್ಷೆಯ ಪ್ರಗತಿ ನಿಧಾನಗತಿಯಲ್ಲಿದ್ದ ಕಾರಣ, ವಿಶೇಷವಾಗಿ ಬೆಂಗಳೂರು ಮತ್ತು ಕರಾವಳಿ ಪ್ರದೇಶಗಳಲ್ಲಿ ಇದೀಗ ಅಕ್ಟೋಬರ್ 31ರವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರಿಸಲು ತೀರ್ಮಾನಿಸಲಾಗಿದೆ. ರಾಜ್ಯಾದ್ಯಂತ ಸುಮಾರು 85% ಮನೆಗಳ ಸಮೀಕ್ಷೆ ಪೂರ್ಣಗೊಂಡಿದ್ದರೂ, ಬೆಂಗಳೂರಿನಲ್ಲಿ ಕೇವಲ 45% ಮಾತ್ರ ಮುಗಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮೀಕ್ಷೆಯ ಕುರಿತು ಸಚಿವರ ಮಾತು
ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದಂತೆ, ಸಮೀಕ್ಷೆಯನ್ನು ಅಕ್ಟೋಬರ್ 23ರಿಂದ ಪುನರಾರಂಭಿಸಲಾಗುವುದು. ಇನ್ನುಮುಂದೆ ಶಿಕ್ಷಣ ಇಲಾಖೆಯ ಶಿಕ್ಷಕರನ್ನು ಈ ಕಾರ್ಯಕ್ಕೆ ಬಳಸದಿರಲು ನಿರ್ಧರಿಸಲಾಗಿದೆ. ಬದಲಿಗೆ, ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ನಿಯೋಜಿಸಿ ಕಾರ್ಯವನ್ನು ಪೂರ್ಣಗೊಳಿಸಲಿದ್ದಾರೆ. ಇದರಿಂದ ಶಿಕ್ಷಕರಿಗೆ ಮುಕ್ತಿ ಸಿಗಲಿದ್ದು, ಶಾಲಾ ಚಟುವಟಿಕೆಗಳು ಎಂದಿನಂತೆ ಸಾಮಾನ್ಯವಾಗಿ ನಡೆಯಲು ಸಹಾಯವಾಗಲಿದೆ. ದೀಪಾವಳಿ ಹಬ್ಬದ ನಿಮಿತ್ತ ಅಕ್ಟೋಬರ್ 20ರಿಂದ 22ರವರೆಗೆ ಮೂರು ದಿನಗಳ ರಜೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಈ ಸಮೀಕ್ಷೆಯಲ್ಲಿ ಸುಮಾರು 60 ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು, ಕುಟುಂಬದ ಸದಸ್ಯರ ಜಾತಿ, ಆದಾಯ, ಶಿಕ್ಷಣ ಮಟ್ಟ, ಉದ್ಯೋಗ, ಆಸ್ತಿ ಮತ್ತು ಇತರ ಸಾಮಾಜಿಕ ಸೂಚಕಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಆದರೆ, ಕೆಲವು ಪ್ರಶ್ನೆಗಳು ಖಾಸಗಿ ಮತ್ತು ಅನಗತ್ಯವೆಂದು ಕೆಲವರು ಟೀಕಿಸಿದ್ದಾರೆ.
ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರು ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದು, ವಿವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು “ಅವಿಧೇಯತೆ” ಎಂದು ಕರೆದಿದ್ದು, ಸರ್ಕಾರದ ನೀತಿಗಳಿಗೆ ವಿರೋಧವೆಂದು ಆರೋಪಿಸಿದ್ದಾರೆ. ತಂಗಡಗಿ ಅವರು ಕೂಡ ಇದನ್ನು ಟೀಕಿಸಿ, ಸಮೀಕ್ಷೆಯು ಒಂದು ಸಮುದಾಯಕ್ಕೆ ಸೀಮಿತವಲ್ಲದೆ ರಾಜ್ಯದ ಎಲ್ಲಾ ಜನರ ಕಲ್ಯಾಣಕ್ಕಾಗಿ ಎಂದು ಹೇಳಿದ್ದಾರೆ.
ಸಮೀಕ್ಷೆಯ ಮೂಲ ಉದ್ದೇಶವು ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ಹಂಚುವುದು. ಆದರೆ, ವಿರೋಧ ಪಕ್ಷಗಳು ಇದನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸುತ್ತಿರುವುದಾಗಿ ಆರೋಪಿಸಿವೆ. ಕರಾವಳಿ ಪ್ರದೇಶಗಳಲ್ಲಿ ಪ್ರಗತಿ ನಿಧಾನವಾಗಿದ್ದು, ಕೆಲವು ಮನೆಗಳು ತಪ್ಪಿಹೋದರೆ ಆನ್ಲೈನ್ ಮೂಲಕ ಮಾಹಿತಿ ಸಲ್ಲಿಸುವ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ | ಮುಂದಿನ ಪೀಳಿಗೆಗಾಗಿ ಜಾತಿ ಸಮೀಕ್ಷೆಯಲ್ಲಿ ಭಾಗವಹಿಸಿ: ಡಿಕೆಶಿ ಮನವಿ
ಒಟ್ಟಾರೆಯಾಗಿ, ಈ ಸಮೀಕ್ಷೆ ಎಷ್ಟು ಬೇಗ ಮುಗುಯುತ್ತದೋ ಅಷ್ಟು ಬೇಗ ಮುಗಿಸಬೇಕು. ಆದಷ್ಟು ಬೇಗ ಶಿಕ್ಷಕರು ಶಾಲೆಯ ಕಡೆ ಮುಖ ಮಾಡಬೇಕು. ಅರ್ಧ ವಾರ್ಷಿಕ ರಜೆಯ ಗುಂಗಿನಿಂದ ಮಕ್ಕಳನ್ನು ಹೊರತಂದು ಪಠ್ಯದೆಡೆ ಸೆಳೆಯಬೇಕು.







