ಇತ್ತೀಚಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಐದು ವರ್ಷಗಳ ಕಾಲ ʼನಾನೇ ಸಿ.ಎಂʼ ಎಂಬ ಹೇಳಿಕೆ ನೀಡಿ ಅಧಿಕಾರದ ಹಂಚಿಕೆಯ ಗೊಂದಲದ ಬಗ್ಗೆ ತೆರೆ ಎಳೆದಿದ್ದರು. ಆ ಹೇಳಿಕೆಗೆ ಸಿಎಂ ಕುರ್ಚಿ ಆಕಾಂಕ್ಷಿಯಾಗಿದ್ದ ಡಿಸಿಎಂ ಡಿಕೆ.ಶಿವಕುಮಾರ್ರವರು ಕೂಡ ಸಮ್ಮತಿ ಸೂಚಿಸಿ, ಆ ಹೇಳಿಕೆಯ ಬಗ್ಗೆ ಚರ್ಚೆಬೇಡ ಎಂದಿದ್ದರು. ಆದರೆ ಇದೀಗ ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆಯ ಕುರಿತು ಮತ್ತೆ ಗೊಂದಲ ಮುನ್ನೆಲೆಗೆ ಬಂದಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯನವರು ಬೆಳಗಾವಿಯ ಕಪ್ಪಳಗುಡ್ಡಿಯಲ್ಲಿ ಕನಕದಾಸರ ಪ್ರತಿಮೆ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿ. ಸತೀಶ್ ಜಾರಕಿಹೊಳಿಯನ್ನು ಉತ್ತರಾಧಿಕಾರಿಯಾಗಿ ಬೆಂಬಲಿಸಿ ಮಾತನಾಡಿದ್ದು ಮತ್ತೆ ಕಾಂಗ್ರೆಸ್ನೊಳಗೆ ಭಾರಿ ಚರ್ಚೆಗೆ ಕಾರಣವಾಗಿದೆ.
“ನನ್ನ ತಂದೆ ಸಿದ್ದರಾಮಯ್ಯ ರಾಜಕೀಯದ ಕೊನೆಯ ದಿನಗಳಲ್ಲಿದ್ದಾರೆ. ಕರ್ನಾಟಕಕ್ಕೆ ಒಳ್ಳೆಯ ನಾಯಕ ಬೇಕು. ಸತೀಶ್ ಜಾರಕಿಹೊಳಿ ನಮ್ಮನ್ನು ಮುನ್ನಡೆಸಬಲ್ಲರು” ಎಂದು ಯತೀಂದ್ರ ಹೇಳಿದ್ದಾರೆ. ಆದರೆ ಈ ಮಾತಿಗೆ ನಿಜಕ್ಕೂ ಡಿಕೆಶಿಯ ಬಳಿ ಕಾಂಗ್ರೇಸ್ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವ ನಾಯಕತ್ವ ಇಲ್ಲವೇ? ಎನ್ನುವ ಸಂಶಯ ಕಾಡುತ್ತದೆ, ಈ ಮಾತು ಡಿಕೆಶಿ ಅವರಿಗೆ ಆಘಾತವನ್ನುಂಟು ಮಾಡಿದೆ. 2023ರ ಚುನಾವಣೆಯ ನಂತರ ಸಿದ್ದರಾಮಯ್ಯ ಮತ್ತು ಡಿಕೆಶಿ ಎರಡು ವರ್ಷ ಆರು ತಿಂಗಳಿಗೆ ಸಿಎಂ ಸ್ಥಾನ ಹಂಚಿಕೊಳ್ಳುವ ಒಪ್ಪಂದವಿತ್ತು ಎಂಬ ಊಹಾಪೋಹವಿದೆ. ನವೆಂಬರ್ನಲ್ಲಿ ಈ ಒಪ್ಪಂದ ಕೊನೆಗೊಳ್ಳುತ್ತದೆ. ಡಿಕೆಶಿ ಸಿಎಂ ಆಗಬಹುದು ಎಂದು ಕೆಲವರು ಭಾವಿಸಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರು, ಯತೀಂದ್ರ ಅವರು ಸೈದ್ಧಾಂತಿಕವಾಗಿ ಸತೀಶ್ ಜಾರಕಿಹೊಳಿ ಹೆಸರು ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿ. ಸತೀಶ್ ಜಾರಕಿಹೊಳಿಯವರು ಹಿಂದೆ ಅಹಿಂದ ಚಳುವಳಿಯಲ್ಲಿದ್ದರು. ಅವರಿಗೆ ಆ ಬದ್ಧತೆ ಇದೆ ಎಂದು ಹೇಳಿರಬಹುದು. ಸಿಎಂ ಹುದ್ದೆಯನ್ನು ದೃಷ್ಟಿಯಲ್ಲಿ ಇಟ್ಕೊಂಡು ಅವರು ಹೇಳಿಲ್ಲ ಎಂದು ಹೇಳಿದರು. ಇದರಿಂದಾಗಿ ಇತ್ತೀಚೆಗೆ ಸಿಎಂ ನಡೆಸಿದ ಔತಣ ಕೂಟದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.
ಇನ್ನೊಂದು ಕಡೆ ನೋಡಬೇಕಾದರೆ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯನ ಬಲಗೈ. ಅವರು ಅಹಿಂದಾ (ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು) ಗುಂಪಿನ ಪ್ರಮುಖ ನಾಯಕ. ಯತೀಂದ್ರನ ಹೇಳಿಕೆಯಿಂದ ಸಿದ್ದರಾಮಯ್ಯ ಬಣ ಡಿಕೆಶಿಗೆ ವಿರುದ್ಧ ತಂತ್ರ ರೂಪಿಸುತ್ತಿದೆ ಎಂದು ತೋರುತ್ತದೆ.
ಡಿಕೆಶಿ ಇತ್ತೀಚೆಗೆ ಆಂಧ್ರದ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದರು. ಇದು ಸಿಎಂ ಕನಸಿಗೆ ದೈವೀಕ ಬೆಂಬಲ ಪಡೆಯುವ ಪ್ರಯತ್ನ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗಿತ್ತು. ಆದರೆ ರಾಯಚೂರಿನಲ್ಲಿ ಮಾತನಾಡಿದ ಡಿಕೆಶಿ, “ನಾನು ಸಿದ್ದರಾಮಯ್ಯನವರ ಜೊತೆ ಕೆಲಸ ಮಾಡುತ್ತೇನೆ. ಯಾರೂ ಚರ್ಚಿಸಬೇಡಿ” ಎಂದು ಹೇಳಿದರು.
ಇದನ್ನೂ ಓದಿ | ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ?
ಯತೀಂದ್ರರ ಹೇಳಿಕೆ ಈಗ ಕಾಂಗ್ರೆಸ್ ಪಾಳಯದಲ್ಲಿ ಗೊಂದಲ ಉಂಟುಮಾಡಿದೆ. ಇದಾದ ಬಳಿಕ ಮತ್ತೆ ಯತೀಂದ್ರ ಮಾತನಾಡಿ, “ಇದು ನಾಯಕತ್ವ ಬದಲಾವಣೆಯ ಬಗ್ಗೆ ಅಲ್ಲ. ನನ್ನ ತಂದೆ 2028ರಲ್ಲಿ ಸ್ಪರ್ಧಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದರು. ಆದರೆ ರಾಜಕೀಯದಲ್ಲಿ ಚರ್ಚೆ ಜೋರಾಗಿದೆ. ಕಾಂಗ್ರೆಸ್ನ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, “ಇದು ಕೇವಲ ಊಹಾಪೋಹ” ಎಂದಿದ್ದಾರೆ. ಡಿಕೆಶಿ ಬೆಂಬಲಿಗರು ಇದನ್ನು ಸಿದ್ದರಾಮಯ್ಯ ಬಣದ ತಂತ್ರ ಎಂದು ಆರೋಪಿಸಿದ್ದಾರೆ.







