ಆಂಧ್ರ ಪ್ರದೇಶಕ್ಕೆ ಒಂದು ವಾರದೊಳಗೆ ಎರಡು ದೊಡ್ಡ ದುರಂತಗಳು ಸಂಭವಿಸಿವೆ. ಕರ್ನೂಲ್ನಲ್ಲಿ ಇತ್ತೀಚಿಗೆ ಸಂಭವಿಸಿದ ಬಸ್ ಬೆಂಕಿ ದುರಂತದ ನೋವು ಇನ್ನೂ ಮಾಸುವ ಮುಂಚೆಯೇ, ಇಂದು ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗ ಪಟ್ಟಣದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಕ್ತರ ಕಾಲ್ತುಳಿತ ಸಂಭವಿಸಿ, 9ಜನ ಮೃತಪಟ್ಟಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲವಾರು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆಶಂಕೆಯಿದೆ.
ಪವಿತ್ರ ಏಕಾದಶಿ ಅವಸರದಲ್ಲಿ ದುರಂತ: ಕಾರ್ತೀಕ ಮಾಸದ ಪವಿತ್ರ ಏಕಾದಶಿ ಆಚರಣೆಯ ಸಂದರ್ಭದಲ್ಲಿ ದರ್ಶನ ಮತ್ತು ಪೂಜೆ ಸಲ್ಲಿಸಲು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಒಂದೇ ದಾರಿಯಲ್ಲಿ ಸೇರುತ್ತಿದ್ದ ಸಮಯದಲ್ಲಿ, ದೇವಸ್ಥಾನದಲ್ಲಿ ಜನದಟ್ಟಣೆ ಹೆಚ್ಚಾಗಿ ಕಾಲ್ತುಳಿತ ಸಂಭವಿಸಿದೆ. ಭಕ್ತರ ದಟ್ಟಣೆಯಿಂದ ಕೆಲವರು ಸ್ಥಳದಲ್ಲಿ ಕುಸಿದು, ಒಬ್ಬರಮೆಲೋಬ್ಬರು ಬಿದ್ದು ಉಸಿರಾಟದ ಸಮಸ್ಯೆಯಿಂದ ಮೃತ ಪಟ್ಟಿದ್ದಾರೆ. ರಕ್ಷಣಾ ಸಿಬ್ಬಂದಿ, ಪೊಲೀಸ್, ಆಂಬ್ಯುಲೆನ್ಸ್ಗಳು ತ್ವರಿತವಾಗಿ ಘಟನೆ ಸಂಭವಿಸಿದ ಸ್ಥಳಕ್ಕೆ ತಲುಪಿ, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಾದ ಶ್ರೀಕಾಕುಳಂ ಜಿಲ್ಲಾ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಈ ದುರಂತಕ್ಕೆ ಸಂತಾಪ ಸೂಚಿಸಿ, ಮೃತರ ಕುಟುಂಬಗಳಿಗೆ ಪ್ರತಿ ಒಬ್ಬರಿಗೂ ₹5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. “ಈ ದುರಂತ ನಮಗೆಲ್ಲರಿಗೂ ಆಘಾತ ನೀಡಿದೆ. ಭಕ್ತರ ಮರಣವು ಹೃದಯವಿದ್ರಾವಕ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಹಾನುಭೂತಿ” ಎಂದು ಎಕ್ಸ್ನಲ್ಲಿ (ಟ್ವಿಟರ್) ಬರೆದಿದ್ದಾರೆ.
ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ, ರಕ್ಷಣಾ ಕಾರ್ಯಗಳನ್ನು ವೇಗಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಚಾರಣೆ ಆರಂಭವಾಗಿದ್ದು, ದೇವಸ್ಥಾನದ ಭದ್ರತಾ ವ್ಯವಸ್ಥೆಯಲ್ಲಿ ಲೋಪವಿದ್ದರೆ ಕಟ್ಟುನಿಟ್ಟು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ | `ನಾನ್ʼ ಕನ್ನಡಿಗ | ಗಡಿಗಳನ್ನು ಮೀರಿದ ಕನ್ನಡ ಪ್ರೀತಿ
ಕೇವಲ ಒಂದು ವಾರ ಹಿಂದೆ (ಅಕ್ಟೋಬರ್ 24) ಕರ್ನೂಲ್ನಲ್ಲಿ ಹೈದರಾಬಾದ್-ಬೆಂಗಳೂರು ಬಸ್ ಬೈಕ್ಗೆ ಡಿಕ್ಕಿ ಹೊಡೆದು ಬೆಂಕಿ ಹತ್ತಿ 20 ಜನರು ಸಜೀವ ದಹನವಾದರು.







