ಬೆಂಗಳೂರು ನಗರದ ರಸ್ತೆಗಳು, ಖಾಲಿ ಜಾಗಗಳು, ಡ್ರೈನ್ಗಳು ಎಲ್ಲೆಡೆ ಕಸದ ರಾಶಿ ಬೆಳೆಯುತ್ತಿರುವುದು ಈಗ ಹೊಸದಲ್ಲ. ಆದರೆ ಈ ಸಮಸ್ಯೆಗೆ ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ಲಿಮಿಟೆಡ್ (BSWML) ತಂದಿರುವ ಪರಿಹಾರವೇ ಹೊಸದು ಮತ್ತು ಕಠಿಣವಾದುದು. ಅಕ್ಟೋಬರ್ 30, 2025ರಿಂದ ಆರಂಭವಾದ ಕಸ ಸುರಿಯುವ ಅಭಿಯಾನದಲ್ಲಿ ಈಗಾಗಲೇ 218 ಮನೆಗಳನ್ನು ಗುರುತಿಸಿ, ಅವರು ರಸ್ತೆಯಲ್ಲಿ ಸುರಿದ ಕಸವನ್ನೇ ಟ್ರಾಕ್ಟರ್ಗಳಲ್ಲಿ ತುಂಬಿ ಅವರ ಮನೆ ಬಾಗಿಲಿಗೆ ತಂದು ಸುರಿದು ಬಿಡಲಾಗುತ್ತಿದೆ. ಮೊದಲ ಬಾರಿಗೆ ₹2,000 ದಂಡ, ಪುನರಾವರ್ತನೆಯಲ್ಲಿ ₹5,000, ವಾಣಿಜ್ಯ ಸ್ಥಳಗಳಿಗೆ ₹25,000 ರಿಂದ ₹50,000 ವರೆಗೆ ದಂಡ ವಿಧಿಸಲಾಗುತ್ತಿದೆ. ಈವರೆಗೆ 400ಕ್ಕೂ ಹೆಚ್ಚು ಉಲ್ಲಂಘನೆಗಳು ಪತ್ತೆಯಾಗಿ ₹5 ಲಕ್ಷಕ್ಕೂ ಹೆಚ್ಚು ದಂಡ ಸಂಗ್ರಹವಾಗಿದೆ.
ಇನ್ನೂ ಈ ಕಸಕ್ಕೆ ಬೆಂಕಿ ಹಾಕುವುದು ಇನ್ನಷ್ಟು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ನಗರದ 150ಕ್ಕೂ ಹೆಚ್ಚು ವಾರ್ಡ್ಗಳಲ್ಲಿ ಪ್ರತಿದಿನ ಕಸಕ್ಕೆ ಬೆಂಕಿ ಹಾಕುತ್ತಿರುವುದು ವರದಿಯಾಗುತ್ತಿವೆ. ಇದರಿಂದ PM2.5 ಮಟ್ಟ ಗಣನೀಯವಾಗಿ ಹೆಚ್ಚಿ ವಾಯು ಮಾಲಿನ್ಯ ತೀವ್ರಗೊಳ್ಳುತ್ತಿದೆ. ರಾತ್ರಿ-ಬೆಳಗ್ಗೆ ಸ್ಮಾಗ್ ಮತ್ತು ಬೂದಿ ವಾಸನೆ ತುಂಬಿ, ಉಸಿರಾಟದ ಸಮಸ್ಯೆ, ಕಣ್ಣು ಉರಿ, ಅಲರ್ಜಿ ಹೆಚ್ಚಾಗುತ್ತಿವೆ.
ಇದನ್ನು ತಡೆಯಲು ನವೆಂಬರ್ 16, 2025ರಿಂದ BSWML ಹೊಸ ಕಠಿಣ ನಿಯಮ ಜಾರಿಗೊಳಿಸಿದೆ. ಕಸಕ್ಕೆ ಬೆಂಕಿ ಹಾಕಿದರೆ ಮೊದಲು ₹10,000 ದಂಡ, ಪುನರಾವರ್ತನೆಯಲ್ಲಿ ಎಫ್ಐಆರ್ ದಾಖಲು, ತದನಂತರ ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ರೂಲ್ಸ್ 2016, ಏರ್ ಪೊಲ್ಯೂಷನ್ ಆಕ್ಟ್ 1981 ಹಾಗೂ IPC ಸೆಕ್ಷನ್ 268-269ರಡಿ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲು ಶಿಕ್ಷೆ ವಿಧಿಸಲಾಗುವುದು. ಮಾರ್ಶಲ್ಗಳ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸಲಾಗಿದ್ದು, ಎಲ್ಲಾ ಇಂಜಿನಿಯರ್ಗಳು ಮತ್ತು ಜೂನಿಯರ್ ಹೆಲ್ತ್ ಇನ್ಸ್ಪೆಕ್ಟರ್ಗಳಿಗೆ ಎಫ್ಐಆರ್ ದಾಖಲಿಸುವ ಅಧಿಕಾರ ನೀಡಲಾಗಿದೆ. ಕಸ ಬೆಂಕಿ ಹಾಕುವ ವೀಡಿಯೋ ಒದಗಿಸಿದವರಿಗೆ ₹5,000 ನಗದು ಬಹುಮಾನವೂ ಘೋಷಿಸಲಾಗಿದೆ.
ಇದನ್ನೂ ಓದಿ | ಕಸ ಗುಡಿಸುವ ವಾಹನ ಖರೀದಿ ಓಕೆ, ಆದರೆ ಬಾಡಿಗೆಗೆ ಯಾಕೆ ?
BSWML ಸಿಇಒ ಕರೀ ಗೌಡ ಅವರು “ಸ್ವಚ್ಛ ಸರ್ವೇಕ್ಷಣ 2025ರಲ್ಲಿ ಬೆಂಗಳೂರು ಐದನೇ ಅತಿ ಕೊಳಕು ನಗರವಾಗಿ ಕಂಡುಬಂದಿದೆ. ಕಸ ವಿಂಗಡಿಸಿ ಕೊಡದಿದ್ದರೆ, ರಸ್ತೆಯಲ್ಲಿ ಸುರಿದರೆ ಅಥವಾ ಬೆಂಕಿ ಹಾಕಿದರೆ ಯಾವುದೇ ರಿಯಾಯಿತಿ ಇಲ್ಲ” ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ.







