ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಬಿಡುಗಡೆ ಮಾಡಿದ ಅಧಿಕೃತ “ಕರ್ನಾಟಕದ ಪ್ರವಾಸಿ ತಾಣಗಳ ಕೈಪಿಡಿ”ಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಗುರುತಿಸಲಾದ 106 ಪ್ರವಾಸಿ ತಾಣಗಳೊಂದಿಗೆ ಮಂಡ್ಯವನ್ನು ರಾಜ್ಯದಲ್ಲಿ ಮೊದಲ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆ (98), ಮೈಸೂರು (89), ಬೆಳಗಾವಿ (78) ಸೇರಿದಂತೆ ಎಲ್ಲ ಜಿಲ್ಲೆಗಳನ್ನು ಹಿಂದಿಕ್ಕಿ ಸಕ್ಕರೆ ನಗರಿ ಎನಿಸಿಕೊಂಡಿರುವ ಮಂಡ್ಯ ಈ ಗೌರವಕ್ಕೆ ಪಾತ್ರವಾಗಿದೆ.
ಈ 106 ತಾಣಗಳಲ್ಲಿ ವಿಶ್ವವಿಖ್ಯಾತ ಶಿವನಸಮುದ್ರ ಜಲಪಾತ, ಐತಿಹಾಸಿಕ ಶ್ರೀರಂಗಪಟ್ಟಣ ಕೋಟೆ, ರಂಗನತಿಟ್ಟು ಪಕ್ಷಿಧಾಮ, ಕೃಷ್ಣರಾಜಸಾಗರ ಆಣೆಕಟ್ಟು ಮತ್ತು ಬೃಂದಾವನ ಉದ್ಯಾನವನ, ಬಾಲಮುರಿ-ಎಡಮುರಿ ಜಲಪಾತಗಳು, ಕೊಕ್ಕರೆ ಬೆಳಗೊಳ ಜೈನ ಬಸದಿ, ಮದ್ದೂರು ಶ್ರೀ ಮಹಾಲಕ್ಷ್ಮೀ ದೇವಾಲಯ ಪ್ರಮುಖವಾದವು. ಇವಲ್ಲದೆ ತೊಂಡನೂರು ಕೆರೆ, ಕುಂತಿಬೆಟ್ಟ, ಕೆ.ಎಂ. ದೊಡ್ಡಿ ಗುಡ್ಡ, ಕುಂಚಿಟಿಗ ಕೆರೆ, ಭೀಮೇಶ್ವರ ದೇವಾಲಯ ಮುಂತಾದ ತಾಣಗಳು ಸ್ಥಳೀಯರಿಗೆ ಮತ್ತು ಚಾರಣ ಪ್ರೀಯರಿಗೆ ಹೆಚ್ಚು ಅಚ್ಚುಮೆಚ್ಚು.
ಪ್ರವಾಸೋದ್ಯಮ ಇಲಾಖೆಯ ದತ್ತಾಂಶದ ಪ್ರಕಾರ 2023-2024ರಲ್ಲಿ ಮಂಡ್ಯ ಜಿಲ್ಲೆಗೆ ಸುಮಾರು 1.15 ಕೋಟಿ ಪ್ರವಾಸಿಗರು ಆಗಮಿಸಿದ್ದಾರೆ. ಇದರಲ್ಲಿ ಶಿವನಸಮುದ್ರಕ್ಕೆ 45 ಲಕ್ಷಕ್ಕೂ ಹೆಚ್ಚು, ಶ್ರೀರಂಗಪಟ್ಟಣಕ್ಕೆ 32 ಲಕ್ಷಕ್ಕೂ ಹೆಚ್ಚು ಮತ್ತು ಕೆಆರ್ಎಸ್ಗೆ ವಾರಾಂತ್ಯದಲ್ಲಿ ಸರಾಸರಿ 40-50 ಸಾವಿರ ಪ್ರವಾಸಿಗರು ಬರುತ್ತಿದ್ದಾರೆ.
ಈ ಸಾಧನೆಯನ್ನು ಗೌರವಿಸಿ ರಾಜ್ಯ ಸರ್ಕಾರವು 2024-2025ನೇ ಸಾಲಿನಲ್ಲಿ ಮಂಡ್ಯ ಜಿಲ್ಲೆಗೆ ವಿಶೇಷ ಅಭಿವೃದ್ಧಿ ಅನುದಾನ ಮಂಜೂರು ಮಾಡಿದೆ. ಶಿವನಸಮುದ್ರದಲ್ಲಿ ಹೊಸ ವೀಕ್ಷಣಾ ಗೋಪುರ ಮತ್ತು ವಾಕಿಂಗ್ ಟ್ರ್ಯಾಕ್, ಶ್ರೀರಂಗಪಟ್ಟಣದಲ್ಲಿ ಡಿಜಿಟಲ್ ಮ್ಯೂಸಿಯಂ, ರಂಗನತಿಟ್ಟುಗೆ ಹೆಚ್ಚುವರಿ ಬೋಟಿಂಗ್ ಘಟಕ, ಎಲ್ಲ ಪ್ರಮುಖ ತಾಣಗಳಲ್ಲಿ QR ಕೋಡ್ ಆಧಾರಿತ ಮಾಹಿತಿ ಫಲಕಗಳನ್ನು ಅಳವಡಿಸುವ ಕಾಮಗಾರಿ ಈಗಾಗಲೇ ಆರಂಭವಾಗಿದೆ.
ಇದನ್ನೂ ಓದಿ | ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಕಾಂಗ್ರೆಸ್ ಬೃಹತ್ ಸಾಧನಾ ಸಮಾವೇಶ
ಕಾವೇರಿ ನದಿಯ ಆಶೀರ್ವಾದ, ಐತಿಹಾಸಿಕ ಪರಂಪರೆ, ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕ ಕೇಂದ್ರಗಳ ಸಮ್ಮಿಲನದಿಂದ ಮಂಡ್ಯ ಒಂದೇ ಜಿಲ್ಲೆಯಲ್ಲಿ ವೈವಿಧ್ಯಮಯ ಪ್ರವಾಸಿ ಅನುಭವ ನೀಡುತ್ತಿದೆ. ಸಕ್ಕರೆ ಜಿಲ್ಲೆ ಎಂಬ ಹಳೇ ಬಿರುದಿಗೆ ಈಗ “ಕರ್ನಾಟಕದ ಪ್ರವಾಸಿ ರಾಜಧಾನಿ” ಎಂಬ ಹೊಸ ಗೌರವ ಸೇರಿಕೊಂಡಿದೆ.







