ರಾಜ್ಯ ವಿಧಾನಸಭೆಯ ಚಳಿಗಾಲ ಅಧಿವೇಶನದಲ್ಲಿ ಸಲ್ಲಿಸಲಾದ ಅಧಿಕೃತ ದತ್ತಾಂಶದ ಪ್ರಕಾರ, ರಾಜ್ಯದ 37 ವಿವಿಧ ಇಲಾಖೆಗಳಲ್ಲಿ ಒಟ್ಟಾರೆ 2,84,673 ಹುದ್ದೆಗಳು ಖಾಲಿ ಇವೆ ಎಂದು ಸ್ವತಃ ಸರ್ಕಾರವೇ ಒಪ್ಪಿಕೊಂಡಿದೆ. ಇದು ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಸಂಖ್ಯೆಯಾಗಿದ್ದು, ಶಿಕ್ಷಣ, ಆರೋಗ್ಯ, ಕೃಷಿ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಆಡಳಿತ ಸಂಪೂರ್ಣ ದುರ್ಬಲಗೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಈ ಖಾಲಿ ಹುದ್ದೆಗಳ ಪೈಕಿ ಅತಿ ಹೆಚ್ಚು ಪ್ರಮಾಣದಲ್ಲಿ ಖಾಲಿ ಇರುವುದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಲ್ಲಿ 79,600 ಹುದ್ದೆಗಳು. ಇದರಿಂದ ಲಕ್ಷಾಂತರ ಶಾಲೆಗಳಲ್ಲಿ ಅತಿಥಿ ಶಿಕ್ಷಕರಿಂದಲೇ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಎರಡನೇ ಸ್ಥಾನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 37,000 ಹುದ್ದೆಗಳು ಖಾಲಿ ಇರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್ಗಳ ಕೊರತೆ ತೀವ್ರಗೊಂಡಿದ್ದು, ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಓಡಾಡುತ್ತಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ 13,600 ಉಪನ್ಯಾಸಕ ಹುದ್ದೆಗಳು ಭರ್ತಿಯಾಗದೇ ಇರುವುದು ಕಾಲೇಜುಗಳ ಶೈಕ್ಷಣಿಕ ಗುಣಮಟ್ಟವನ್ನೇ ಕುಸಿಯುವಂತೆ ಮಾಡಿದೆ.
ಇನ್ನುಳಿದ ಪ್ರಮುಖ ಇಲಾಖೆಗಳ ಸ್ಥಿತಿಯೂ ಕಳವಳಕಾರಿ. ಪಶುಸಂಗೋಪನೆ ಇಲಾಖೆಯಲ್ಲಿ 11,000, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 8,500, ಹಣಕಾಸು ಇಲಾಖೆಯಲ್ಲಿ 7,600, ಕಾನೂನು ಇಲಾಖೆಯಲ್ಲಿ 7,600, ಕೃಷಿ ಇಲಾಖೆಯಲ್ಲಿ 6,800, ಅರಣ್ಯ ಇಲಾಖೆಯಲ್ಲಿ 6,400, ಜನಸಂಪರ್ಕ ಇಲಾಖೆಯಲ್ಲಿ 6,000, ಸಹಕಾರ ಇಲಾಖೆಯಲ್ಲಿ 4,700, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 3,300 ಹುದ್ದೆಗಳು ಖಾಲಿ ಇವೆ. ಗೃಹ ಇಲಾಖೆಯಲ್ಲಿ (ಪೊಲೀಸ್ ಸೇರಿದಂತೆ) ಸುಮಾರು 20,000 ಕಾನ್ಸ್ಟೇಬಲ್ ಮತ್ತು ಇತರ ಹುದ್ದೆಗಳು ಖಾಲಿಯಾಗಿರುವುದು ಕಾನೂನು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ.
ಪ್ರತಿಪಕ್ಷ ಬಿಜೆಪಿ ಈ ವಿಷಯವನ್ನು ತೀವ್ರವಾಗಿ ಎತ್ತಿ ಹಿಡಿದಿದ್ದು, “ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ 50,000 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡುವ ಸರ್ಕಾರಕ್ಕೆ 2.84 ಲಕ್ಷ ಉದ್ಯೋಗ ಭರ್ತಿ ಮಾಡಲು ಹಣವಿಲ್ಲ ಎಂಬುದು ಸಂಪೂರ್ಣ ಸುಳ್ಳು ಮತ್ತು ಜನರನ್ನು ಮೋಸ ಮಾಡುವ ಪ್ರಯತ್ನ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಸಾವಿರಾರು ಸರ್ಕಾರಿ ನೌಕರರ ಇಲಾಖಾ ಬಡ್ತಿಗಳನ್ನೂ ತಡೆಹಿಡಿಯಲಾಗಿದ್ದು, 10-15 ವರ್ಷಗಳಿಂದ ಬಡ್ತಿ ನಿರೀಕ್ಷೆಯಲ್ಲಿರುವ ನೌಕರರಲ್ಲಿ ಭಾರೀ ಅಸಮಾಧಾನ ಉಂಟಾಗಿದೆ.
ಇದನ್ನೂ ಓದಿ | ಅಧಿಕಾರ ಹಂಚಿಕೆ ಗೊಂದಲಕ್ಕೆ ತೆರೆ, ಶಾಸಕರಿಗೆ ಎಚ್ಚರಿಕೆ ನೀಡಿದ ಸಿಎಂ
ಸರ್ಕಾರದ ಉತ್ತರ ಯಾವಾಗಲೂ ಒಂದೇ: “ಆರ್ಥಿಕ ಸಂಕಷ್ಟ”, “ಕೆಪಿಎಸ್ಸಿ ವಿಳಂಬ”, “ಬಜೆಟ್ ನಿರ್ಬಂಧ”, “ನ್ಯಾಯಾಲಯ ಕೇಸ್ಗಳು”. ಆದರೆ ಜನರ ಪ್ರಶ್ನೆ ಗ್ಯಾರಂಟಿಗಳಿಗೆ ಸಾವಿರಾರು ಕೋಟಿ ಖರ್ಚು ಮಾಡುವಾಗ ಉದ್ಯೋಗ ಭರ್ತಿಗೆ ಹಣವಿಲ್ಲ ಎಂಬುದು ನಂಬಲಸಾಧ್ಯವೇ? ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ, ಸರ್ಕಾರ ಗುತ್ತಿಗೆ, ಔಟ್ಸೋರ್ಸಿಂಗ್, ಡೇಟಾ ಎಂಟ್ರಿ ಆಪರೇಟರ್ಗಳ ಮೂಲಕ ಆಡಳಿತ ನಡೆಸುತ್ತಿದ್ದು, ಯುವಕರಿಗೆ ನೀಡಿದ “ಶಾಶ್ವತ ಉದ್ಯೋಗ” ಭರವಸೆಯನ್ನು ಸಂಪೂರ್ಣ ಮರೆಮಾಚಿದೆ ಎಂದು ಕೂಗು ಪ್ರಜ್ಞಾವಂತ ವಲಯದಲ್ಲಿ ಕೇಳಿ ಬರುತ್ತಿದೆ







