ಜಾಗತಿಕ ವಾಣಿಜ್ಯ ಭೂಪಟದಲ್ಲಿ ಭಾರತ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು ಸೋಮವಾರ (ಡಿ.22, 2025) ದೂರವಾಣಿ ಕರೆಯ ಮೂಲಕ ಮಾತುಕತೆ ನಡೆಸಿ, ಬಹುನಿರೀಕ್ಷಿತ ‘ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ’ದ (FTA) ಮಾತುಕತೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಕೇವಲ 9 ತಿಂಗಳ ದಾಖಲೆ ಸಮಯದಲ್ಲಿ ಅಂತಿಮಗೊಂಡಿರುವ ಈ ಒಪ್ಪಂದವು, ಕಳೆದ ಕೆಲವು ವರ್ಷಗಳಲ್ಲಿ ಭಾರತ ಮಾಡಿಕೊಂಡಿರುವ 7ನೇ ಪ್ರಮುಖ ಎಫ್ಟಿಎ ಆಗಿದೆ. ಇದಕ್ಕೂ ಮೊದಲು ಒಮನ್, ಯುನೈಟೆಡ್ ಕಿಂಗ್ಡಮ್ (UK), EFTA ರಾಷ್ಟ್ರಗಳು, ಯುಎಇ, ಆಸ್ಟ್ರೇಲಿಯಾ ಮತ್ತು ಮಾರಿಷಸ್ನೊಂದಿಗೆ ಭಾರತ ಯಶಸ್ವಿ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡಿತ್ತು.
ಒಪ್ಪಂದದ ಪ್ರಮುಖ ಮುಖ್ಯಾಂಶಗಳು:
ಶುಲ್ಕ ರಹಿತ ಮಾರುಕಟ್ಟೆ ಪ್ರವೇಶ: ಈ ಒಪ್ಪಂದದ ಅನ್ವಯ, ನ್ಯೂಜಿಲೆಂಡ್ ಮಾರುಕಟ್ಟೆಗೆ ರಫ್ತಾಗುವ ಭಾರತದ ಶೇ.100ರಷ್ಟು ಸರಕುಗಳಿಗೆ ಇನ್ಮುಂದೆ ಯಾವುದೇ ಸುಂಕವಿರುವುದಿಲ್ಲ. ಇದರಿಂದ ಭಾರತದ ಜವಳಿ, ಚರ್ಮೋದ್ಯಮ, ಆಭರಣ, ಇಂಜಿನಿಯರಿಂಗ್ ಸರಕುಗಳು ಮತ್ತು ಔಷಧೀಯ ಉತ್ಪನ್ನಗಳಿಗೆ ಅಲ್ಲಿನ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಸಿಗಲಿದೆ.
ಭಾರೀ ಹೂಡಿಕೆ: ಮುಂದಿನ 15 ವರ್ಷಗಳಲ್ಲಿ ನ್ಯೂಜಿಲೆಂಡ್ ಭಾರತದಲ್ಲಿ ಬರೋಬ್ಬರಿ 20 ಬಿಲಿಯನ್ ಡಾಲರ್ (ಸುಮಾರು 1.6 ಲಕ್ಷ ಕೋಟಿ ರೂ.) ಹೂಡಿಕೆ ಮಾಡುವ ಬದ್ಧತೆಯನ್ನು ವ್ಯಕ್ತಪಡಿಸಿದೆ. ಇದು ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ದೊಡ್ಡ ಬಲ ನೀಡಲಿದೆ.
ವ್ಯಾಪಾರ ದ್ವಿಗುಣ: ಪ್ರಸ್ತುತ ಇರುವ ದ್ವಿಪಕ್ಷೀಯ ವ್ಯಾಪಾರವನ್ನು ಮುಂದಿನ 5 ವರ್ಷಗಳಲ್ಲಿ ದುಪ್ಪಟ್ಟುಗೊಳಿಸುವ ಗುರಿಯನ್ನು ಉಭಯ ನಾಯಕರು ಹಾಕಿಕೊಂಡಿದ್ದಾರೆ.
ಉದ್ಯೋಗ ಮತ್ತು ವೀಸಾ: ಭಾರತೀಯ ವೃತ್ತಿಪರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಸೇವಾ ವಲಯದ 118 ವಿಭಾಗಗಳಲ್ಲಿ ಭಾರತೀಯರಿಗೆ ಮಾರುಕಟ್ಟೆ ಪ್ರವೇಶ ಸಿಗಲಿದ್ದು, ವಾರ್ಷಿಕವಾಗಿ 5,000 ವೃತ್ತಿಪರರಿಗೆ ಮತ್ತು 1,000 ‘ವರ್ಕಿಂಗ್ ಹಾಲಿಡೇ’ ವೀಸಾಗಳನ್ನು ನೀಡಲು ನ್ಯೂಜಿಲೆಂಡ್ ಒಪ್ಪಿದೆ.
ಕೃಷಿ ಮತ್ತು ಹೈನುಗಾರಿಕೆ: ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಕಿವೀಸ್ ನಾಡಿನ ತಂತ್ರಜ್ಞಾನ ನೆರವಾಗಲಿದೆ. ಸೇಬು, ಕಿವಿ ಹಣ್ಣು ಮತ್ತು ಜೇನುತುಪ್ಪದ ಉತ್ಪಾದನೆಗೆ ‘ಸೆಂಟರ್ ಆಫ್ ಎಕ್ಸಲೆನ್ಸ್’ ಸ್ಥಾಪಿಸಲಾಗುವುದು. ಆದರೆ, ಭಾರತದ ಹೈನುಗಾರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ, ನ್ಯೂಜಿಲೆಂಡ್ನ ಡೈರಿ ಉತ್ಪನ್ನಗಳಿಗೆ ಮುಕ್ತ ಪ್ರವೇಶ ನೀಡದಿರುವುದು ಗಮನಾರ್ಹ.
ಇದನ್ನೂ ಓದಿ | ಡಿ.ಕೆ. ಶಿವಕುಮಾರ್ಗೆ ಪರೋಕ್ಷವಾಗಿ ‘ಟಾಂಗ್’ ನೀಡಿದ ಎಂ.ಬಿ.ಪಾಟೀಲ್!
ವಿಕಸಿತ ಭಾರತದತ್ತ ಮತ್ತೊಂದು ಹೆಜ್ಜೆ:
ಕಳೆದ ಮಾರ್ಚ್ 2025ರಲ್ಲಿ ನ್ಯೂಜಿಲೆಂಡ್ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದ್ದಾಗ ಈ ಮಾತುಕತೆ ಆರಂಭವಾಗಿತ್ತು. ಕೇವಲ ಒಂಭತ್ತು ತಿಂಗಳಲ್ಲಿ ಇದು ಪೂರ್ಣಗೊಂಡಿರುವುದು ಉಭಯ ದೇಶಗಳ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸುತ್ತದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಈ ಒಪ್ಪಂದವು ಭಾರತದ ರೈತರು, ಉದ್ಯಮಿಗಳು ಮತ್ತು ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳ ಬಾಗಿಲು ತೆರೆಯಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.







