ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವದ ಹಗ್ಗಜಗ್ಗಾಟ ಮತ್ತು ಶ್ರೇಯಸ್ಸು (Credit) ತೆಗೆದುಕೊಳ್ಳುವ ಪೈಪೋಟಿ ಮುಂದುವರಿದಿರುವ ಬೆನ್ನಲ್ಲೇ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಇತ್ತೀಚಿನ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಹೇಳಿಕೆಯನ್ನು ಬೆಂಬಲಿಸುವ ಮೂಲಕ ಸಚಿವ ಎಂ.ಬಿ. ಪಾಟೀಲ್ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಈಗ ಕೇಳಿಬರುತ್ತಿವೆ.
ತವರಿನ ಜಿಲ್ಲೆ ಕಲಬುರಗಿಯಲ್ಲಿ ಶನಿವಾರ ಮಾತನಾಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಒಗ್ಗಟ್ಟಿನ ಮಂತ್ರ ಜಪಿಸಿದ್ದರು. “ಕಾಂಗ್ರೆಸ್ ಪಕ್ಷ ಯಾರೋ ಒಬ್ಬ ನಾಯಕನಿಂದ ಬೆಳೆದಿಲ್ಲ ಅಥವಾ ಅಧಿಕಾರಕ್ಕೆ ಬಂದಿಲ್ಲ. ಇದು ಕಾರ್ಯಕರ್ತರ ಪಕ್ಷ. ಹೀಗಾಗಿ ಯಾರೊಬ್ಬರೂ ‘ನನ್ನಿಂದಲೇ ಪಕ್ಷ ಅಧಿಕಾರಕ್ಕೆ ಬಂತು’, ‘ನಾನೇ ಪಕ್ಷ ಕಟ್ಟಿದೆ’ ಎಂದು ಹೇಳಿಕೊಳ್ಳಬಾರದು. ಪಕ್ಷ ಅಂದಮೇಲೆ ಅಲ್ಲಿ ಎಲ್ಲರ ಪಾತ್ರವೂ ಇರುತ್ತದೆ,” ಎಂದು ಖಡಕ್ ಸಂದೇಶ ರವಾನಿಸಿದ್ದರು. ಈ ಹೇಳಿಕೆಯು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ನೀಡಿದ ಎಚ್ಚರಿಕೆ ಎಂದೇ ವಿಶ್ಲೇಷಿಸಲಾಗಿತ್ತು.
ಮಲ್ಲಿಕಾರ್ಜುನ್ ಖರ್ಗೆ ಅವರ ಈ ಹೇಳಿಕೆಗೆ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಖರ್ಗೆ ಅವರು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಹಿರಿಯರು. ಅವರು ಹೇಳಿದ ಮೇಲೆ ಮುಗಿಯಿತು, ಅದೇ ಅಂತಿಮ. ಅವರ ಮಾತಿಗೆ ನಾವೆಲ್ಲರೂ ಬದ್ಧರಾಗಿರಬೇಕು,” ಎಂದು ಹೇಳುವ ಮೂಲಕ, ಪಕ್ಷದ ಗೆಲುವಿನ ಸಂಪೂರ್ಣ ಶ್ರೇಯಸ್ಸು ತಮಗೆ ಸಲ್ಲಬೇಕೆಂಬ ಮನಸ್ಥಿತಿ ಹೊಂದಿರುವ ನಾಯಕರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಇದನ್ನೂ ಓದಿ | ಕುರ್ಚಿ ಕದನಕ್ಕೆ ಸಿಎಂ ‘ಫುಲ್ ಸ್ಟಾಪ್’: “ಎರಡೂವರೆ ವರ್ಷದ ಒಪ್ಪಂದವೇ ಇಲ್ಲ” ಎಂದ ಸಿದ್ದು!
ಮುಂದುವರಿದು ಮಾತನಾಡಿದ ಎಂಬಿಪಿ, “ಚುನಾವಣೆ ಗೆಲ್ಲಲು ಎಲ್ಲರೂ ಶ್ರಮಿಸಿದ್ದಾರೆ. ಸಿದ್ದರಾಮಯ್ಯನವರ ಜನಪ್ರಿಯತೆ, ಡಿ.ಕೆ. ಶಿವಕುಮಾರ್ ಅವರ ಸಂಘಟನೆ ಹಾಗೂ ಮಲ್ಲಿಕಾರ್ಜುನ ಖರ್ಗೆಯವರ ನಾಯಕತ್ವ ಎಲ್ಲವೂ ಸೇರಿದಾಗ ಮಾತ್ರ ಗೆಲುವು ಸಾಧ್ಯವಾಗಿದೆ. ನಾನು ಮಾಡಿದೆ, ನಾನು ಮಾಡಿದೆ ಎಂದು ಯಾರೂ ಹೇಳಿಕೊಳ್ಳುವಂತಿಲ್ಲ,” ಎಂದು ಎಂಬಿಪಿ ಸ್ಪಷ್ಟಪಡಿಸಿದರು.







