ಡಿಸೆಂಬರ್ ತಿಂಗಳ ಕೊರೆವ ಚಳಿಯಲ್ಲಿ. ತಲೆ ಮೇಲಿದ್ದ ಸೂರು ಕಳೆದುಕೊಂಡು, ಕೈಯಲ್ಲಿ ಮಗುವನ್ನು ಎತ್ತಿಕೊಂಡು ಕೋಗಿಲು ಬಡಾವಣೆಯ ಅವಶೇಷಗಳ ಮುಂದೆ ನಿಂತಿದ್ದ ನೂರಾರು ಕುಟುಂಬಗಳ ಕಣ್ಣಲ್ಲಿ ಕಂಡಿದ್ದು ಬರೀ ಕತ್ತಲೆ. ತುತ್ತು ಅನ್ನಕ್ಕಾಗಿ ದುಡಿಯುವ ದಿನಗೂಲಿ ಕಾರ್ಮಿಕರು, ಮನೆ ಕೆಲಸದವರು ಕೂಡಿಟ್ಟ ಅಲ್ಪ ಸ್ವಲ್ಪ ಹಣದಲ್ಲಿ ಕಟ್ಟಿಕೊಂಡಿದ್ದ ಪುಟ್ಟ ಗುಡಿಸಲುಗಳು ಜೆಸಿಬಿಯ ಘರ್ಜನೆಗೆ ನೆಲಸಮವಾಗಿದ್ದವು. ಆದರೆ, ಈಗ ಆ ಕಣ್ಣೀರಿನ ಕಡಲಲ್ಲಿ ತೇಲುತಿದ್ದವರಿಗೆ ಈಗ ಒಂದು ಭರವಸೆಯ ದಡ ಸಿಕ್ಕಿದೆ. ಬೀದಿಪಾಲಾಗಿದ್ದ ಬದುಕುಗಳಿಗೆ ಮಾನವೀಯ ಸ್ಪರ್ಶ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಕೋಗಿಲು ಬಡಾವಣೆಯಲ್ಲಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ನಡೆದಾಗ, ಅದು ಕೇವಲ ಕಾಂಕ್ರೀಟ್ ಅಥವಾ ತಗಡಿನ ಶೀಟುಗಳ ತೆರವು ಆಗಿರಲಿಲ್ಲ, ಬದಲಿಗೆ ನೂರಾರು ಬಡವರ ಕನಸುಗಳ ತೆರವು ಆಗಿತ್ತು. ಡಿಸೆಂಬರ್ 20 ರಂದು ನಡೆದ ಕಾರ್ಯಾಚರಣೆಯಿಂದ ಸುಮಾರು 167 ಕುಟುಂಬಗಳು ದಿಕ್ಕೆಟ್ಟು ಹೋಗಿದ್ದವು. “ನಾವು ಎಲ್ಲಿಗೆ ಹೋಗುವುದು? ನಮ್ಮ ಬಳಿ ಬೇರೆ ದಾರಿ ಇಲ್ಲ,” ಎಂದು ಗೋಳಾಡುತ್ತಿದ್ದ ಜನರ ಕೂಗು ಈಗ ಸರ್ಕಾರದ ಕಿವಿಗೆ ಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರದಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ, ಈ ಬಡ ಜೀವಗಳಿಗೆ ಮರುಜೀವ ನೀಡಿದೆ.
ಶೆಡ್ ಬದಲು ಮನೆ: ಬಡವರ ಪಾಲಿಗೆ ತೆರೆದ ಅದೃಷ್ಟದ ಬಾಗಿಲು
ಸರ್ಕಾರದ ಜಾಗ ಒತ್ತುವರಿ ಮಾಡಿದ್ದು ತಪ್ಪು ನಿಜ. ಆದರೆ, ಹೊಟ್ಟೆಪಾಡಿಗಾಗಿ ನಗರಕ್ಕೆ ಬಂದು ನೆಲೆಸಿರುವ ಬಡವರಿಗೆ ಸೂರು ಕಲ್ಪಿಸುವುದು ಕಲ್ಯಾಣ ರಾಜ್ಯದ ಜವಾಬ್ದಾರಿಯೂ ಹೌದು. ಇದನ್ನರಿತ ಸರ್ಕಾರ, ಕೋಗಿಲು ನಿರಾಶ್ರಿತರಿಗೆ ಬೈಯ್ಯಪ್ಪನಹಳ್ಳಿಯಲ್ಲಿನ ಕೊಳಗೇರಿ ಅಭಿವೃದ್ಧಿ ಮಂಡಳಿ (Slum Board) ನಿರ್ಮಿಸಿರುವ ಸುಸಜ್ಜಿತ ವಸತಿ ಸಮುಚ್ಚಯದಲ್ಲಿ ಮನೆ ನೀಡಲು ಮುಂದಾಗಿದೆ. ಮಳೆ ಬಂದರೆ ಸೋರುವ, ಗಾಳಿ ಬಂದರೆ ಹಾರಿಹೋಗುವ ಭೀತಿಯಲ್ಲಿದ್ದ ಶೆಡ್ಗಳ ಬದಲು, ಈಗ ಬಡವರಿಗೆ ಪಕ್ಕಾ ಕಾಂಕ್ರೀಟ್ ಸೂರು ಸಿಗುವಂತಾಗಿದೆ.
ಇಲ್ಲಿ ಇನ್ನೊಂದು ಸವಾಲಿದೆ. ನಿಜವಾಗಿಯೂ ನಿರ್ಗತಿಕರಾಗಿರುವವರು ಯಾರು ಎಂಬುದು ಮುಖ್ಯ. ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿರುವಂತೆ, “ಯಾವುದೇ ಪ್ರಭಾವಿಗಳಿಗೆ ಅಥವಾ ಈಗಾಗಲೇ ಸ್ವಂತ ಮನೆ ಹೊಂದಿರುವವರಿಗೆ ಈ ಸೌಲಭ್ಯವಿಲ್ಲ.” ಅಧಿಕಾರಿಗಳು ನಡೆಸುವ ಸಮೀಕ್ಷೆಯಲ್ಲಿ ಯಾರು ನೈಜ ಬಡವರು ಎಂದು ಸಾಬೀತಾಗುತ್ತದೆಯೋ, ಅವರಿಗೆ ಮಾತ್ರ ಬೈಯ್ಯಪ್ಪನಹಳ್ಳಿಯ ಮನೆಯ ಕೀ (Key) ಸಿಗಲಿದೆ.
ಇದನ್ನೂ ಓದಿ | ದೇಶದ ಜಿಡಿಪಿ ಜಿಗಿತ, ಬಡವರ ಬದುಕು ಕುಸಿತ: ‘ಬೆಳೆಯುತ್ತಿರುವ ಭಾರತ’ದ ಕಹಿ ಸತ್ಯ!
ಜನರ ನೆಮ್ಮದಿಯ ನಿಟ್ಟುಸಿರು:
“ನೋಟಿಸ್ ಕೊಟ್ಟಿದ್ರು ಅಂತ ಅಧಿಕಾರಿಗಳು ಹೇಳ್ತಾರೆ, ಆದ್ರೆ ನಮಗೆ ಓದು ಬರಹ ಬರಲ್ಲ ಸ್ವಾಮಿ, ನಾವು ಎಲ್ಲಿಗೆ ಹೋಗೋದು ಅಂತ ಗೊತ್ತಿರಲಿಲ್ಲ. ಈಗ ಸರ್ಕಾರ ದೊಡ್ಡ ಮನಸ್ಸು ಮಾಡಿ ಬೈಯ್ಯಪ್ಪನಹಳ್ಳಿಯಲ್ಲಿ ಮನೆ ಕೊಡ್ತೀವಿ ಅಂದಿರೋದು ನಮ್ಮ ಪಾಲಿಗೆ ದೇವ್ರು ಕಣ್ಬಿಟ್ಟಂಗೆ,” ಎಂಬುದು ಅಲ್ಲಿನ ಸಂತ್ರಸ್ತರೊಬ್ಬರ ಮಾತು.
ಒಟ್ಟಿನಲ್ಲಿ, ಕಾನೂನಿನ ಪ್ರಕಾರ ಒತ್ತುವರಿ ತೆರವು ಅನಿವಾರ್ಯವಾಗಿದ್ದರೂ, ಮಾನವೀಯತೆಯ ದೃಷ್ಟಿಯಿಂದ ಸರ್ಕಾರ ತೆಗೆದುಕೊಂಡಿರುವ ಈ ‘ಪುನರ್ವಸತಿ’ ನಿರ್ಧಾರ, ಆತಂಕದಲ್ಲಿದ್ದ ನೂರಾರು ಕುಟುಂಬಗಳಿಗೆ ಹೊಸ ಭರವಸೆ ಮೂಡಿಸಿದೆ.







