“ಬಿಜೆಪಿ, ವಿಶ್ವ ಹಿಂದೂ ಪರಿಷತ್ (ವಿಹೆಚ್ಪಿ) ಅಥವಾ ವಿದ್ಯಾಭಾರತಿಯಂತಹ ಸಂಸ್ಥೆಗಳು ಆರ್ಎಸ್ಎಸ್ನ ನೇರ ನಿಯಂತ್ರಣದಲ್ಲಿಲ್ಲ. ಅವುಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಸಂಘವು ಯಾವುದೇ ‘ರಿಮೋಟ್ ಕಂಟ್ರೋಲ್’ ಮೂಲಕ ಇವುಗಳನ್ನು ನಡೆಸುವುದಿಲ್ಲ,” ಎಂದು ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಪ್ರತಿಪಾದಿಸಿದ್ದಾರೆ.
ಸಂಘದ ಕಾರ್ಯವೈಖರಿಯನ್ನು ವಿವರಿಸಿದ ಭಾಗವತ್, ಆರ್ಎಸ್ಎಸ್ ಅನ್ನು ಅದರ ಅಂಗಸಂಸ್ಥೆಗಳ ಕನ್ನಡಕದ ಮೂಲಕ ನೋಡುವುದು ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ. “ಯಾರು ಆರ್ಎಸ್ಎಸ್ ಅನ್ನು ಬಿಜೆಪಿ ಅಥವಾ ವಿಹೆಚ್ಪಿ ಮೂಲಕ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೋ, ಅವರು ದಾರಿ ತಪ್ಪುತ್ತಾರೆ. ಸಂಘವು ಮನುಷ್ಯ ನಿರ್ಮಾಣದ (Man-making) ಕಾರ್ಯದಲ್ಲಿ ತೊಡಗಿದೆ. ಇಲ್ಲಿಂದ ಸಂಸ್ಕಾರ ಪಡೆದ ಸ್ವಯಂಸೇವಕರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ. ಅವರು ರಾಜಕೀಯಕ್ಕೆ ಹೋದರೆ ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿದ್ದರೆ ಅಲ್ಲಿನ ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡುತ್ತಾರೆ,” ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ಇತರ ಸಂಘಟನೆಗಳ ನಡುವಿನ ಸಂಬಂಧದ ಕುರಿತು ದಶಕಗಳಿಂದ ಇರುವ ಊಹಾಪೋಹಗಳಿಗೆ ಮೋಹನ್ ಭಾಗವತ್ ಸ್ಪಷ್ಟನೆ ನೀಡಿದ್ದಾರೆ.
ನೇರ ಹಸ್ತಕ್ಷೇಪ ಇಲ್ಲ
ರಾಜಕೀಯ ವಿರೋಧಿಗಳು ಮತ್ತು ಕೆಲವು ವಿಶ್ಲೇಷಕರು ಆಗಾಗ್ಗೆ ‘ಬಿಜೆಪಿ ಸರ್ಕಾರದ ಹಿಂದೆ ಆರ್ಎಸ್ಎಸ್ನ ರಿಮೋಟ್ ಕಂಟ್ರೋಲ್ ಇದೆ’ ಎಂದು ಆರೋಪಿಸುವುದು ಉಂಟು. ಈ ಆರೋಪವನ್ನು ತಳ್ಳಿಹಾಕಿರುವ ಭಾಗವತ್, “ನಾವು ಕೇವಲ ಸೈದ್ಧಾಂತಿಕ ಮಾರ್ಗದರ್ಶನ ನೀಡುತ್ತೇವೆಯೇ ಹೊರತು, ದೈನಂದಿನ ಆಡಳಿತದಲ್ಲಿ ಅಥವಾ ಆಯಾ ಸಂಘಟನೆಗಳ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಪ್ರತಿಯೊಂದು ಸಂಘಟನೆಗೂ ಅದರದ್ದೇ ಆದ ಸಿದ್ಧಾಂತವಿದೆ, ಕಾರ್ಯಕರ್ತರಿದ್ದಾರೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಮಿತಿಗಳಿವೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ | “ಬಡವರು ಸತ್ತಾಗೆಲ್ಲ ಮೋದಿ ಮೌನವಾಗಿರ್ತಾರೆ”: ರಾಹುಲ್ ಗಾಂಧಿ ಕಿಡಿ
ವಿದ್ಯಾಭಾರತಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದರೆ, ವಿಹೆಚ್ಪಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತದೆ. ಬಿಜೆಪಿ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿದೆ. ಈ ಪ್ರತಿಯೊಂದು ಕ್ಷೇತ್ರಕ್ಕೂ ಅದರದ್ದೇ ಆದ ಸವಾಲುಗಳಿರುತ್ತವೆ. ಆರ್ಎಸ್ಎಸ್ನ ಪ್ರಧಾನ ಕಚೇರಿಯಿಂದ ಈ ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ ಮತ್ತು ಅದು ಸಂಘದ ಉದ್ದೇಶವೂ ಅಲ್ಲ. ಸಂಘದ ಕೆಲಸ ವ್ಯಕ್ತಿ ನಿರ್ಮಾಣ ಮಾಡುವುದು ಮಾತ್ರ. ಒಮ್ಮೆ ವ್ಯಕ್ತಿ ನಿರ್ಮಾಣವಾದರೆ, ಆತ ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ರಾಷ್ಟ್ರಹಿತಕ್ಕಾಗಿ ಸ್ವತಂತ್ರವಾಗಿ ಕೆಲಸ ಮಾಡುತ್ತಾನೆ ಎಂಬುದು ಸಂಘದ ತತ್ವ ಎಂದು ಭಾಗವತ್ ವಿಶ್ಲೇಷಿಸಿದ್ದಾರೆ.







