ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನ ವಾರ್ತಾಸೌಧದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿತವಾದ ಪತ್ರಿಕಾ ದಿನಾಚರಣೆ-2025 ಮತ್ತು “ನಿಜ ಸುದ್ದಿಗಾಗಿ ಸಮರ” ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಮತ್ತು ಮಾಧ್ಯಮ ಸಂಜೀವಿನಿ ಆರೋಗ್ಯ ಯೋಜನೆಯನ್ನು ಚಾಲನೆಗೊಳಿಸಿ, ಸತ್ಯಾಸತ್ಯತೆಯ ಹೋರಾಟದಲ್ಲಿ ಮಾಧ್ಯಮಗಳ ಜವಾಬ್ದಾರಿಯನ್ನು ಒತ್ತಿ ಹೇಳಿದರು.
“ನಿಜ ಸುದ್ದಿಗಾಗಿ ಹೋರಾಟದ ಸಂದರ್ಭ ಬಂದಿದೆ ಎಂದರೆ, ಸುಳ್ಳು ಸುದ್ದಿಗಳು ವ್ಯಾಪಕವಾಗಿವೆ ಎಂದೇ ಅರ್ಥ,” . ಊಹಾಪೋಹಗಳ ಆಧಾರದ ಪತ್ರಿಕೋದ್ಯಮವು ಸಮಾಜಕ್ಕೆ ಮತ್ತು ಪತ್ರಿಕಾ ಕ್ಷೇತ್ರಕ್ಕೆ ಅಪಾಯಕಾರಿ ಎಂದು ಖಾರವಾಗಿ ಟೀಕಿಸಿದ ಸಿಎಂ, “ನನ್ನ ಕಾರಿನ ಮೇಲೆ ಕಾಗೆ ಕೂತಿದ್ದನ್ನು ಚರ್ಚಿಸಿ ಮೂಢನಂಬಿಕೆಯನ್ನು ಬಿತ್ತುವುದು ಪತ್ರಿಕೋದ್ಯಮವೇ?” ಎಂದು ಕಿಡಿಕಾರಿದರು. ಮಾಧ್ಯಮಗಳು ಜನರನ್ನು ಮೌಡ್ಯಕ್ಕೆ ತಳ್ಳುವ ಕೆಲಸ ಮಾಡಬಾರದು ಎಂದರು.
ಸಿದ್ದರಾಮಯ್ಯ ಅವರು ಮಾಧ್ಯಮಗಳ ಸ್ವಾತಂತ್ರ್ಯದಲ್ಲಿ ತಮ್ಮ ದೃಢ ನಂಬಿಕೆಯನ್ನು ವ್ಯಕ್ತಪಡಿಸಿದರು. “ಯಾವ ಚಾನೆಲ್ಗಳು ನನ್ನ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿದರೂ, ನಾನು ಯಾರಿಗೂ ಫೋನ್ ಮಾಡಿ ಒತ್ತಡ ಹೇರಿಲ್ಲ,” ಎಂದು ಹೇಳಿದ ಅವರು, ಜವಾಹರಲಾಲ್ ನೆಹರೂ ಅವರ ಮಾಧ್ಯಮ ಸ್ವಾತಂತ್ರ್ಯದ ಆದರ್ಶವನ್ನು ಸ್ಮರಿಸಿದರು. ಮಾಧ್ಯಮಗಳು ನಿರ್ಭೀತವಾಗಿ, ಸತ್ಯವನ್ನು ಜನರಿಗೆ ತಲುಪಿಸಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಮತ್ತು ಮಾಧ್ಯಮ ಸಂಜೀವಿನಿ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲಾಯಿತು. “ಇದನ್ನು ನಮ್ಮ ಪರವಾಗಿ ಬರೆಯಲಿ ಎಂದು ಜಾರಿಗೊಳಿಸಿಲ್ಲ; ಸತ್ಯವನ್ನು, ಜನರ ಪರವಾಗಿ, ಪ್ರಜಾಪ್ರಭುತ್ವದ ಪರವಾಗಿ ಬರೆಯಿರಿ,” ಎಂದು ಸಿಎಂ ಸ್ಪಷ್ಟಪಡಿಸಿದರು. ಈ ಯೋಜನೆಗಳು ಪತ್ರಕರ್ತರ ದೈನಂದಿನ ಕೆಲಸದಲ್ಲಿ ಸಹಾಯಕವಾಗಲಿದ್ದು, ಗ್ರಾಮೀಣ ಪತ್ರಕರ್ತರಿಗೆ ವಿಶೇಷವಾಗಿ ಅನುಕೂಲಕರವಾಗಲಿವೆ.
ಸ್ವಾತಂತ್ರ್ಯಪೂರ್ವದಲ್ಲಿ ಪತ್ರಿಕೆಗಳು ಜನರನ್ನು ಎಚ್ಚರಿಸುವ, ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡುವ ಕೆಲಸ ಮಾಡಿದ್ದವು . “ಸಂವಿಧಾನದ ಮೌಲ್ಯಗಳನ್ನು ಮರೆಮಾಚುವ ಕೆಲಸವಾಗಬಾರದು. ಜಾತಿ-ವರ್ಗ ರಹಿತ ಸಮಾಜವನ್ನು ಸೃಷ್ಟಿಸುವ ಸಂವಿಧಾನದ ಆದರ್ಶವನ್ನು ಮಾಧ್ಯಮಗಳು ಎತ್ತಿಹಿಡಿಯಬೇಕು,”. ದ್ವೇಷ ಮತ್ತು ಪ್ರೀತಿರಹಿತ ಸಮಾಜವನ್ನು ಸೃಷ್ಟಿಸುವ ಪ್ರಯತ್ನಗಳಿಗೆ ಮಾಧ್ಯಮಗಳು ಬೆಂಬಲ ನೀಡಬಾರದು ಎಂದರು.
“ನನ್ನ ಮಾತುಗಳನ್ನು ಕೇವಲ ರಾಜಕೀಯ ಚೌಕಟ್ಟಿನಲ್ಲಿ ನೋಡದೆ, ಸಮಾಜಮುಖಿಯಾಗಿ ಗಮನಿಸಬೇಕು,” ಎಂದು ಸಿಎಂ ವಿನಂತಿಸಿದರು. ಸುಳ್ಳು ಸುದ್ದಿಗಳ ವಿರುದ್ಧ ಕಠಿಣ ಕ್ರಮದ ಕುರಿತು ಈ ಹಿಂದೆಯೇ ಎಚ್ಚರಿಕೆ ನೀಡಿದ್ದ ಅವರು, ಯಾವುದೇ ಪಕ್ಷದವರಾದರೂ ಸುಳ್ಳು ಸುದ್ದಿಗಳನ್ನು ಹರಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.







