ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಆರ್ಎಂಸಿ ಯಾರ್ಡ್ ಮಹಿಳೆಯ ಸಾಮೂಹಿಕ ಅತ್ಯಾಚಾರ ಆರೋಪ ಪ್ರಕರಣದಲ್ಲಿ ವಿಶೇಷ ತನಿಖಾ ದಳ (ಎಸ್ಐಟಿ) ಸಾಕ್ಷ್ಯಾಧಾರಗಳ ಕೊರತೆಯಿಂದ ‘ಬಿ’ ರಿಪೋರ್ಟ್ ಸಲ್ಲಿಸಿದೆ. ಈ ಮೂಲಕ ಮುನಿರತ್ನ ಅವರಿಗೆ ಕಾನೂನು ರಿಲೀಫ್ ಸಿಕ್ಕಿದೆ. ರಾಜರಾಜೇಶ್ವರಿನಗರ ಶಾಸಕರಾದ ಮುನಿರತ್ನ, ಆರೋಪಗಳು ಸುಳ್ಳು ಎಂದು ಪ್ರಕರಣ ರದ್ದುಗೊಳಿಸುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.ಹೈಕೋರ್ಟ್ಗೆ ಸಲ್ಲಿಕೆಯಾದ ಎಸ್ಐಟಿಯ ‘ಬಿ’ ರಿಪೋರ್ಟ್ನಲ್ಲಿ ಆರೋಪಗಳನ್ನು ಸಾಬೀತುಪಡಿಸಲು ಸಾಕ್ಷ್ಯಗಳಿಲ್ಲ ಎಂದು ತಿಳಿಸಲಾಗಿದೆ.
2023ರ ಜೂನ್ 11ರಂದು ಮುನಿರತ್ನ ಅವರ ಕಚೇರಿಯಲ್ಲಿ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಮಹಿಳೆಯೊಬ್ಬರು, ಬಿಜೆಪಿ ಕಾರ್ಯಕರ್ತೆ ಎಂದು ಹೇಳಿಕೊಂಡು, ಮುನಿರತ್ನ ಮತ್ತು ಅವರ ಸಹಚರರಾದ ವಸಂತ, ಚನ್ನಕೇಶವ, ಮತ್ತು ಅಪರಿಚಿತ ವ್ಯಕ್ತಿಯೊಬ್ಬನ ವಿರುದ್ಧ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಎಸ್ಐಟಿ ತನಿಖೆಯಲ್ಲಿ ಮಹಿಳೆಯ ಹೇಳಿಕೆಯಲ್ಲಿ ಅಸಂಗತತೆಗಳು ಕಂಡುಬಂದಿವೆ. ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ದೇಹದಲ್ಲಿ ನಿದ್ರೆ ಮಾತ್ರೆಯ ಅಂಶಗಳಿಲ್ಲದಿರುವುದು ಮತ್ತು ಆರೋಪಕ್ಕೆ ಬೆಂಬಲವಾಗಿ ಯಾವುದೇ ದೃಢ ಸಾಕ್ಷ್ಯ ಸಿಗದಿರುವುದು ಗಮನಾರ್ಹ.
ಇದನ್ನೂ ಓದಿ | ಕೆ.ಎಸ್. ಈಶ್ವರಪ್ಪ ಧರ್ಮ ರಕ್ಷಾ ಯಾತ್ರೆ: ಎನ್ಐಎ ತನಿಖೆಗೆ ಒತ್ತಾಯ
ತನಿಖೆಯ ವೇಳೆ, ದೂರುದಾರ ಮಹಿಳೆ ದೂರು ದಾಖಲಿಸುವ ಮೊದಲು ಎಂಟು ಬಾರಿ ರಿಹರ್ಸಲ್ ಮಾಡಿದ್ದಾಳೆ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಆಧಾರದ ಮೇಲೆ, ಎಸ್ಐಟಿ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿದ್ದು, ‘ಬಿ’ ರಿಪೋರ್ಟ್ ಸಲ್ಲಿಸಿತು. ಹೈಕೋರ್ಟ್ ಮುನಿರತ್ನ ಅವರ ಬಂಧನ ತಡೆಯುವ ಮಧ್ಯಂತರ ಆದೇಶವನ್ನು ವಿಸ್ತರಿಸಿದೆ.
ಈ ತೀರ್ಪು ಕರ್ನಾಟಕ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ನಾಯಕರು ಇದನ್ನು ರಾಜಕೀಯ ಷಡ್ಯಂತ್ರ ಎಂದಿದ್ದರೆ, ಕಾಂಗ್ರೆಸ್ ತೀರ್ಪಿನ ಕಾನೂನು ಆಧಾರವನ್ನು ಪ್ರಶ್ನಿಸಿದೆ. ಮುನಿರತ್ನ, “ಸತ್ಯ ಗೆದ್ದಿದೆ,” ಎಂದು ಹೇಳಿದ್ದಾರೆ.







