ರಾಜ್ಯ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆಯ ಚರ್ಚೆ ತಲೆ ಎತ್ತಿರುವಾಗಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರ ತಂಡ ದೆಹಲಿಗೆ ಹಾರಿ, ಹೈಕಮಾಂಡ್ಗೆ ಶಕ್ತಿ ಪ್ರದರ್ಶನ ಮಾಡಲು ಸಿದ್ಧರಾಗಿದ್ದಾರೆ.
ನವೆಂಬರ್ 20ರ ಗುರುವಾರ ಇಂದು 8 ಜನರ ತಂಡ ದೆಹಲಿಗೆ ತೆರಳಿದ್ದು, ನಾಳೆ (ನವೆಂಬರ್ 21) ಮತ್ತೊಂದು 7 ಜನರ ತಂಡ ದೆಹಲಿಗೆ ಹೊರಡಲಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಈ ಚಲನೆಯು ‘ನವೆಂಬರ್ ಕ್ರಾಂತಿ’ ಎಂದು ಕರೆಯಲ್ಪಡುವ ನಾಯಕತ್ವ ಬದಲಾವಣೆ ಚರ್ಚೆಗೆ ಹೊಸ ತಿರುವು ನೀಡಿದೆ.
ಸಚಿವ ಚೆಲುವರಾಯಸ್ವಾಮಿ, ಇಕ್ಬಾಲ್ ಹುಸೇನ್, ಮಾಗಡಿ ಬಾಲಕೃಷ್ಣ, ಗುಬ್ಬಿ ಶ್ರೀನಿವಾಸ, ಶಾಸಕ ರವಿ ಗಣಿಗ, ಉದಯ್ ಗೌಡ ಸೇರಿದಂತೆ ಶಿವಕುಮಾರ್ ಬೆಂಬಲಿಗರು ಇಂದು ದೆಹಲಿಗೆ ಹೊರಟಿದ್ದಾರೆ. ಇವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಭೇಟಿಗೆ ಸಮಯ ಕೇಳಿದ್ದಾರೆ. ಮೂಲಗಳ ಪ್ರಕಾರ, ಇದು ಸರ್ಕಾರದ ಅವಧಿಯ ನಡುವೆಯೇ ಸಿಎಂ ಸ್ಥಾನ ಬದಲಾವಣೆಗೆ ಒತ್ತಡ ಹೆಚ್ಚಿಸುವ ಉದ್ದೇಶವಾಗಿದೆ. ಶಿವಕುಮಾರ್ ಅವರ ಬೆಂಬಲಿಗರು “ಸಿಎಂ ಸಿದ್ದರಾಮಯ್ಯ ಅವರ ಅವಧಿ 2.5 ವರ್ಷಗಳು ಮಾತ್ರ, ಈಗ ನಾಯಕತ್ವ ಬದಲಾವಣೆಯ ಸಮಯ” ಎಂದು ಹೇಳುತ್ತಿದ್ದಾರೆ.
ಈ ಚರ್ಚೆಯ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರ ತಮ್ಮ ಡಿ.ಕೆ. ಸುರೇಶ್ ಸಹ ದೆಹಲಿಯಲ್ಲೇ ಉಳಿದು ಹೈಕಮಾಂಡ್ನೊಂದಿಗೆ ಚರ್ಚೆ ನಡೆಸಿದ್ದಾರೆ. ನಿನ್ನೆಯೇ ಸಿಎಂ ಸಿದ್ದರಾಮಯ್ಯ ಅವರು ಹಾವನೂರ್ ವರದಿ ಸುವರ್ಣ ಮಹೋತ್ಸವದಲ್ಲಿ 17ನೇ ಬಜೆಟ್ ಮಂಡಿಸುವುದಾಗಿ ಹೇಳಿ ನಾಯಕತ್ವ ಬದಲಾವಣೆ ಚರ್ಚೆಯನ್ನು ತಳ್ಳಿ ಹಾಕಿದ್ದರು. ಆದರೂ, ಶಿವಕುಮಾರ್ ತಂಡದ ದೆಹಲಿಗೆ ದಾವಿಸಿರುವುದು ಚರ್ಚೆಯನ್ನು ಮತ್ತೊಮ್ಮೆ ಉಂಟುಮಾಡಿದೆ. ಕಾಂಗ್ರೆಸ್ ಹೈಕಮಾಂಡ್ ಸಚಿವಸಂಪುಟ ಮರುಸಂಯೋಜನೆಯೊಂದಿಗೆ ನಾಯಕತ್ವ ಬದಲಾವಣೆಯನ್ನು ಒಟ್ಟಿಗೆ ನಿರ್ಧರಿಸಬಹುದು ಎಂದು ಮೂಲಗಳು ಹೇಳುತ್ತಿವೆ.
ಇದನ್ನೂ ಓದಿ | 17ನೇ ಬಜೆಟ್ ನಾನೇ ಮಂಡಿಸುತ್ತೇನೆ: ಸಿದ್ದರಾಮಯ್ಯ ಘೋಷಣೆ!
2023ರ ಮೇ ಚುನಾವಣೆಯ ನಂತರ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವಿನ ಒಪ್ಪಂದದಂತೆ ಸಿಎಂ ಸ್ಥಾನ 2.5 ವರ್ಷಗಳ ನಂತರ ಬದಲಾವಣೆಯಾಗಬೇಕು ಎಂಬ ಚರ್ಚೆಯಿದೆ. ಆದರೆ ಸಿದ್ದರಾಮಯ್ಯ ಅವರು “ಹೈಕಮಾಂಡ್ ನಿರ್ಧರಿಸುತ್ತದೆ” ಎಂದು ಹೇಳಿ, ಪೂರ್ಣ ಅವಧಿ ಮುಂದುವರಿಸುವ ಇಚ್ಛೆ ತೋರಿಸಿದ್ದಾರೆ. ಶಿವಕುಮಾರ್ ಅವರ ಬೆಂಬಲಿಗರು ಈಗ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಭೇಟಿ ಕೋರಿದ್ದಾರೆ. ಸಚಿವ ಪರಮೇಶ್ವರ ಅವರು “ಸಚಿವಸಂಪುಟ ಮರುಸಂಯೋಜನೆ ಆಗಬಹುದು, ಆದರೆ ನಾಯಕತ್ವ ಬದಲಾವಣೆ ಇಲ್ಲ” ಎಂದು ಹೇಳಿದ್ದಾರೆ. ಶಿವಕುಮಾರ್ ಅವರೂ “ಪಕ್ಷದ ನಿರ್ಧಾರಕ್ಕೆ ಬಿಟ್ಟುಬಿಡಿ” ಎಂದು ಹೇಳಿದ್ದಾರೆ.







