ಗ್ರಾಮೀಣ ಭಾಗದಲ್ಲಿ ಇಂದಿಗೂ ಜೀವಂತವಾಗಿರುವ ಅಮಾನವೀಯ ಪದ್ಧತಿಯಾದ ‘ಸಾಮಾಜಿಕ ಬಹಿಷ್ಕಾರ’ಕ್ಕೆ ಅಂತ್ಯ ಹಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಜಾತಿ ಪಂಚಾಯ್ತಿ ಅಥವಾ ಕಟ್ಟೆ ಪಂಚಾಯ್ತಿಗಳ ಮೂಲಕ ವ್ಯಕ್ತಿ ಅಥವಾ ಕುಟುಂಬಗಳನ್ನು ಊರಿನಿಂದ ಹೊರಗಿಡುವುದನ್ನು ನಿಷೇಧಿಸುವ ಐತಿಹಾಸಿಕ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಮಸೂದೆ-2025’ ಅನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಈ ಮಸೂದೆಯನ್ನು ಮಂಡಿಸಿದ್ದು, ಇದು ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಏನಿದು ಹೊಸ ಕಾನೂನು?
ಯಾವುದೇ ವ್ಯಕ್ತಿ ಅಥವಾ ಸಮೂಹವು ಜಾತಿ, ಧರ್ಮ, ಸಮುದಾಯ, ಸಂಪ್ರದಾಯ ಅಥವಾ ಪದ್ಧತಿಯ ಹೆಸರಿನಲ್ಲಿ ಇನ್ನೊಬ್ಬ ವ್ಯಕ್ತಿ ಅಥವಾ ಕುಟುಂಬದ ಮೇಲೆ ಸಾಮಾಜಿಕ ಬಹಿಷ್ಕಾರ ಹೇರುವುದನ್ನು ಈ ಕಾನೂನು ಸಂಪೂರ್ಣವಾಗಿ ನಿಷೇಧಿಸುತ್ತದೆ. ಇಂತಹ ಕೃತ್ಯಕ್ಕೆ ಪ್ರಚೋದನೆ ನೀಡುವುದು, ಪಂಚಾಯ್ತಿ ಸೇರಿಸಿ ತೀರ್ಪು ನೀಡುವುದು ಕೂಡ ಅಪರಾಧವಾಗಿರುತ್ತದೆ.
ಈ ಮಸೂದೆಯ ಅನ್ವಯ, ಸಾಮಾಜಿಕ ಬಹಿಷ್ಕಾರ ಹೇರುವುದು ಸಾಬೀತಾದರೆ ತಪ್ಪಿತಸ್ಥರಿಗೆ ಕನಿಷ್ಠ ಶಿಕ್ಷೆ ಕಾದಿದೆ.
ಜೈಲು ಶಿಕ್ಷೆ ಮತ್ತು ದಂಡ: ಬಹಿಷ್ಕಾರ ಹಾಕಿದವರಿಗೆ 1 ವರ್ಷದಿಂದ 3 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಅಪರಾಧಿಗಳಿಗೆ 50,000 ರೂ. ನಿಂದ 1 ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ. ಅಲ್ಲದೆ, ಸಂತ್ರಸ್ತರಿಗೆ ಪರಿಹಾರ ನೀಡುವ ವ್ಯವಸ್ಥೆಯನ್ನೂ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.
ಯಾವುದೆಲ್ಲಾ ಅಪರಾಧ?
ಮಸೂದೆಯಲ್ಲಿ ಸುಮಾರು 20 ರೀತಿಯ ವರ್ತನೆಗಳನ್ನು ‘ಸಾಮಾಜಿಕ ಬಹಿಷ್ಕಾರ’ ಎಂದು ಗುರುತಿಸಲಾಗಿದೆ. ಅವುಗಳಲ್ಲಿ ಪ್ರಮುಖವಾದವು ಹೀಗಿವೆ:
ಮೂಲಭೂತ ಸೌಕರ್ಯ ನಿರಾಕರಣೆ: ವ್ಯಕ್ತಿ ಅಥವಾ ಕುಟುಂಬಕ್ಕೆ ಊರಿನ ಸಾರ್ವಜನಿಕ ಕೆರೆ, ಬಾವಿ, ನಲ್ಲಿ ಅಥವಾ ಕೊಳವೆ ಬಾವಿಗಳಿಂದ ನೀರು ಪಡೆಯುವುದನ್ನು ತಡೆಯುವುದು.
ಧಾರ್ಮಿಕ ಹಕ್ಕುಗಳ ಹತ್ತಿಕ್ಕುವಿಕೆ: ದೇವಸ್ಥಾನ ಪ್ರವೇಶ ನಿರಾಕರಿಸುವುದು, ಜಾತ್ರೆ ಅಥವಾ ಉತ್ಸವಗಳಲ್ಲಿ ಭಾಗವಹಿಸಲು, ಪೂಜೆ ಸಲ್ಲಿಸಲು ಅಥವಾ ಮೆರವಣಿಗೆ ನಡೆಸಲು ಅಡ್ಡಿಪಡಿಸುವುದು.
ಅಂತ್ಯಸಂಸ್ಕಾರಕ್ಕೆ ತಡೆ: ಯಾರಾದರೂ ಮೃತಪಟ್ಟಾಗ ಶವ ಸಂಸ್ಕಾರಕ್ಕೆ ಜಾಗ ನೀಡದಿರುವುದು ಅಥವಾ ರುದ್ರಭೂಮಿ ಪ್ರವೇಶ ತಡೆಯುವುದು.
ಸಾಮಾಜಿಕ ಸಂಪರ್ಕ ಕಡಿತ: ಯಾವುದೇ ವ್ಯಕ್ತಿಯ ಜೊತೆ ಊರಿನವರು ಮಾತನಾಡದಂತೆ, ಊಟ ಮಾಡದಂತೆ ಅಥವಾ ಅವರ ಮನೆಗೆ ಹೋಗದಂತೆ ಕಟ್ಟಪ್ಪಣೆ ಮಾಡುವುದು.
ಸೇವೆಯ ನಿರಾಕರಣೆ: ದಿನಸಿ ಅಂಗಡಿಗಳಲ್ಲಿ ಸಾಮಾನು ನೀಡದಿರುವುದು, ಕ್ಷೌರಿಕರು ಕ್ಷೌರ ಮಾಡದಿರುವುದು, ವೈದ್ಯಕೀಯ ಸೇವೆ ಅಥವಾ ಕೂಲಿ ಕೆಲಸ ನೀಡದಿರುವುದು.
ವಿವಾಹ ಮತ್ತು ಹಬ್ಬ: ಮದುವೆ ಸಮಾರಂಭಗಳಲ್ಲಿ ಭಾಗವಹಿಸದಂತೆ ತಡೆಯುವುದು ಅಥವಾ ಅಂತರ್ಜಾತಿ ವಿವಾಹವಾದವರಿಗೆ ಊರಿನೊಳಗೆ ಪ್ರವೇಶ ನೀಡದಿರುವುದು.
ಬಲವಂತದ ಆಚರಣೆ: ಅನಿಷ್ಟ ಪದ್ಧತಿಗಳನ್ನು ಪಾಲಿಸುವಂತೆ ಒತ್ತಾಯಿಸುವುದು, ತಲೆ ಬೋಳಿಸುವುದು ಅಥವಾ ಮೆರವಣಿಗೆಯಂತಹ ಅವಮಾನಕರ ಕೃತ್ಯ ಎಸಗುವುದು.
ಪೊಲೀಸರಿಗೆ ಹೆಚ್ಚಿನ ಅಧಿಕಾರ
ಈ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳು ಜಾಮೀನು ರಹಿತ (Non-bailable) ಅಪರಾಧಗಳಾಗಿರುವ ಸಾಧ್ಯತೆಯಿದೆ. ಪೊಲೀಸರು ದೂರು ಬಂದ ತಕ್ಷಣ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಲು ಈ ಮಸೂದೆ ಬಲ ನೀಡಲಿದೆ.
ಇದನ್ನೂ ಓದಿ | ‘ಸಾಮಾಜಿಕ ಬಹಿಷ್ಕಾರ’ಕ್ಕೆ ಸರ್ಕಾರದ ಅಂಕುಶ: ಆದರೆ ದಲಿತರ ಪಾಲಿಗೆ ಈ ನಾಡು ಇಂದಿಗೂ ‘ಶಾಂತಿಯ ತೋಟ’ವಲ್ಲ!
ಮಸೂದೆಯ ಉದ್ದೇಶ
“ಸಂವಿಧಾನದ ಆಶಯದಂತೆ ಪ್ರತಿಯೊಬ್ಬ ಪ್ರಜೆಗೂ ಘನತೆಯಿಂದ ಬದುಕುವ ಹಕ್ಕಿದೆ. ಆದರೆ ರಾಜ್ಯದ ಹಲವು ಕಡೆ ಜಾತಿ ಪಂಚಾಯ್ತಿಗಳು ಸಮಾನಾಂತರ ನ್ಯಾಯಾಲಯಗಳಂತೆ ವರ್ತಿಸಿ ಬಡವರನ್ನು ಮತ್ತು ದಲಿತರನ್ನು ಬಹಿಷ್ಕರಿಸುವ ಅಮಾನವೀಯ ಘಟನೆಗಳು ನಡೆಯುತ್ತಿವೆ. ಇದನ್ನು ತಡೆಗಟ್ಟಲು ಈ ಕಾಯ್ದೆ ಅನಿವಾರ್ಯ,” ಎಂದು ಮಸೂದೆಯ ಉದ್ದೇಶದಲ್ಲಿ ವಿವರಿಸಲಾಗಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಈ ಕಾಯ್ದೆ ಜಾರಿಯಾದರೆ ದಲಿತ ಮತ್ತು ಹಿಂದುಳಿದ ವರ್ಗಗಳ ರಕ್ಷಣೆಗೆ ದೊಡ್ಡ ಅಸ್ತ್ರವಾಗಲಿದೆ. ಆದರೆ ಈ ಕಾಯ್ದೆಯ ದುರುಪಯೋಗ ಪಡಿಸಿಕೊಳ್ಳದಂತೆ ಪೋಲಿಸ್ರು ನೀಗಾವಹಿಸಬೇಕು.







