ಬೆಳಗಾವಿ, ಮಂಡ್ಯ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ಕಳೆದ ಎಂಟು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಪ್ರತಿಭಟನೆಯ ತೀವ್ರ ಹೆಚ್ಚಾಗಿದ್ದು ರೈತರು ರಸ್ತೆ ತಡೆದು ಪ್ರತಿಭಟಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಫ್ಆರ್ಪಿ (FRP) ₹3,550/ಟನ್ ಆದರೂ, ಕಟಾವು ಮತ್ತು ಸಾಗಾಣಿಕೆ ವೆಚ್ಚ ₹800–900 ಕಡಿತಗೊಂಡರೆ ರೈತರ ಕೈಸೇರುವುದು ಕೇವಲ ₹2,600–3,000 ಮಾತ್ರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೋರಾಟಕ್ಕೆ ಮುಖ್ಯ ಕಾರಣವೆಂದರೆ ಉತ್ಪಾದನಾ ವೆಚ್ಚದಲ್ಲಿ ಗಣನೀಯ ಏರಿಕೆ ಮತ್ತು ಕೇಂದ್ರದ ಎಫ್ಆರ್ಪಿ ತುಂಬಾ ಕಡಿಮೆಯಾಗಿರುವುದು.
ಮೇಲುಕೋಟೆ ವಿಧಾನಸಭಾ ಕ್ಷೇತ್ರ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯನವರು ಬೆಳಗಾವಿ ರೈತರ ಪ್ರತಿಭಟನೆಗೆ ಬೆಂಬಲ ನೀಡಿ ಮಾತನಾಡಿದ್ದು. “ಸತತವಾಗಿ 8 ದಿನಗಳ ಕಾಲ ಮನೆ, ಮಠವನ್ನು ಬಿಟ್ಟು ರೈತರು ರಸ್ತೆಯ ಮೇಲೆ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ, ಕಾರ್ಖಾನೆಯವರು ಎಷ್ಟು ಬೆಂಬಲ ಬೆಲೆಯನ್ನು ಸೂಚಿಸುತ್ತಾರೊ ಅದು ಪ್ರತಿಭಟನೆಯ ಸ್ಥಳಕ್ಕೆ ಬಂದು ನಿಗದಿ ಮಾಡಲಿ ಯಾವುದೇ ಮುಚ್ಚು ಮರೆ ಬೇಡ” ಎಂದು ಹೇಳಿದ್ದಾರೆ. ಈ ಹಿಂದೆಯೂ ಕೂಡಾ ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ನೀಡಬೇಕು ಎಂದು ಪ್ರಸ್ತಾಪಿಸಿದ್ದರು.
ಸಮಾಚಾರ.ಕಾಮ್ನೊಂದಿಗೆ ಮಾತನಾಡಿದ ರೈತ ಮುಖಂಡ ಬಡಗಲಪುರ ನಾಗೇಂದ್ರ ಅವರು, “ಕಬ್ಬು ಬೆಳೆಗಾರರ ಹೋರಾಟ ನ್ಯಾಯಯುತವಾಗಿದೆ. ಸ್ವಾಮಿನಾಥನ್ ಆಯೋಗದ ವರದಿ ಪ್ರಕಾರ ರೈತರಿಗೆ ₹4,500/ಟನ್ ಸಿಗಬೇಕು ಆದರೆ ನಾವು ₹3,500 ಮಾತ್ರ ಕೇಳುತ್ತಿದ್ದೇವೆ. ಕೇಂದ್ರ ಸರ್ಕಾರ ಎಫ್ಆರ್ಪಿ ಅನ್ನು 10.25% ರಿಕವರಿ ದರದ ಮೇಲೆ ಲೆಕ್ಕ ಹಾಕುತ್ತಿದೆ ಆದರೆ 9.5% ರಿಕವರಿಯಲ್ಲೇ ಲಾಭದಾಯಕ ಬೆಲೆ ಸಿಗುತ್ತದೆ ಎಂದರು.
ಜೊತೆಗೆ, ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಎಥನಾಲ್ ಉತ್ಪಾದನೆಗೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ನೀಡಬೇಕು. ಸಕ್ಕರೆಯ ಕಮರ್ಷಿಯಲ್ ಮಾರಾಟ ಮತ್ತು ಗ್ರಾಹಕ ಬಳಕೆಗೆ ಬೇರೆ ಬೇರೆ ದರ ನಿಗದಿಪಡಿಸಿ ಗೆಜೆಟ್ ಅಧಿಸೂಚನೆ ಹೊರಡಿಸಬೇಕು. ರಾಜ್ಯ ಸರ್ಕಾರ ಕಾರ್ಖಾನೆ ಮಾಲೀಕರೊಂದಿಗೆ ಮಾತುಕತೆ ನಡೆಸಿ ರೈತರಿಗೆ ಹೆಚ್ಚಿನ ಬೆಲೆ ಮತ್ತು ಸಹಾಯಧನ ಒದಗಿಸಬೇಕು” ಎಂದು ಒತ್ತಾಯಿಸಿದ್ದಾರೆ.
2024-25ನೇ ಸಾಲಿನಲ್ಲಿ ರಾಜ್ಯವು 522 ಲಕ್ಷ ಮೆಟ್ರಿಕ್ ಟನ್ ಕಬ್ಬು ಉತ್ಪಾದಿಸಿದೆ. ಆದರೆ ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ (MSP) 2019ರಿಂದಲೇ ₹31/ಕೆ.ಜಿ.ನಲ್ಲೇ ಉಳಿದಿದೆ. ರಾಜ್ಯದ ಎಥನಾಲ್ ಉತ್ಪಾದನಾ ಸಾಮರ್ಥ್ಯ 270 ಕೋಟಿ ಲೀಟರ್ ಇದ್ದರೂ ಕೇವಲ 47 ಕೋಟಿ ಲೀಟರ್ (17.4%) ಮಾತ್ರ ಅನುಮತಿಸಲಾಗಿದೆ. ಗುಜರಾತ್ಗೆ 77.5% ಅನುಮತಿ ನೀಡುವಂತೆ ಕರ್ನಾಟಕಕ್ಕೂ ನ್ಯಾಯ ದೊರಕಬೇಕು ಎಂಬುದು ರೈತರ ಆಕ್ರೋಶಕ್ಕೆ ಮತ್ತೊಂದು ಕಾರಣ.
ಸಿದ್ದರಾಮಯ್ಯ ಮೋದಿಗೆ ಪತ್ರ:
ಗುರುವಾರದ ಮಂತ್ರಿಮಂಡಲ ಸಭೆಯಲ್ಲಿ ಈ ವಿಷಯ ಚರ್ಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ₹3,500 ನೆಟ್ ಬೆಲೆ ಖಾತ್ರಿ, ರಿಕವರಿ ದರಕ್ಕೆ ಲಿಂಕ್ ಮಾಡಿ ಎಫ್ಆರ್ಪಿ ಪರಿಷ್ಕರಣೆ, ಸಕ್ಕರೆ MSPಯನ್ನು ₹31ಕ್ಕಿಂತ ಹೆಚ್ಚಿಸುವುದು, ರಫ್ತು ಜನೆಲೆ ಒದಗಿಸುವುದು, ಎಥನಾಲ್ ಹಂಚಿಕೆಯನ್ನು ಹೆಚ್ಚಿಸುವುದು, ಡಿಜಿಟಲ್ ತೂಕ ಮಾಪನದ ಮೂಲಕ ಪಾವತಿ ಸುಧಾರಣೆ ಮತ್ತು ತಕ್ಷಣದ ಉನ್ನತ ಮಟ್ಟದ ಸಭೆಯನ್ನು ಕೋರಲಾಗಿದೆ. “ರೈತರ ಜೀವನ, ಗ್ರಾಮೀಣ ಆರ್ಥಿಕತೆ ಮತ್ತು ಸಕ್ಕರೆ ಮೌಲ್ಯ ಸರಣಿಯನ್ನು ರಕ್ಷಿಸಿ” ಎಂದು ಒತ್ತಾಯಿಸಲಾಗಿದೆ.
ಆಂದೋಲನದಿಂದ ಬೆಳಗಾವಿ ಬಂದ್ ಘೋಷಿಸಲಾಗಿದ್ದು, ರಸ್ತೆ ತಡೆಯಿಂದ ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡಿದೆ. ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರ ಕಾರಿಗೆ ಚಪ್ಪಲಿ ಎಸೆಯಲಾಗಿದೆ. ರೈತರು “ಬೇಡಿಕೆ ಈಡೇರದಿದ್ದರೆ ಆಂದೋಲನ ತೀವ್ರಗೊಳ್ಳುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರ ರೈತರು ಮತ್ತು ಕಾರ್ಖಾನೆ ಮಾಲೀಕರೊಂದಿಗೆ ಹಲವು ಸಭೆಗಳನ್ನು ನಡೆಸಿದ್ದು, ಬೆಳಗಾವಿಯಲ್ಲಿ ಡಿಸಿ ಸಲಹೆ ಮೇರೆಗೆ 11.25% ರಿಕವರಿಗೆ ₹3,200 ಮತ್ತು 10.25%ಗೆ ₹3,100 ನೀಡುವಂತೆ ಸೂಚಿಸಲಾಗಿದೆ. ಡಿಜಿಟಲ್ ತೂಕ ಮಾಪನದ ಮೂಲಕ ಪಾವತಿ ಸುಗಮಗೊಳಿಸಲಾಗುತ್ತಿದೆ. ಇಂದು (ನವೆಂಬರ್ 7) ಬೆಂಗಳೂರಿನಲ್ಲಿ ರೈತರು ಮತ್ತು ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಯಲಿದ್ದು, ಸಚಿವರಾದ ಎಚ್.ಕೆ. ಪಾಟೀಲ್ ಮತ್ತು ಎಂ.ಬಿ. ಪಾಟೀಲ್ ಅವರು ಜಿಲ್ಲೆಗಳನ್ನು ಸಂಪರ್ಕಿಸುತ್ತಿದ್ದಾರೆ. ಮುಖ್ಯಮಂತ್ರಿ ರೈತರನ್ನು ಆಂದೋಲನ ಬಿಟ್ಟು ಸಭೆಗೆ ಬರಲು ಮನವೊಲಿಕೆ ಮಾಡಿದ್ದಾರೆ.
ಇದನ್ನೂ ಓದಿ | ಬೆಳೆ ಪರಿಹಾರ | ರೈತರ ಮೂಗಿಗೆ ತುಪ್ಪ: ರೈತ ಮುಖಂಡರ ಆಕ್ರೋಶ
ರಾಜಕೀಯವಾಗಿ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರನ್ನು “ರೈತರನ್ನು ದಾರಿ ತಪ್ಪಿಸಿ ರಾಜಕೀಯ ಮಾಡುತ್ತಿದ್ದಾರೆ” ಎಂದು ಆರೋಪಿಸಿದರೆ, ವಿರೋಧಪಕ್ಷ ನಾಯಕ ಆರ್. ಅಶೋಕ ಅವರು “ಕಾಂಗ್ರೆಸ್ ಸರ್ಕಾರ ₹500 ಸಬ್ಸಿಡಿ ನೀಡಿ ಬೆಲೆ ನಿಗದಿಪಡಿಸಲಿ” ಎಂದು ಟೀಕಿಸಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು “ಸ್ಥಳೀಯ ಮಟ್ಟದಲ್ಲಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಿ” ಎಂದು ಸಲಹೆ ನೀಡಿದ್ದಾರೆ.
ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರದ ತಕ್ಷಣದ ಹಸ್ತಕ್ಷೇಪ ಅಗತ್ಯವಿದೆ. ಸಿದ್ದರಾಮಯ್ಯ ಅವರ ಪತ್ರವು ರೈತರ ಧ್ವನಿಯನ್ನು ದೆಹಲಿಗೆ ತಲುಪಿಸಿದ್ದು, ನೀತಿ ಸುಧಾರಣೆಯ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ರಕ್ಷಿಸಬೇಕು. ರೈತರ ಪ್ರತಿಭಟನೆಗಳು ರಾಜಕೀಯಕ್ಕಿಂತ ರೈತರ ಹಕ್ಕುಗಳಿಗಾಗಿ ನಡೆಯುತ್ತಿದೆ ಎಂದು ಸ್ಪಷ್ಟವಾಗಿದೆ. ಪರಿಹಾರ ದೊರೆತರೆ ಈ ಸಂಕಷ್ಟ ಕರ್ನಾಟಕದ ಸಕ್ಕರೆ ಉದ್ಯಮಕ್ಕೆ ಹೊಸ ಜೀವ ತುಂಬಬಲ್ಲದು.







